ದೀಪ್ತಿ ಭದ್ರಾವತಿ
ಒಲುಮೆಯ ಕವಿ ಬಳಿ ಬಂದ
ಕುತ್ತಿಗೆ ಬಳಸಿ ಕೇಳಿದಳು ಚೈತ್ರೆ
“ತಂದಿಯೇನು ನಾ ಕೇಳಿದ ಕವಿತೆ!?”
ಆತ ನಸುನಕ್ಕು ಬೆರಳ ಸೋಕಿ ಸುಮ್ಮನೆ ನಿಂತ
ಅವನ ಜೇಬು ತಡಕಿದಳು
ಸಿಕ್ಕ ಕಾಗದದ ಚೂರು, ಹಳೆಯ ಪೆನ್ನು
ಎದೆಗೊತ್ತಿ ಮತ್ತೆ ಕೇಳಿದಳು
“ಎಲ್ಲಿ ನನ್ನ ಕವಿತೆ”?
ಅವ ಮಂದಹಾಸದ ಚಾಮರದೊಳಗೆ
ಅಧರ ಅದ್ದುತ್ತ ಹೇಳಿದ
“ಹುಡುಕಿ ನೋಡು ಒಮ್ಮೆ ನನ್ನೊಳಗೆ”
ಚೈತ್ರೆ ಅಲೆಯಲೆಯಾಗಿ ಅಲೆಯತೊಡಗಿ:
ಕಣ್ಣು, ಕಿವಿ ನರನಾಡಿ
ಊರೂರುಗಳ ಗಲ್ಲಿ ಗಲ್ಲಿ
ಅಲ್ಲೋಲ ಕಲ್ಲೋಲ
ಹಸಿರು ಕಣ್ಣಿನ ಸಂತೆಯಲ್ಲಿ
ಜೇನಿನ ಭರಪೂರ ಮಾರಾಟ
ಹತ್ತಿ ಇಳಿದ ಮೆಟ್ಟಲಲ್ಲಿ
ಮಧುನಲೆಗಳ ಮುತ್ತಿ ಅರಳಿತು
ಮುದ್ದು ಲಿಲ್ಲಿ ಹೂ
ಬಿಸಿಲು ಮೈ ಬಿರಿದು ನಕ್ಕಿತು!
ಶಾಖಾಹಾರಿ ಅಂತ:ಪುರದಲಿ
ತಂಪು ಐಸ್ ಕ್ರೀಮಿನ ಸಮುದ್ರ ತೇಲಿ
ಮೊಗ್ಗೆ ಮಲ್ಲಿಗೆ ಉಕ್ಕಿತು
ಸೊಕ್ಕಿ ತೊನೆದ ವಸಂತ
ಚಿಗುರು ಚೈತ್ರೆಯ ಒದ್ದೆ ಕೂದಲ ನೇವರಿಸಿ
ಕೇಳಿದ “ಸಿಕ್ಕಿತೇ ಕವಿತೆ..?”
ಬಾನ ಜೇನಿನಲಿ ಮಿಂದ ಚೈತ್ರೆ
ಅವನ ಗುಂಗುರು ನೇವರಿಸಿ
ಹೇಳಿದಳು “ಸಿಕ್ಕುವುದೇ ಬೇಡ ಕವಿತೆ”
ಚನಾಗಿದೆ ಮೇಡಮ್..
ಚೆನ್ನಾದ ಕವಿತೆ
ಖುಷಿ ಆಯ್ತು ದೀಪ್ತಿ. ಒಳ್ಳೆಯ ಕವಿತೆ