ಸ್ಮಿತಾ ವೈ ಬಿ
ನನ್ನ ವಸ್ತ್ರ ಕದ್ದು ಓಡುತ್ತಿದ್ದ ಕೃಷ್ಣನಾತ
ತಾಳ್ಮೆ ಕಮ್ಮಿ ,ಹುಚ್ಚು ಧೈರ್ಯ ಮಾತ್ರ
ಈಗ,
ದ್ರೌಪದಿಗೆ ಸೀರೆಯ ಮೇಲೆ ಸೀರೆ ಒದಗಿಸಿದನಂತೆ
ಹೌದೇ…!?
ಅವನ ಕೊಳಲ ಒಳಗೆ ನುಸುಳಿ
ಉಸಿರ ಬಿಸಿಗೆ ಕರಗಿ
ಬೆರಳು ಸೋಕಿದಲ್ಲಿ ಅರಳಿ
ನಾದವಾಗಿ ಹೊಮ್ಮುತಿದ್ದೆ
ಈಗ,
ಬರೀ ಶಂಖವನ್ನೇ ಊದುತಿರುವನಂತೆ
ಹೌದೇ..!?
ಇಷ್ಟವಾಗುತಿತ್ತು ಆತ ಕೊಡುವ ಹುಸಿಕಾಟ
ಮರದ ಮೇಲೂ ನಡೆಯುತಿತ್ತು ಪ್ರೀತಿಪಾಠ
ಕೊಳಲ ಕದಿವ ಮುನಿಸು, ಜಡೆ ಎಳೆವ ಕೀಟಲೆ
ಈಗ,
ಹದಿನಾರು ಸಾವಿರದ ಮೇಲೆ
ಎಂಟು ಹೆಂಡಿರ ಗಂಡನಂತೆ
ಎಳೆದು ಜಗ್ಗಾಡುತಿರುವರಂತೆ
ಕಂಗೆಟ್ಟಿದ್ದರೂ, ಗೀತೆ ಭೋಧಿಸುತಿರುವನಂತೆ
ಹೌದೇ…!?
ಎಷ್ಟು ಚಂದ ಬರಿದಿಯವ್ವ
ಚೆನ್ನಾಗಿದೆ
ಹೌದು… ಕೃಷ್ಣ ಬದಲಾಗಿದ್ದಾನೆ…ಚೆಂದದ ಕವಿತೆ…