ರಾಜೇಶ್ವರಿ ಹುಲ್ಲೇನಹಳ್ಳಿ
ಅದೊಂದು ಸಂಜೆ ಒಂದು ಏಕ ವ್ಯಕ್ತಿ ನಾಟಕ ಪ್ರದರ್ಶನ. ನವ್ಯಾಸಿ. ಅಕ್ಷತಾ ಪಾಂಡವಪುರವರ “ಲೀಕೌಟ್” ಕೃತಿಯ ಅಭಿನಯ ಪ್ರದರ್ಶನ. ಪ್ರೇಕ್ಷಕರೆಲ್ಲರನ್ನೂ ಸುತ್ತಲೂ ಕೂರಿಸಿ ಅಭಿನೇತ್ರಿ ಕೃತಿಯ ಕರ್ತೃ ಅಕ್ಷತಾ ಪಾಂಡವಪುರ ಎಲ್ಲರೂ ತನ್ನ ಜೊತೆಜೊತೆಗೆ ಪಾತ್ರಧಾರಿಗಳಾಗಬೇಕೆಂದು ಭಿನ್ನವಿಸಿಕೊಂಡಾಗ ಎಲ್ಲರೂ ಇದೇನು ಹೊಸ ಪರಿ ಹೇಗಿರಬಹುದು?ನಮ್ಮನ್ನು ಹೇಗೆ ತೊಡಗಿಸಿಕೊಳ್ಳುವರೆಂಬ ಕುತೂಹಲ ಹಾಗೂ ತುಸು ಅಂಜಿಕೆಯಿಂದಲೇ ಸಮ್ಮತಿಸಿ ಮೌನವಾಗಿ ಕುಳಿತರು. ಕಥಾ ನಾಯಕಿಯ ಸೂಚನೆಯಂತೆ ಎಲ್ಲ ದೀಪಗಳನ್ನು ಆರಿಸಿದಾಗ ಇಡೀ ಸಭಾಂಗಣದಲ್ಲಿ ಕತ್ತಲಾವರಿಸಿತು. ನಂತರ ಸಣ್ಣದೊಂದು ಬೆಳಕು ಅತ್ತಿತ್ತ ಆಡಲಾರಂಭಿಸಿ ಅದೊಂದು ಕತ್ತಲು ಬೆಳಕಿನಾಟದಂತೆ ಭಾಸವಾಯ್ತು ಸೂಜಿ ಬಿದ್ದರೂ ಕೇಳುವಂತಹ ನಿಶ್ಯಬ್ಧ ನೀರವ ಮೌನ!
ಎಲ್ಲರ ಕಣ್ಣುಗಳೂ ಏನೋ ನಿರೀಕ್ಷೆಯಲ್ಲಿ ಅತ್ತಿತ್ತ ಆಡುವ ಮಂದ ಬೆಳಕನ್ನೇ ಹಿಂಬಾಲಿಸುತ್ತಿದ್ದವು. ನಡುವೆ ಒಂದು ಸ್ಜ್ರೀನ್ ಅದಕ್ಕೊಂದಿಷ್ಟು ಬಣ್ಣಗಳ ಬಟ್ಟೆಯ ಪರದೆ ಹಸಿರು ಕಪ್ಪು ಹೀಗೆ. ಪರದೆಯ ಹಿಂದೆ ನಿಂತಿದ್ದ ಕಥಾನಾಯಕಿ ಕಪ್ಪನೆಯ ಪರದೆಯನ್ನು ಹರಿದು ತನ್ನ ಮುಖವನ್ನು ಹೊರ ಹಾಕಿ ಒಬ್ಬೊಬ್ಬರನ್ನೇ ಕರೆದು ಒಂದೊಂದೇ ಪರಿಕರಗಳನ್ನು ಕೊಟ್ಟಳು. ಮೊದಲಿಗೆ ಒಂದು ಹರಿದ ಸೀರೆಯ ತುಂಡನ್ನು ಪುರುಷಬ್ಬರನ್ನು ಕರೆದು ಕೊಟ್ಟು ಅದನ್ನು ಮಡಿಸುವಂತೆ ಹೇಳಿದಾಗ ಗಂಡಸರು ಮುಜುಗರದಿಂದ ಹೇಗೋ ಮಡಿಸಿದರು. ಹಲವಾರು ಮಂದಿಗೆ ಹಲವಾರು ರೀತಿಯ ಪರಿಕರಗಳನ್ನು ಕೊಟ್ಟು ಪ್ರೇಕ್ಷಕರಿಗೆ ಕೆಲವು ಪ್ರಶ್ನೆಗಳನ್ನು ಕೇಳಿ ಸರಿಯುತ್ತರಕ್ಕೆ ಒಂದೊಂದು ಚಾಕಲೇಟ್ ನೀಡಿದರು.
ಮೊದಲಿಗೆ ನೀಡಿದ ಸೀರೆಯ ತುಂಡು ಇಡೀ ಕಥೆಯ ನಾಟಕದ ವಸ್ತುವಿನ ಮೂಲಾಧಾರವಾಗಿ ಆ ಸೀರೆಯ ತುಂಡಿನ ಸುತ್ತಲೇ ಅದರ ಉಪಯೋಗದ ಹತ್ತಾರು ರೂಪಗಳ ಅನಾವರಣ ಮಾಡಿ ಪ್ರೇಕ್ಷಕರಿಂದಲೇ ಹೇಳಿಸಿ, ಮಂಜುಳ, ಕಮಲಮ್ಮ, ಅನು, ರಂಜು, ಹೀಗೆ ಎಲ್ಲ ಪಾತ್ರಗಳನ್ನು ತಾನೊಬ್ಬಳೇ ಜೀವಂತವಾಗಿಸಿದ್ದು ವಿಶೇಷ. ಇಡೀ ಸಮಾಜ ಹೆಣ್ಣನ್ನು, ಹೆಣ್ತನವನ್ನು ನೋಡುವ ಪರಿ ಅವಳಿಗೆ ನೀಡಿದ ಪರೋಕ್ಷ ಹಿಂಸೆ, ಸಂಶಯ, ಅನುಮಾನ, ಅವಮಾನ, ಉಪೇಕ್ಷೆ, ತಿರಸ್ಕಾರಗಳನ್ನು ಪ್ರೇಕ್ಷಕರ ಕಣ್ಣಮುಂದೆ ತರಿಸಿ ಸಮಾಜ ಇಡೀ ಹೆಣ್ಣಿನ ಜನುಮಕ್ಕಷ್ಟೇ ಅಂಟಿಸಿರುವ ಪದ್ದತಿ, ಸಂಸ್ಕ್ರತಿ, ಸಂಪ್ರದಾಯದ ಹೆಸರಿನ ಹಲವಾರು ಮಜಲುಗಳನ್ನು ಎಳೆ ಎಳೆಯಾಗಿ ಹುಟ್ಟಿದಾಗಿನಿಂದ ಸಾವಿನವರೆಗೆ ಹೆಣ್ಣು ತಲೆ ತಗ್ಗಿಸಿಯೇ ಮಾಡಬಹುದಾದ ಕೆಲಸಗಳಿಗೆ ಸೀಮಿತಗೊಳಿಸಿದ ಅನಿವಾರ್ಯತೆಯನ್ನು ಪರಿ ಪರಿಯಾಗಿ ಪ್ರದರ್ಶಿಸುವಲ್ಲಿ ಸಫಲರಾಗಿ ಗೊಡ್ಡು ಸಂಪ್ರದಾಯಗಳಿಗೆ ತಲೆಯೊಡ್ಡಿ ಬಲಿಗೆ ತಲೆಯೊಡ್ಡಿದ ಕುರಿಯಂತೆ ಅಲುಗಾಡಬೇಕೆಂದರೂ ಅಲುಗದಂತೆ, ದನಿಯೆತ್ತಬೇಕೆಂದರೂ ದನಿಯೆತ್ತದಂತೆ ಸೊಲ್ಲಡಗಿಸಿ ಶತಮಾನಗಳ ಹಿಂದಿನಿಂದಲೂ ನಡೆದ ಶೋಷಣೆಯ ಕುಣಿಕೆಗೆ ತಮಗೇ ಅರಿವಿರದಂತೆ ಗೋಣೊಡ್ಡುವ ಪರಿಯನ್ನು ಸೂಕ್ಷ್ಮಾತಿ ಸೂಕ್ಷ್ಮವಾಗಿ ಬಿಂಬಿಸಿದ್ದು, ಇಡೀ ಪ್ರೇಕ್ಷಕರನ್ನು ತನ್ನೊಂದಿಗೆ ಅಭಿನಯದಲ್ಲಿ ತೊಡಗಿಸಿಕೊಂಡಿದ್ದು, ಅವರವರ ಮನದಾಳದ ಭಾವಗಳನ್ನು ಥಟ್ಟನೆ “ಲೀಕೌಟ್”. ಮಾಡಿ ಭಾವುಕರಾಗುವಂತೆ ಮಾಡಿದ ಅಕ್ಷತಾ ಪಾಂಡವಪುರ ಅವರ ಜಾಣ್ಮೆ ಕೌಶಲ್ಯ ಶ್ಲಾಘನೀಯ. ಅವರೊಂದಿಗೆ ನಮ್ಮನ್ನೂ ವಶೀಕರಣ ಮಾಡಿಕೊಂಡಂತೆ ಪಾತ್ರಗಳಲ್ಲಿ ತೊಡಗಿಸಿ ನಮ್ಮೆದೆಯ ಭಾವಗಳನ್ನು ಹೊರ ಹಾಕಿಸಿದ್ದು ಕೂಡ ವಿಸ್ಮಯವೇ ಸರಿ!.
ಇದೊಂದು ಸ್ತ್ರೀ ಪರ, ಸಮಾಜವಾದಿ, ಸ್ತ್ರೀ ಶೋಷಣೆಯ ವಿರುದ್ಧ ದನಿಯೆತ್ತಿ ಜನರ ಮನಸ್ಥಿತಿ. ಒಂದು ಸಮಾಜ ಸುಧಾರಣೆಯ ಹಾದಿಯತ್ತ ಸಾಗುವಂತೆ ಕಣ್ಣಂಚಿನಲ್ಲಿ ನೀರು ತುಂಬಿ ತಮ್ಮಮುಂದೆ ಹಿಂದೆಂದೋ ನಡೆದ ಘಟನೆಗಳನ್ನು ಮೆಲುಕು ಹಾಕಿ ಅದರ ತಪ್ಪು ಒಪ್ಪುಗಳನ್ನು ಪರಾಮರ್ಶಿಸುವಲ್ಲಿ ಸಾರ್ಥಕತೆಯನ್ನು ಪಡೆಯುವುದೆಂಬ ಭಾವದಲ್ಲಿ, ಅಕ್ಷತಾ ಪಾಂಡವವಪುರ ಹಾಗೂ ವಿನೂತನ ವಿಭಿನ್ನ ಕಾರ್ಯಕ್ರಮ ಆಯೋಜನೆ ಮಾಡಿದ ಜೇನುಗಿರಿ ಪತ್ರಿಕಾ ಸಂಪಾದಕರಾದ ನಮ್ಮ ಪ್ರಸನ್ನ (ಚಲಂ) ರವರಿಗೆ ಇದೋ ಎಲ್ಲ ಪ್ರೇಕ್ಷಕರ ಹಾಗೂ ನನ್ನ ವೈಯಕ್ತಿಕ ಹೃದಯ ಪೂರ್ವಕ ಧನ್ಯವಾದಗಳು.
0 ಪ್ರತಿಕ್ರಿಯೆಗಳು