ನೆಂಪೆ ದೇವರಾಜ್
ದಿವಂಗತ ಪೂರ್ಣಚಂದ್ರ ತೇಜಸ್ವಿಯವರ ಪತ್ನಿ ರಾಜೇಶ್ವರಿಯವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅಲ್ಪಕಾಲದ ಅನಾರೋಗ್ಯ ನಿಮಿತ್ತ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಮತಿ ರಾಜೇಶ್ವರಿಯವರು ತಮ್ಮ ಎಂಭತ್ತ ಮೂರನೆಯ ವಯಸ್ಸಿನಲ್ಲೂ ಅತ್ಯಂತ ಲವಲವಿಕೆಯಿಂದಿದ್ದರು. ಸುಸ್ಮಿತಾ ಮತ್ತು ಈಶಾನ್ಯೆ ಎಂಬ ಎರಡು ಹೆಣ್ಣು ಮಕ್ಕಳನ್ನು ರಾಜೇಶ್ವರಿಯವರು ಅಗಲಿದ್ದಾರೆ.
ರಾಜೇಶ್ವರಿಯವರು ಹೊರ ತಂದಿರುವ ‘ನನ್ನ ತೇಜಸ್ವಿ’ ಎಂಬ ಪುಸ್ತಕ ಅತ್ಯಂತ ಮೌಲಿಕವಾಗಿದ್ದು ಓದುಗರ ಗಮನ ಸೆಳೆದ ಬಹು ಮುಖ್ಯ ಕೃತಿಯಾಗಿಧೆ. ಪಾರ್ಥಿವ ಶರೀರವನ್ನು ಮೂಡಿಗೆರೆಯ ‘ನಿರುತ್ತರ’ ಕ್ಕೆ ಇಂದು ತರಲಾಗುತ್ತಿದ್ದು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ರಾಜೇಶ್ವರಿಯವರ ಇಚ್ಚೆಯಂತೆ ಅವರ ದೇಹವನ್ನು ಆಸ್ಪತ್ರೆಯೊಂದಕ್ಕೆ ದಾಮಾಡಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.
ಬೆಂಗಳೂರು ಮೂಲದ ದಿವಂಗತ ರಂಗಪ್ಪನವರ ಪುತ್ರಿಯಾಗಿರುವ ರಾಜೇಶ್ವರಿಯವರನ್ನು ಪೂರ್ಣಚಂದ್ರ ತೇಜಸ್ವಿಯವರು ಪ್ರೇಮ ವಿವಾಹವಾಗಿದ್ದರು. ಇವರ ಪ್ರೇಮ ವಿವಾಹಕ್ಕೆ ಕುವೆಂಫುರವರು ಸಂಪೂರ್ಣ ಸಹಮತಿಗಳಾಗಿದ್ದು ತಾವೆ ಸ್ವತಃ ಮುಂದೆ ನಿಂತು ವಿವಾಹ ಕಾರ್ಯಕ್ರಮವನ್ನು ನೆರವೇರಿಸಿದ್ದರು. ಮಂತ್ರ ಮಾಂಗಲ್ಯ ವಿವಾಹ ಸಂಹಿತೆಯನ್ನು ಆ ಕಾಲ ಘಟ್ಟದಲ್ಲಿ ತಂದ ಸಮಯದಲ್ಲಿ ಮೊಟ್ಟ ಮೊದಲ ಬಾರಿಗೆ ತೇಜಸ್ವಿ ಮತ್ತು ರಾಜೇಶ್ವರಿಯವರಿಗೆ ವಿವಾಹ ಸಂಹಿತೆಯನ್ನು ಭೋದಿಸಿದ್ದರು.
ಮೊದಲ ಮಂತ್ರ ಮಾಂಗಲ್ಯ ಅಂತರ್ಜಾತೀಯ ವಿವಾಹವಾದ ಸತಿಪತಿಗಳಾಗಿ ರಾಜೇಶ್ವರಿ ಮತ್ತು ತೇಜಸ್ವೀಯವರು ಹೊಸ ಪೀಳಿಗೆಯವರಿಗೆ ಆದರ್ಶಪ್ರಾಯರಾಗಿ ನಿಲ್ಲುತ್ತಾರೆ. ಅದೂ ಅಲ್ಲದೆ ಈ ಮದುವೆಯ ಬಹು ಮುಖ್ಯವಾದ ವಿಶೇಷವೆಂದರೆ ಶ್ರೀ ಕುವೆಂಪುರವರೆ ಸ್ವತಃ ತಮ್ಮ ಕೈ ಬರಹದ ಮೂಲಕ ಮದುವೆಯ ಕರೆಯೋಲೆಯನ್ನು ಬರೆದು ಹಂಚಿದ್ದರು. ಶ್ರೀ ಕುವೆಂಪುರವರ ಕೈ ಬರಹದ ತೇಜಸ್ವಿ ಮತ್ತು ರಾಜೇಶ್ವರಿಯವರ ಮದುವೆ ಪತ್ರಿಕೆಯ ಛಾಯಾಪ್ರತಿಯನ್ನು ನೀಡಲಾಗಿದೆ.
0 ಪ್ರತಿಕ್ರಿಯೆಗಳು