ಈಕ್ಷಿತಾ ಸತ್ಯನಾರಾಯಣ
ರಾಜೇಶ್ವರಿ ಮೇಡಂ ಪರಿಚಿತ ವಲಯಕ್ಕೆ ಸೇರಿದ್ದು ನನ್ನ ಬದುಕಿನ ಮಹತ್ವದ ಘಟನೆಗಳಲ್ಲಿ ಒಂದು. ತೇಜಸ್ವಿ ನಿಧನಾನಂತರ ಪ್ರಕಟವಾದ ಹೊಸ ವಿಚಾರಗಳು ಪುಸ್ತಕಕ್ಕೆ ಅಡಿಯೊ ವಿಡಿಯೊ ರೂಪದಲ್ಲಿದ್ದ ಕೆಲವು ಭಾಷಣಗಳನ್ನು ಸಂದರ್ಶನಗಳನ್ನು ಬರೆಹರೂಪಕ್ಕಿಳಿಸುವ ಕೆಲಸವನ್ನು ಪುಸ್ತಕ ಪ್ರಕಾಶನದ ಪ್ರೊ. ಶ್ರೀರಾಂ ಸರ್ ಮತ್ತು ರಾಜೇಶ್ವರಿ ಮೇಡಂ ನನಗೆ ವಹಿಸಿದ್ದರು. ಕೆಲಸವೆಲ್ಲಾ ಮುಗಿದ ಮೇಲೆ ನನಗೊಂದು ಗೌರವಧನದ ಚೆಕ್ಕನ್ನು ಕಳುಹಿಸಿದ್ದರು.
ಸಾಹಿತ್ಯಕ ಕೆಲಸಕ್ಕಾಗಿ ನಾನು ಪಡೆದ ಮೊದಲ ಗೌರವಧನ ಅದಾಗಿತ್ತು! ಅದನ್ನು ಅವರ ಗಮನ್ಕಕೆ ತಂದಾಗ, ʻಕೆಲಸ ಮಾಡಿದವರಿಗೆ ಅವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಲೇಬೇಕು. ಅದು ತೇಜಸ್ವಿಯವರ ಕಟ್ಟುನಿಟ್ಟಿನ ನಿಲುವಾಗಿತ್ತುʼ ಎಂದಿದ್ದರು. ನನ್ನ ತೇಜಸ್ವಿ ಪುಸ್ತಕ ಎರಡನೆಯ ಮುದ್ರಣಕ್ಕೆ ಸಿದ್ಧವಾಗುತ್ತಿದ್ದಾಗ, ಮತ್ತೊಮ್ಮೆ ಅದರ ಪ್ರೂಫ್ ನೋಡುವ ಅವಕಾಶ ಕೊಟ್ಟಿದ್ದರು. ಅಲಿಗೆ ಪುಟ್ಟಯ್ಯನಾಯಕರ ಬಗ್ಗೆ ಪುಸ್ತಕ ಮಾಡಿದಾಗಲೂ, ತೇಜಸ್ವಿಯವರ ಕೆಲವು ಪತ್ರಗಳನ್ನು ಕೊಟ್ಟಿದ್ದಲ್ಲದೆ, ಲೇಖನವನ್ನೂ ಬರೆದುಕೊಟ್ಟಿದ್ದರು. ಅವರ ಪುಸ್ತಕ ಪ್ರಕಟವಾದಾಗ ಕಳುಹಿಸಿ, ಕರೆ ಮಾಡುತ್ತಿದ್ದರು.
ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾಗುವ ಮೊದಲೇ, ನನ್ನ ‘ನನ್ನಹೈಸ್ಕೂಲು ದಿನಗಳುʼ ಪುಸ್ತಕವನ್ನು ಓದಿ ಕರೆ ಮಾಡಿ ಮಾತನಾಡಿ ಅಭಿನಂದಿಸಿದ್ದರು. ನಾವು ಮೂಡಿಗೆರೆ ಹೋದಾಗಲೆಲ್ಲಾ ಬಹುತೇಕ ಅವರನ್ನು ಭೇಟಿ ಮಾಡಿ ಬಂದಿದ್ದೇವೆ. ಮನೆಗೆ ಬರುತ್ತೇವೆ ಎಂದಾಗ ಬನ್ನಿ ಎಂದು ಸಂತೋಷದಿಂದ ತಿಂಡಿ ಕಾಫಿ ಕೊಟ್ಟು ಸತ್ಕರಿಸಿ ಸಾಹಿತ್ಯಕವಾಗಿ ಹಲವಾರು ವಿಚಾರಗಳನ್ನು ಮಾತನಾಡುತ್ತಿದ್ದರು. ಅವರ ಮಾತುಗಳನ್ನು ಕೇಳಿಸಿಕೊಳ್ಳುವುದೇ ಒಂದು ಮಹದಾನಂದ. ಮಾತನಾಡುತ್ತಿದ್ದ ವಿಷಯದ ಬಗ್ಗೆ ಅಷ್ಟೊಂದು ತನ್ಮಯತೆಯಿಂದ ಮಾತನಾಡುತ್ತಿದ್ದರು. ಇಂದು ಅವರಿಲ್ಲ. ಇನ್ನಷ್ಟು ದಿನ ಅವರು ನಮ್ಮೊಂದಿಗೆ ಇರಬೇಕಿತ್ತು ಅನ್ನಿಸುತ್ತದೆ. ಆದರೆ…
0 ಪ್ರತಿಕ್ರಿಯೆಗಳು