ಇದ್ದರೆ ಇರಬೇಕು ಇಂಥ ಅಣ್ಣ ಮಹಾಬಲ!
ರಾಘವೇಂದ್ರ ಬೆಟ್ಟಕೊಪ್ಪ
ಇದು ಅಕ್ಷರಶ: ಹೌದು. ಈ ಅಣ್ಣ ಕೇವಲ ಕುಟುಂಬಕ್ಕೆ ಮಾತ್ರ ಅಣ್ಣನಲ್ಲ, ಇಡೀ ಸಮಾಜಕ್ಕೆ, ಕನ್ನಡ, ಸಂಸ್ಕೃತ ಕ್ಷೇತ್ರಕ್ಕೆ, ಮುಖ್ಯವಾಗಿ ಯಕ್ಷಗಾನಕ್ಕೂ ಅಣ್ಣನಂತೆ ಇದ್ದರು. ನೋಡಲು ಗರ್ವಿಯಂತೆ ಕಂಡರೂ ಗರ್ವಿಯಲ್ಲ, ಸರಳರಂತೆ ಕಂಡರೂ ವಿಷಯಗಳ ಜ್ಞಾನ ಗಟ್ಟಿಯಾದದ್ದು, ಪ್ಯಾಂಟು ಹಾಕಿಕೊಂಡರೂ ಧಾರ್ಮಿಕ ಮಾಹಿತಿಯ ಖನಿ. ಯಾವುದೇ ಸಂದೇಹಕ್ಕೂ ನಿಖರ ಉತ್ತರ ಹೀಗೆ ಬಹುಮುಖಿ. ನೋಡಲು ಬಿಗು ಕಂಡರೂ ಆಪ್ತವಾಗಿದ್ದರು. ಬೈಯ್ಯವವರೂ ಅವರಂಥೆ ಬೈಯ್ಯಲಿ ಎಂಬಷ್ಟು ಸೊಗಸು ಅವರಾಗಿದ್ದರು.
ಅವರೇ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ರಾಗಿದ್ದ ಪ್ರೋ. ಎಂ.ಎ.ಹೆಗಡೆ ದಂಟ್ಕಲ್ ಅವರು. ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ, ಅವರ ಸಾಧನೆಯ ಗುರುತು ಹಸಿರಾಗಿದೆ.
ಅಂಥ ಅಣ್ಣನ ಕುರಿತು ಸ್ವತಃ ತಮ್ಮ ಬರೆದು ತಂದ ಕೃತಿ ‘ಅಣ್ಣ ಮಹಾಬಲ’. ಅಣ್ಣನ ಕುರಿತು ಬಿಡಿ ಬಿಡಿ ಬರಹಗಳ ಮೂಲಕ ಕೃತಿಯಲ್ಲಿ ಇಡಿಯಾಗಿ ವ್ಯಕ್ತಿತ್ವ ಕಟ್ಟಿಕೊಡುವ ಕೊಡುವ ಕೃತಿ ಇದಾಗಿದೆ ಎಂಬುದು ವಿಶೇಷವಾಗಿದೆ. ಬಹುಮುಖಿ ಸಾಧಕ ಅಣ್ಣನ ಕುರಿತಾದ ಕೃತಿ ಇದು.
‘ಅಣ್ಣ ಮಹಾಬಲ’ ಅನೇಕ ಕಾರಣಕ್ಕೆ ನಮಗೂ ಇಂಥ ಅಣ್ಣ ಇರಬೇಕಿತ್ತು ಎಂಬ ಅಸೂಯೆ ಬರುವಷ್ಟು ಕೃತಿ ಆಪ್ತವಾಗಿದೆ. ಆದರೆ, ಅವರು ಎಲ್ಲರನ್ನೂ ಬಿಟ್ಟು ವರ್ಷಗಳೇ ಆಗಿವೆ!.
ಎಂ.ಎ.ಹೆಗಡೆ ಅವರ ಜೀವನ ಸಾಧನೆ ಕುರಿತು ಸ್ವತಃ ಒಡಹುಟ್ಟಿದ, ಒಡನಾಡಿ ಸಹೋದರ ರಾಜಶೇಖರ ಹೆಗಡೆ ಜೋಗಿನ್ಮನೆ ಅವರ ‘ಅಣ್ಣ ಮಹಾಬಲ’ ಕೃತಿ ಅನೇಕ ಕಾರಣಕ್ಕೆ ಮಹತ್ವದ್ದು. ಮಹತ್ವವಾದದ್ದು ಕೂಡ.
ತೇಜು ಪ್ರಕಾಶನ ಪ್ರಕಟಿಸಿದ ಈ ಕೃತಿಯಲ್ಲಿ ಪ್ರೋ.ಎಂ.ಎ.ಹೆಗಡೆ ಅವರ ಕುರಿತು ಬಹು ಮುಖಿ ಮಾಹಿತಿಗಳಿವೆ. ಕೆ.ವಿ
ಅಕ್ಷರ ಅವರ ಮುನ್ನುಡಿ ಇದೆ. ಬೆನ್ನುಡಿಯಲ್ಲಿ ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ, ವಿದ್ವಾಂಸ ಶ್ರೀರಾಮ ಭಟ್, ಶತಾವಧಾನಿ ಆರ್.ಗಣೇಶರ ಮಾತಿದೆ.
ಅಘನಾಶಿನಿ ಮಡಿಲಲ್ಲಿ ಎಂಬ ಬರಹದೊಂದಿಗೆ ಆರಂಭವಾಗುವ ಈ ಅಣ್ಣ ಮಹಾಬಲದಲ್ಲಿ ಎಂ.ಎ.ಹೆಗಡೆ ಅವರ ಚಿಂತನಾ ವಿಸ್ತಾರ, ಕೆಲಸ ಮಾಡಿದ ಸಂಸ್ಕೃತ, ಕನ್ನಡ ಕ್ಷೇತ್ರ ಮಾಹಿತಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದಾಗಿನ ಓಡಾಟ, ಮಾಹಿತಿ, ರೂಪಕಗಳ ಸಿದ್ದಗೊಳಿಸುವಿಕೆಯಲ್ಲಿ ತೊಡಗಿಕೊಂಡ ರೀತಿ, ಯಕ್ಷಗಾನ ರಚನೆ, ತಾಳಮದ್ದಲೆ, ಯಕ್ಷಗಾನ ಸ್ವಾರಸ್ಯ ಪ್ರಸಂಗ ಹೀಗೆ ಬಹುವಿಧದಲ್ಲಿದೆ.
ಅವರ. ಬಾಲ್ಯ, ಓಡಾಟ, ಶಿಕ್ಷಣ, ಇರುವ, ನಡೆದುಕೊಳ್ಳುವ ರೀತಿ ಸೇರಿದಂತೆ ಆಪ್ತ ಬರಹಗಳು, ಸಂಭಾಷಣೆಗಳು ಇವೆ.
ಕೆರೇಕೈ ಕೃಷ್ಣ ಭಟ್ಟರ ಪ್ರೀತಿ, ಹೆಗಟೆ ಜೋಶಿ ಜೋಡಿ, ಕೋಟು ಇಲ್ಲದ ಉಪನ್ಯಾಸಕ, ಇಡಗುಂಜಿ ಮೇಳದ ಒಡನಾಟ, ಪೊಲೀಸ್ ಠಾಣೆಗೆ ಹೋದ ಲವಕುಶ ಯಕ್ಷಗಾನ ಪ್ರಸಂಗ ಸೇರಿದಂತೆ ಅನೇಕ ಸಂಗತಿಗಳ, ವೈವಿಧ್ಯತೆಗಳ ಅನಾವರಣ ಇಲ್ಲಿದೆ. ೧೬೦ ಪುಟದಲ್ಲಿ ೭೦ಕ್ಕೂ ಅಧಿಕ ಭಾಗಗಳಿವೆ.
ಬೆಂಗಳೂರಿನಲ್ಲಿ ಪತ್ರಿಕೋದ್ಯಮದಲ್ಲಿ ಇರುವ ಲೇಖಕ ಜೋಗಿನ್ಮನೆ ಅವರು ಅಣ್ಣನ ಕುರಿತು ಸಂಗ್ರಹಿಸಿ ಬರೆದ ಹಾಗೂ ಸಮಯದೊಳಗೆ ಓದುಗರ ಕೈಗೆ ಕೊಟ್ಟ ರೀತಿ ಓರಣವಾಗಿದೆ. ಕೃತಿಯ ಮುಖಪುಟ ಕೂಡ ಸೊಗಸಾಗಿ ಬಂದಿದೆ. ಅಪಾರ ಸಾಧಕರ ಜೀವನವನ್ನು ಆಪ್ತವಾಗಿ ಕಟ್ಟಿಕೊಟ್ಟಿದೆ.
ಹೆಗಡೆ ಅವರ ಪರಿಚಯವೂ ಇರದವರಿಗೂ ಇಂಥವರು ಇನ್ನೂ ಇರಬೇಕಿತ್ತು ಅನಿಸುವಂತೆ ಮಾಡುವಲ್ಲಿ ಈ ಕೃತಿ ಯಶಸ್ವಿ ಆಗಿದೆ.
ಅಣ್ಣ ಮಹಾಬಲ
ಎಂ.ಎ.ಹೆಗಡೆ ಜೀವನ ಭಾವನ ಸಾಧನ
ಲೇಖಕ: ರಾಜಶೇಖರ ಜೋಗಿನ್ಮನೆ
ಪ್ರಕಾಶನ: ತೇಜು ಪ್ರಕಾಶನ,
ಪುಟ: ೧೬೦+೪
ಬೆಲೆ: ೧೫೦
0 ಪ್ರತಿಕ್ರಿಯೆಗಳು