ರಹಮತ್‌ ತರೀಕೆರೆ ಕಂಡ ‘ಜೆರುಸಲೆಮಿನ ಗೋಡೆಗಳು’

ರಹಮತ್‌ ತರೀಕೆರೆ

ಜೆರುಸಲೆಂ ನಗರವನ್ನು ಪ್ರವೇಶಿಸುವಾಗ ಮುಸ್ಸಂಜೆ ಮುಗಿದು ಕತ್ತಲಾಗುತ್ತಿತ್ತು. ಪುಟ್ಟಪುಟ್ಟ ಬೆಟ್ಟಗಳ ಹೆಗಲ ಮೇಲೆ ನೆಲೆಸಿರುವ ಅದು, ದೀಪದ ಗೊಂಚಲನ್ನು ಹೊತ್ತುಕೊಂಡಂತೆ, ಒಮ್ಮೆ ಕಣಿವೆಯ ಮತ್ತೊಮ್ಮೆ ಕೋಡಿನ ಮಗ್ಗುಲುಗಳನ್ನು ತೋರುತ್ತ ಝಗಝಗಿಸುತ್ತಿತ್ತು. ಜಗತ್ತಿನ ಅತಿ ಪ್ರಾಚೀನವೂ ಚಾರಿತ್ರಿಕ ಮಹತ್ವವೂ ಇರುವ ನಗರವನ್ನು ಹಾಯುತ್ತಿರುವ ಅರಿವಿನಿಂದ ಮೈಗಣ್ಣನಾಗಿದ್ದ ನಾನು ಭಾವುಕನಾಗಿದ್ದೆ.

ಜೇರುಸಲೆಮ್, ಡಮಾಸ್ಕಸ್, ಮಕ್ಕಾ, ಕೈರೊ, ರೋಂ, ಇಸ್ತಾನ್‍ಬುಲ್, ಬಾಗ್ದಾದ್-ಎಲ್ಲವೂ ಕ್ರಿಸ್ತಪೂರ್ವ ಶತಮಾನಗಳಲ್ಲೇ ನಗರಗಳಾಗಿ ರೂಪುಗೊಂಡವು; ಅಧಿಕಾರ ಕೇಂದ್ರ, ವ್ಯಾಪಾರಿ ತಾಣ, ಧರ್ಮಕ್ಷೇತ್ರ ಮತ್ತು ಕಲೆಗಳ ಆಗರವಾಗಿ ಮೆರೆದಂತಹವು. ಜೆರುಸಲೆಮಿನ ಚರಿತ್ರೆ ಕ್ರಿಸ್ತಪೂರ್ವ 8ನೇ ಶತಮಾನಗಳಿಂದ ಶುರುವಾಗುತ್ತದೆ. ಜೆರುಸಲೆಂ ಪ್ರಾಚೀನತೆಯನ್ನು ಒಡವೆಯನ್ನಾಗಿ ಧರಿಸಿದ ನಾಗರಿಕತೆಯ ತಾಯಿಯಂತೆ, ಮನುಕುಲದ ಆದಿಮ ಚರಿತ್ರೆಯ ಪುಸ್ತಕವೊಂದರ ಕಳಚಿಬಿದ್ದ ಪುಟದಂತೆ ಭಾಸವಾಗುತ್ತದೆ. ಯಹೂದಿ-ಕ್ರೈಸ್ತ-ಇಸ್ಲಾಂಗಳು ಒಂದೇ ಪೌರಾಣಿಕ ಮೂಲದಿಂದ ಹುಟ್ಟಿದವು. ಇವನ್ನು ಅಬ್ರಾಹಂ/ಸೆಮೆಟಿಕ್ ಧರ್ಮಗಳು ಎನ್ನುವರು.

ಈ ಏಕದೇವತಾರಾಧಕ ಧರ್ಮಗಳು ಸಮಾನವಾಗಿ ಲೋಕಸೃಷ್ಟಿಯ ಕಥನವಾಗಿರುವ ಆಡಂ-ಈವರ ಮಿತ್ತನ್ನು ನಂಬುತ್ತವೆ. ಅಬ್ರಾಹಂ ಮೋಸೆಸ್ ಮುಂತಾದ ಪ್ರವಾದಿಗಳನ್ನು ನಂಬುತ್ತವೆ. ಕುರಾನ್ ಕೂಡ ಯಹೂದಿ-ಕ್ರೈಸ್ತರ ಪ್ರವಾದಿಗಳಾದ ಅಬ್ರಾಹಂ, ಇಸ್ಮಾಯಿಲ್, ಡೇವಿಡ್, ಮೋಸೆಸ್ ಜೋಸೆಫ್, ಏಸು ಮೊದಲಾದ ಪ್ರವಾದಿಗಳನ್ನು ಆದರದಿಂದ ಸ್ಮರಿಸುತ್ತದೆ. ಹೀಗಾಗಿಯೇ ಯಹೂದಿ-ಕ್ರೈಸ್ತರ ಪೌರಾಣಿಕ ವ್ಯಕ್ತಿಗಳ ಹೆಸರುಗಳು ಮುಸ್ಲಿಮರಲ್ಲಿ ರೂಪಾಂತರಗೊಂಡು ಬಳಕೆಯಲ್ಲಿವೆ: ಮೋಸೆಸ್-ಮೂಸಾ, ಡೇವಿಡ್-ದಾವೂದ್, ಡೇನಿಯಲ್-ದಾನೇಯಲ್, ಸಾಲೊಮನ್-ಸುಲೇಮಾನ್, ಐಸಾಕ್-ಇಸಾಕ್, ಜೇಕಬ್-ಯಾಕೂಬ್, ಜೋಸೆಫ್-ಯೂಸುಫ್, ಅಬ್ರಾಹಂ-ಇಬ್ರಾಹಿಂ, ಇಶ್ಮೇಲ್-ಇಸ್ಮಾಯಿಲ್, ಮೇರಿ-ಮರಿಯಂ, ಸಾರಾ-ಸಾರಾ ಹೀಗೆ.

ನಜರತ್‍ನಲ್ಲಿ ಕಟ್ಟಿದ ಒಂದು ಬ್ಯಾನರಿನಲ್ಲಿ ಹೀಗೆ ಬರೆದಿತ್ತು: ‘ನಾವು ಮುಸ್ಲಿಮರು ಅಲ್ಲಾಹನಲ್ಲಿ ವಿಶ್ವಾಸವಿಟ್ಟೆವು. ನಮಗೆ ದೇವರು ಕಳಿಸಿದ ಸಂದೇಶಗಳನ್ನು ಮಾತ್ರವಲ್ಲ, ಅಬ್ರಾಹಂ, ಇಸ್ಮಾಯಿಲ್, ಇಸಾಕ್, ಜೇಕಬ್, ಮೋಸೆಸ್ ಮತ್ತು ಈಸಾ ಮುಂತಾದ ಪ್ರವಾದಿಗಳಿಗೆ ದೇವರು ಕಳಿಸಿದ ಸಂದೇಶಗಳಲ್ಲಿಯೂ ವಿಶ್ವಾಸವಿಟ್ಟೆವು. ಇವರಲ್ಲಿ ತಾರತಮ್ಯ ಮಾಡೆವು’ (ಕುರಾನ್ 3-84). ಸೆಮೆಟಿಕ್ ಧರ್ಮಗಳಲ್ಲಿರುವ ಸಮಾನ ಸಂಗತಿಗಳನ್ನು ಸ್ಮರಿಸುವ ಇಂತಹ ಬ್ಯಾನರುಗಳ ಹಿಂದೆ ವರ್ತಮಾನದಲ್ಲಿರುವ ಗಾಢವಾದ ವಿಭಜನೆ ದ್ವೇಷಗಳನ್ನು ಮುಖಾಮುಖಿ ಮಾಡುವ ಯತ್ನವಿದ್ದಂತೆ ಕಂಡಿತು. ಜೆರುಸಲೇಂ ಸೆಮೆಟಿಕ್ ಧರ್ಮಗಳ ಕೂಡಲಸಂಗಮ.

ಮೂರೂ ಧರ್ಮಗಳ ಪುರಾಣ ಚರಿತ್ರೆಗಳೊಳಗೆ ಜೆರುಸಲೆಮಿನ ಉಲ್ಲೇಖಗಳಿವೆ. ಬೈಬಲ್ಲಿನ ಹಳೆಯ ಒಡಂಬಡಿಕೆಯು, ಜೆರುಸಲೇಮನ್ನು ಕೇಂದ್ರವಾಗಿಟ್ಟುಕೊಂಡು ಡೇವಿಡ್ ಸಾಲೊಮನ್ ದೊರೆಗಳು ಆಳಿದ ಕಥನ. ಯಹೂದಿಗಳು, ಡೇವಿಡ್ ಮತ್ತು ಸಾಲೊಮನ್ನರು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ನಗರವೆಂದೂ ಯೆಹೋವಾ ಹರಸಿಕೊಟ್ಟ ನಗರವೆಂದೂ ಜೆರುಸಲೆಮನ್ನು ನಂಬುವರು. ಅವರಿಗೆ ಪವಿತ್ರವಾಗಿರುವ ‘ಗೋಳಿನಗೋಡೆ’ ಹಾಗೂ ಪೂರ್ವಜರ ಸಮಾಧಿಗಳು ಇಲ್ಲಿವೆ; ಕ್ರೈಸ್ತರಿಗೆ ಏಸು ವಿಚಾರಣೆಗೊಳಗಾದ, ಸೆರೆವಾಸ ಮಾಡಿದ, ‘ಲಾಸ್ಟ್‍ಸಪ್ಪರ್’ ಪೂರೈಸಿದ, ಶಿಲುಬೆಗೇರಿದ ಮತ್ತು ಸಮಾಧಿಗೊಂಡ ಊರು. ಮಾತೆ ಮೇರಿಯ ಸಮಾಧಿಯೂ ಇಲ್ಲಿದೆ.

ಮುಸ್ಲಿಮರಿಗೆ ಪೈಗಂಬರ್ ಮಹಮದ್, ಹಿಂದಿನ ಪ್ರವಾದಿಗಳನ್ನು ಭೇಟಿಮಾಡಲು ಸ್ವರ್ಗಕ್ಕೆ ಹೋಗಿಬಂದ ಜಾಗವಿದು. ಜೆರುಸಲೇಮಿನಲ್ಲಿ ಮೂರೂ ಧರ್ಮದವರ ವಸತಿಗಳು ಒಟ್ಟಿಗಿವೆ. ನಗರದ ಯಾವುದೇ ಭಾಗದಲ್ಲಿ ನಿಂತು ಫೋಟೊ ತೆಗೆದರೆ, ಸಿನಗಾಗ್-ಚರ್ಚು-ಮಸೀದಿಗಳ ಶಿಖರಗಳು ಒಂದೇ ಫ್ರೇಮಿನೊಳಗೆ ಬರುತ್ತವೆ. ನಗರದ ಯಾವ ಕಡೆ ನಿಂತರೂ ಕಣ್ಕೋರೈಸುವ ಹೊನ್ನಹೊದಿಕೆಯ ಗುಮ್ಮಟವುಳ್ಳ ‘ಡೂಂ ಆಫ್ ರಾಕ್’ ಕಾಣುತ್ತದೆ. ಇದನ್ನು ಮೂರೂ ಧರ್ಮಗಳು ನಮ್ಮದೆಂದು ಭಾವಿಸುತ್ತವೆ.

ವರ್ಷವಿಡೀ ಮೂರೂ ಧರ್ಮಗಳ ಯಾತ್ರಾರ್ಥಿಗಳಿಂದ ತುಳುಕಾಡುವ ಜೆರುಸಲೆಂ ಮನೆಯನ್ನು ಹಂಚಿಕೊಂಡು ಬದುಕಲಾರದ ಮಕ್ಕಳ ಕಂಗೆಟ್ಟ ತಾಯಿಯಂತೆ ಗೋಚರಿಸುತ್ತದೆ. ಜೆರುಸಲೆಮನ್ನು ಹಳತು- ಹೊಸತು ಎಂದು ವಿಭಜಿಸಿ ಪ್ಯಾಲೆಸ್ತೈನಿಗೂ ಇಸ್ರೇಲಿಗೂ ಪಾಲು ಮಾಡಿಕೊಡಲಾಗಿದೆ. ಮೂಡಣ ದಿಕ್ಕಿನಲ್ಲಿರುವ ಭದ್ರಕೋಟೆಯೊಳಗೆ ನೆಲೆಸಿರುವ ಹಳೆನಗರದ ತುಂಬ ಮೋಹಕ ಕಟ್ಟಡಗಳಿವೆ. ಪಡುವಣ ಬೆಟ್ಟಗಳ ಹೆಗಲಮೇಲೆ ಬೆಳೆದಿರುವ ಹೊಸನಗರಲ್ಲಿ ಮೋಡಗಳನ್ನು ತೀಡುವ ಬಹುಅಂತಸ್ತಿನ ಉಪ್ಪರಿಗೆ ಕಟ್ಟಡಗಳು ಏಳುತ್ತಿವೆ. ಅಲ್ಲಿ ಇಸ್ರೇಲಿನ ಪಾರ್ಲಿಮೆಂಟು- ಮಂತ್ರಾಲಯಗಳಿವೆ.

ಹಳೆ-ಹೊಸ ನಗರಭಾಗಗಳು ಒಂದರೊಳಗೊಂದು ಸೇರಿಕೊಂಡಿವೆ- ಹಳೆಯ ಬೊಡ್ಡೆಗಳ ಮೇಲೆ ಹೊಸರೆಂಬೆಗಳನ್ನು ಹೊಮ್ಮಿಸುವ ಆಲಿವ್ ಗಿಡದಂತೆ. ಪ್ರಾಚೀನತೆ ಆಧುನಿಕತೆ ಬೆರೆತಿರುವ ಜೆರುಸಲೇಮ್ ಮೊಮ್ಮಕ್ಕಳ ಯೌವನವನ್ನು ಕಡವಾಗಿ ಪಡೆದು ಬದುಕುತ್ತಿರುವ ವೃದ್ಧನಂತೆ ತೋರುತ್ತದೆ. ನಾವು ಹೋಗಿದ್ದು ವಸಂತ ಋತುವಾದ ಕಾರಣ, ಹತ್ತಾರು ಬಣ್ಣದ ಹೂತೊಟ್ಟಿಗಳಿಂದ ಮನೆ, ಸರ್ಕಲ್ಲು, ಹೋಟೆಲುಗಳು ನಳನಳಿಸುತ್ತಿದ್ದವು. ಕೈದೋಟದಲ್ಲಿ ದ್ರಾಕ್ಷಿಬಳ್ಳಿ, ಆಲಿವ್ ಬಾದಾಮಿ ಅಂಜೂರದ ಗಿಡಗಳಿದ್ದವು. ಮದರಂಗಿ ಗಿಡವನ್ನು ಹೋಲುವ ಆಲಿವ್, ಅಡುವೆಣ್ಣೆ, ತಿನುವಣ್ಣು, ಸೇವಿಸುವ ಮದ್ದು, ಪೂಸುವ ಸುಗಂಧ-ಹಲವು ಜರೂರತ್ತಿಗೆ ಬೇಕಾದ ಪುಟ್ಟಗಿಡ. ಆಲಿವ್ ದ್ರಾಕ್ಷಿ ಖರ್ಜೂರಗಳು ಈ ಸೀಮೆಯ ಕಲ್ಪವೃಕ್ಷ-ಕಲ್ಪಲತೆಗಳು. ಬೆತ್ಲೆಹೆಮ್ಮಿನಲ್ಲಿ ನಾವು ವಸತಿ ಮಾಡಿದ ಹೋಟೆಲು ಸಹ ಆಲಿವ್‍ತೋಟದಲ್ಲಿತ್ತು.

ಕೆಲವು ಮನೆಗಳಲ್ಲಿ ರಟ್ಟೆಗಾತ್ರದ ಕಾಂಡವುಳ್ಳ ದ್ರಾಕ್ಷಿಬಳ್ಳಿಗಳಿದ್ದು, ಅವು ಅಂಗಳದ ಚಪ್ಪರಕ್ಕೆ ಹಬ್ಬಿ, ಹಿಂದಕ್ಕೂ ಮೇಲಕ್ಕೂ ಹರಡಿ, ಮನೆಗೆ ಹಸಿರುಪರದೆ ಹೊದಿಸಿದ್ದವು. ಜೆರುಸಲೆಂ-ಬೆತ್ಲೆಹೆಂ, ನಜ್ರತ್-ಹೆಬ್ರೊನ್ ನಗರಗಳ ಕಣಿವೆ ತುಂಬ ಆಲಿವ್- ದ್ರಾಕ್ಷಿ ತೋಟಗಳು. ದ್ರಾಕ್ಷಾರಸವು ಇಲ್ಲಿನ ಆಹಾರದ ಭಾಗ ಮಾತ್ರವಲ್ಲ, ಕ್ರೈಸ್ತ ಮತ್ತು ಯಹೂದಿಗಳ ಧಾರ್ಮಿಕ ಆಚರಣೆಯಲ್ಲಿ ಪೇಯ ಕೂಡ. ಜೆರುಸಲೆಮಿನಲ್ಲಿ ತಂಪುಹವೆ ಸದಾ ತೀಡುತ್ತಿರುತ್ತದೆ. ಚಳಿಗಾಲದಲ್ಲಿ ಹಿಮಸುರಿಯುತ್ತದೆ. ಇಲ್ಲಿಂದ ಸ್ವಲ್ಪವೇ ದೂರ ಹೋದರೆ ಹುಲ್ಲುಹುಟ್ಟದ ಬೋಳುಬೆಟ್ಟಗಳ ಸಿನಾಯ್ ಮರುಭೂಮಿ; ಯಾವ ಜೀವಿಯೂ ಬದುಕಲಾರದ ಮೃತಸಮುದ್ರ.

ಇವುಗಳ ನಡುವಿರುವ ಜೆರುಸಲೆಮಿನ ತಂಪುಹವೆ, ಪೈನ್‍ಕಾಡು, ಫಲವತ್ತಾದ ನೆಲೆ, ನೀರುಕ್ಕುವ ಚಿಲುಮೆ, ಪುಟ್ಟಹೊಳೆ, ವಿಶಾಲ ಕಣಿವೆ, ಹಸಿರುಹೊದ್ದ ಬೆಟ್ಟ, ದ್ರಾಕ್ಷಿ ಉತ್ತುತ್ತೆ ಬಾದಾಮಿ ತೋಟಗಳು ಅದನ್ನು ಸ್ವರ್ಗವಾಗಿಸಿವೆ. ಜೆರುಸಲೆಮಿನ ಚೆಲುವವನ್ನು ಕಲಾವಿದರು ಶಿಲ್ಪಿಗಳು ಕವಿಗಳು ತಮ್ಮ ಕೃತಿಗಳಲ್ಲಿ ಸೆರೆಹಿಡಿದಿದ್ದಾರೆ. ಭೌಗೋಳಿಕವಾಗಿ ಜೆರುಸಲೆಂ ಒಂದು ಸುಂದರ ನಗರಿ. ಭೂಮಂಡಲದ ಕೇಂದ್ರವೆಂದು ಕರೆಯಲ್ಪಡುವ ಜೆರುಸಲೆಂ, ಪ್ರಾಚೀನ ವಣಿಕ ಪಥಗಳು ಹಾದುಹೋಗುವ ನಗರ.

ಸಂಪತ್ತು ಸಂಚಯವಾಗುವ ನಗರಗಳು ರಾಜಕೀಯ ದಾಳಿಕೋರರನ್ನು ಸೆಳೆಯುತ್ತವೆ. ನಗರವನ್ನು ಕಾಯಲು ಬಲಾಢ್ಯ ಕೋಟೆ ರೂಪುಗೊಳ್ಳುತ್ತವೆ. ಜೆರುಸಲೇಮಿನ ಕೋಟೆಗೆ ಜಾಫಾ ಡಮಾಸ್ಕಸ್ ಹೆಸರುಳ್ಳ ದ್ವಾರಗಳಿವೆ. ಒಳಗೆ ಕಲ್ಲುಹಾಸಿನ ಓಣಿಗಳ ಬೀದಿಗಳಿವೆ. ಇದೊಂದು ವ್ಯವಸ್ಥಿತವಾಗಿ ಕಟ್ಟಲ್ಪಟ್ಟ ರೋಮನ್ ನಗರ. ನಗರಗಳ ದುರದೃಷ್ಟವೆಂದರೆ ಯುದ್ಧಗೆದ್ದವರ ಕೈಯಿಂದ ಕೈಗೆ ಹಸ್ತಾಂತರವಾಗುವುದು. ರೋಮನರು, ಅರಬ್ಬರು, ಪರ್ಶಿಯನರು, ಟರ್ಕಿಗಳು, ಬ್ರಿಟಿಶರು ಇದನ್ನು ಗೆದ್ದು ಕೆಡಹಿದರು-ಕಟ್ಟಿದರು.

ಸಹಸ್ರಾರು ವರ್ಷ ಹಲವಾರು ಜನಾಂಗಗಳ ಆಳಿಕೆಯಲ್ಲಿ ರೂಪುಗೊಂಡ ಜೆರುಸಲೆಂ, ತನ್ನ ಭಗ್ನಾವಶೇಷಗಳಿಂದಲೇ ಮರುಜನ್ಮ ಪಡೆಯುತ್ತ ಬಂದಿರುವ ಫೀನಿಕ್ಸ್ ಹಕ್ಕಿಯಂತಿದೆ.ಜೆರುಸಲೆಂ ಹೊಟ್ಟೆಯಲ್ಲಿ ಪದರಪದರವಾಗಿ ಹುದುಗಿರುವ ಯುದ್ಧ-ಆಕ್ರಮಣಗಳ ಈ ಗತಚರಿತ್ರೆಯು, ಸಂಘರ್ಷಗಳಿಂದಲೂ ರಕ್ತಪಾತಗಳಿಂದಲೂ ಕೂಡಿದೆ. ತಮ್ಮ ಧಾರ್ಮಿಕ ಪವಿತ್ರ ಜಾಗಗಳ ಕಬಜಾ ಪಡೆಯಲು ಮೂರೂ ಧರ್ಮಗಳು ದಾಯಾದಿಗಳಂತೆ ಕಾದಾಡಿವೆ. ಇಲ್ಲಿನ ಚರ್ಚುಗಳನ್ನು ವಿಮೋಚಿಸಲು ಯೂರೋಪಿನ ಕ್ರೈಸ್ತರು ಕ್ರುಸೇಡಿನ ಪಡೆಗಳನ್ನು ಕಳಿಸಿಕೊಟ್ಟವು. ಜ್ಯೂಗಳು ಪವಿತ್ರ ‘ಗೋಳುಗೋಡೆ’ ವಶಪಡಿಸಿಕೊಳ್ಳಲು ‘ಆರುದಿನದ ಯುದ್ಧ’ವೆಂದು ಖ್ಯಾತವಾಗಿರುವ ಕದನ ಮಾಡಿದರು. ಅಕ್ಸಾ ಮಸೀದಿ ಉಳಿಸಿಕೊಳ್ಳಲು ಅರಬ್ಬರು ಹೋರಾಡಿದರು.

ದೇವರು ಒಬ್ಬನೇ ಎಂದು ಸಾರುವ ವಿಗ್ರಹರಾಧನೆ ವಿರೋಧಿಸುವ ಈ ಏಕದೇವತಾಧರ್ಮಗಳು, ಕಟ್ಟಡಗಳನ್ನು ವಶಪಡಿಸಿಕೊಳ್ಳಲು ಪರಸ್ಪರ ತಿಕ್ಕಾಡಿರುವುದು ಒಂದು ಚಾರಿತ್ರಿಕ ವ್ಯಂಗ್ಯ. ದೋಷ ಧರ್ಮಗಳದ್ದೋ ಜೆರುಸಲೆಮಿನ ಆಕರ್ಷಣೆಯದೊ ಧರ್ಮದ ಹೆಸರಲ್ಲಿ ಹುಟ್ಟಿಕೊಳ್ಳುವ ಸಮುದಾಯಗಳ ಆರ್ಥಿಕ ರಾಜಕೀಯ ಹಿತಾಸಕ್ತಿಗಳದ್ದೊ? ಗತಕಾಲದ ಧಾರ್ಮಿಕ ಸಂಘರ್ಷಗಳು ಹೊಸತಿರುವು ಪಡೆದು ವರ್ತಮಾನಕ್ಕೂ ಚಾಚಿಕೊಂಡಿವೆ.

ಬ್ರಿಟಿಶರು ಪ್ಯಾಲಸೇಟನನ್ನು ಬಿಟ್ಟು ಹೋಗುವಾಗ ಅರಬ್ಬರಿಗೂ ಯಹೂದಿಗಳಿಗೂ ಹಂಚಿ, ಇಸ್ರೇಲ್ ಎಂಬ ಹೊಸದೇಶ ಸ್ಥಾಪಿಸಿ (1948) ಹೋದರು. ಮೂರನೇ ದೇಶವೊಂದು ತನ್ನ ಹಿತಾಸಕ್ತಿಗಾಗಿ ಒಂದೇ ಸಂಸ್ಕೃತಿ- ಪರಂಪರೆಗೆ ಸೇರಿದ, ಸಂಕೀರ್ಣವಾದ ಚರಿತ್ರೆಯುಳ್ಳ ದೇಶವನ್ನು ವಿಭಜಿಸಿದರೆ, ಉಂಟಾಗುವ ಗಾಯ ಬೇಗ ಮಾಯುವುದಿಲ್ಲ. ಅದನ್ನು ಭಾರತ ಈಗಲೂ ಅನುಭವಿಸುತ್ತಿದೆ. ಜೆರುಸಲೆಮನ್ನು ವಿಶ್ವಸಂಸ್ಥೆಯು ವಿಭಜಿಸಿ ಇಸ್ರೇಲಿಗಳಿಗೂ ಪ್ಯಾಲೆಸ್ತೈನಿಯರಿಗೂ ಮಾಡಿದ ಹಂಚಿಕೆ ಎರಡೂ ಬಣಗಳಿಗೆ ತೃಪ್ತಿತಂದಿಲ್ಲ. ಯೆಹೋವಾ ದಯಪಾಲಿಸಿದ ಭೂಮಿಯೆಂದು ಯಹೂದಿಗಳು; ಇದು ಮೂಲತಃ ಅರಬರ ಭೂಮಿ.

ನೀವು ವಲಸಿಗರಾಗಿ ಬಂದು ನಮ್ಮನ್ನು ಒಕ್ಕಲೆಬ್ಬಿಸಿದಿರಿ ಎಂದು ಪ್ಯಾಲೆಸ್ತೀನಿಯರು. ಇಲ್ಲಿ ಅರಬ್ಬರು ಎಂದರೆ ಅರಬ್ಬಿ ಭಾಷೆಯಾಡುವ ಮುಸ್ಲಿಮರು ಮತ್ತು ಕ್ರೈಸ್ತರು. ಹೀಬ್ರೂ ಮಾತನಾಡುವ ಯಹೂದಿಗಳಲ್ಲದವರು. ಒಂದೇ ಪ್ರದೇಶವನ್ನು ಅರಬರು ‘ಪ್ಯಾಲೆಸ್ತೀನ್’ ಎಂದೂ ಯಹೂದಿಗಳು ‘ಇಸ್ರೇಲೆಂದೂ ಕರೆದುಕೊಳ್ಳುವರು. ಇಸ್ರ್ರೇಲಿನ ಪ್ರವಾಸೋದ್ಯಮ ಇಲಾಖೆ ನಮಗೆ ಒದಗಿಸಿದ ನಕ್ಷೆಯಲ್ಲಿ ಪ್ಯಾಲೆಸ್ತೇನಿನ ಗಾಜಾ-ಪಶ್ಚಿಮದಂಡೆಗಳ ಸುಳಿವೇ ಇರಲಿಲ್ಲ. ಪ್ಯಾಲೆಸ್ತೇನಿ ಆಳ್ವಿಕೆಯಿರುವ ವೆಸ್ಟಬ್ಯಾಂಕಿನಲ್ಲಿ ಪ್ರದರ್ಶಿಸಿರುವ ದೇಶದ ನಕ್ಷೆಯಲ್ಲಿ ಇಸ್ರೇಲಿನ ಹೆಸರೇ ಇಲ್ಲ.

ಎರಡೂ ದೇಶಗಳು ಜೆರುಸಲೆಂ ತಮ್ಮ ರಾಜಧಾನಿ ಎಂದು ಘೋಷಿಸಿಕೊಂಡಿವೆ. ಸಂಘರ್ಷಕ್ಕೆ ಏಳು ದಶಕಗಳು ಸಂದವು. ನೂರಾರು ವಿಶ್ವಸಂಸ್ಥೆಯ ನಿರ್ಣಯಗಳು, ಶಾಂತಿಸಭೆಗಳು ನಡೆದವು. ಈ ಸಂಘರ್ಷವು ನೂರಾರು ಯುದ್ಧಗಳನ್ನು ಹಡೆದು ಲಕ್ಷಾಂತರ ಜನರ ಸಾವಿಗೆ ಕಾರಣವಾಗಿದೆ. ಎಂದೂ ಮುಗಿಯದ ಯುದ್ಧದಂತಿದೆ. ಇಲ್ಲಿನ ದಾಕ್ಷಿತೋಟಗಳು ಉತ್ಪಾದಿಸಿರುವ ದ್ರಾಕ್ಷಾರಸಕ್ಕಿಂತ ಹೆಚ್ಚಿನ ಪ್ರಮಾಣದ ನೆತ್ತರನ್ನು ಇಲ್ಲಿನ ನೆಲ ಕುಡಿದಿರುವಂತಿದೆ. ಜೆರುಸಲೆಂ ‘ಕಕೇಸಿಯನ್ ಚಾಕ್‍ಸರ್ಕಲ್’ ನಾಟಕದೊಳಗೆ ಇಬ್ಬರು ತಾಯಂದಿರ ಕೈಗೆ ಸಿಕ್ಕ ನತದೃಷ್ಟ ಮಗುವಿನಂತಿದೆ. ಎರಡು ಹೋಳಾಗಿರುವ ಜೆರುಸಲೆಮಿನ ನಡುವೆ ಗಡಿಗೋಡೆ-ಬೇಲಿ-ಕಂದಕಗಳು ಹಾದುಹೋಗಿವೆ.

ಇಸ್ರೇಲ್ ತನ್ನ ಗಡಿಯಲ್ಲಿ ದಾಟಲಾಗದ ಗೋಡೆಗಳನ್ನು ಕಟ್ಟತೊಡಗಿದೆ. ಅವು ನೆಲದೊಳಗಿಂದ ಎದ್ದ ಕತ್ತಿಯಲುಗಿನಂತೆ, ಡೈನೊಸೊರಸಿನ ಬೆನ್ನಿನಂತೆ, ಜೋಡಿಸಿಟ್ಟ ಹಾವಿನ ಹೆಡೆಗಳಂತೆ ಕಾಣುತ್ತವೆ. ಕ್ರಾಂಕ್ರೀಟಿನ ಬೂದುಬಣ್ಣದ ಗೋಡೆ, ಸಿಂಬೆಸುತ್ತಿದ ಮುಳ್ಳುತಂತಿಯ ಬೇಲಿ, ದಪ್ಪಕಲ್ಲಿನ ಗೋಡೆ; ಅವಕ್ಕೆ ಕಣ್ಗಾವಲಿನ ಕ್ಯಾಮೆರಾಗಳು. ಸದ್ಯಕ್ಕೆ ವಿಶ್ವಸಂಸ್ಥೆಯ ಆಕ್ಷೇಪದಂತೆ ಗೋಡೆ ನಿಂತಿದೆ. ಆದರೆ ಜನರ ಮನಸ್ಸಿನೊಳಗಿನ ಗೋಡೆಗಳು ಬೆಳೆಯುತ್ತಲೇ ಇವೆ. ಜಗತ್ತಿನ ಅತ್ಯಂತ ಸೂಕ್ಷ್ಮವೂ ಅಪಾಯಕರವೂ ಆದ ಗಡಿವಿವಾದವುಳ್ಳ ನಗರವಿದು.

ಧಾರ್ಮಿಕ ಸಮುದಾಯಗಳು ಇರುವ ನೀರು ನೆಲಗಳನ್ನು ಹಂಚಿಕೊಂಡು ಬದುಕಲಾಗದೆ ಗೋಡೆ ಕಟ್ಟಿಕೊಂಡು ಗುಮಾನಿ ರೊಚ್ಚು ಸೇಡುಗಳಲ್ಲಿ ಬದುಕುವುದು ಒಂದು ದುರವಸ್ಥೆ. ಜೆರುಸಲೆಂ ಯುದ್ಧಕೈದಿಯಂತೆ ಕಾಣುತ್ತದೆ. ನಮ್ಮ ವಾಹನ ಜೆರುಸಲೆಮಿನಲ್ಲಿ ಹಾಯುವಾಗ ಮತ್ತೆಮತ್ತೆ ಎರಡೂ ದೇಶಗಳ ಗಡಿಸೈನಿಕರ ತಪಾಸಣೆಗೆ ಒಳಪಡಬೇಕಾಗಿತ್ತು. ನಗರದ ಒಂದು ಬೀದಿಯಿಂದ ಇನ್ನೊಂದು ಬೀದಿಗೆ ಹೋಗುವುದಕ್ಕೂ ಚೆಕ್‍ಪೋಸ್ಟ್ ದಾಟಬೇಕು. ಎಲ್ಲಿ ಇಸ್ರೇಲ್ ಶುರುವಾಗಿ ಎಲ್ಲಿ ಪ್ಯಾಲೆಸ್ತೇನ್ ಮುಗಿಯುತ್ತದೆ ಎಂಬುದೇ ತಿಳಿಯುತ್ತಿರಲಿಲ್ಲ. ಕಟ್ಟಿದ ಗೋಡೆ-ಹಾಕಿದಬೇಲಿ ಕಾಯಲು ಹಗಲೂರಾತ್ರಿ ಕಾಡತೂಸು ತುಂಬಿದ ತುಪಾಕಿ ಹಿಡಿದು ಬಿಗಿಮೊಗದ ಶಂಕೆಗಣ್ಣುಗಳ ಸೈನಿಕರು.

ಪ್ಯಾಲೆಸ್ತೈನ್ -ಇಸ್ರೇಲ್‍ಗಳಲ್ಲಿ ತರುಣ ತರುಣಿಯರು ಮಿಲಿಟರಿ ತರಬೇತಿ ಪಡೆಯುವುದು ಕಡ್ಡಾಯ. ಮಫ್ತಿಯಲ್ಲಿ ರಸ್ತೆಹೋಕರನ್ನು ಚೂರಿನೋಟದಿಂದ ನೋಡುತ್ತ ಗೂಢಚಾರರನ್ನೂ ಕಾಣಬಹುದು. ‘ಈ ರಸ್ತೆ ಪ್ಯಾಲೆಸ್ತೇನಿ ಹಳ್ಳಿಗೆ ಹೋಗುತ್ತದೆ. ಇಸ್ರೇಲಿ ನಾಗರಿಕರಿಗೆ ಸುರಕ್ಷಿತವಲ್ಲ’ ‘ಇದು ಪ್ಯಾಲೆಸ್ತೈನ್ ಪ್ರದೇಶ; ಇಸ್ರೇಲಿಗಳಿಗೆ ಪ್ರವೇಶವಿಲ್ಲ’ ‘ಇಸ್ರೇಲಿನ ಉತ್ಪನ್ನಗಳನ್ನು ಬಹಿಷ್ಕರಿಸಿರಿ’ ಮುಂತಾದ ಬೋಡುಗಳು ಹಾದಿಯುದ್ದಕ್ಕೂ. ಆತ್ಮರಕ್ಷಣೆ ಮತ್ತು ವಿಮೋಚನೆಯ ಹೆಸರಲ್ಲಿ ಆಕ್ರಮಣಕ್ಕೆ ಸಿದ್ಧವಾದ ದೇಶಗಳು ನಾಗರಿಕರನ್ನು ಸೈನಿಕೀಕರಣಗೊಳಿಸುತ್ತವೆ.

ಆಧುನಿಕ ರಾಷ್ಟ್ರನಿರ್ಮಾಣದ ಪರಿಕಲ್ಪನೆಯಲ್ಲಿಯೇ ನಾಗರಿಕರ ಮಿಲಿಟರೀಕರಣ, ಆಕ್ರಮಣಶೀಲತೆ ಹಿಂಸೆಯ ಎಳೆಗಳು ಸುತ್ತಿಕೊಳ್ಳುತ್ತವೆ. ತಡೆಗೋಡೆ ಮತ್ತು ಎಚ್ಚರಿಕೆ ಫಲಕ, ತುಪಾಕಿಧಾರಿ ಪೋಲಿಸರನ್ನು ಇಟ್ಟುಕೊಂಡು ಎಷ್ಟು ದಿನ ಬದುಕು ತೆಗೆಯಬಹುದು? ಒಬ್ಬರಿಗೊಬ್ಬರು ಗುಮಾನಿ ಅಂಜಿಕೆ ಆತಂಕಗಳಿಂದ ಗಮನಿಸುವ ಜನರನ್ನು ಇಟ್ಟುಕೊಂಡು ಜೆರುಸಲೆಂ, ಮಾನವ ದುರಂತಗಳಿಗೆ ಸಾಕ್ಷಿಪ್ರಜ್ಞೆಯಂತಿತ್ತು. ಜೆರುಸಲೆಂ ಲಾವಾರಸ ಹರಿದಾಡುವ ಭೂಪದರದ ಮೇಲೆ ಕಟ್ಟಿದ ಮನೆಯಂತಿದೆ.

ತಮ್ಮ ನಡುವಣ ನಂಟನ್ನು ಮುರಿದು ಜಗಳ ಹಚ್ಚಿದ್ದು ಬ್ರಿಟನ್-ಅಮೆರಿಕಾ ಎಂದು ಹೆಚ್ಚಿನವರಿಗೆ ಗೊತ್ತಿದೆ. ಆದರೂ ಜನರನ್ನು ಕಾದಾಟಕ್ಕೆ ಹಚ್ಚಿದವರು ಮರೆಯಲ್ಲೇ ಉಳಿದಿದ್ದಾರೆ. ಬೆತ್ಲೆಹೆಮ್ಮಿನ ‘ಅಲ್ ಕರಮೆಹ್’ ಹೋಟೆಲಿನ ಊಟದ ಹಾಲಿನಲ್ಲಿ ಪ್ಯಾಲೆಸ್ತೈನ್ ಇತಿಹಾಸ ಜೀವನವಿಧಾನ ಪರಂಪರೆ ಸೂಚಿಸುವ ವಸ್ತುಗಳ ಪ್ರದರ್ಶನ ಮಾಡಲಾಗಿತ್ತು. ಅಲ್ಲಿ ಜೆರುಸಲೆಂ ಬೆತ್ಲೆಹೆಂಗಳಲ್ಲಿ ಹುಟ್ಟಿದ ಪ್ರಸಿದ್ಧ ಕವಿ ಚಿಂತಕ ಕಲಾವಿದರ ಫೋಟೊಗಳನ್ನು ತೂಗುಹಾಕಲಾಗಿತ್ತು. ಅವುಗಳಲ್ಲಿ ‘ಓರಿಯೆಂಟಲಿಸಂ’ ಕೃತಿಯಿಂದ ಖ್ಯಾತನಾದ ಎಡ್ವರ್ಡ್ ಸಯೀದ್, ಪ್ಯಾಲೆಸ್ತೈನಿ ಚಳುವಳಿಯ ನಾಯಕ ಯಾಸೀನ್ ಅರಾಫತ್, ಕವಿ ಮಹಮೂದ್ ದರ್ವಿಶ್ ಮುಂತಾದವರ ಚಿತ್ರಪಟಗಳಿದ್ದವು. ಹೋಟೆಲಿನ ಮುಂದೆ ‘ಪ್ಯಾಲೆಸ್ಟೇನಿಯನ್ ಕಾನ್‍ಫ್ಲಿಕ್ಟ್ ರೆಸೊಲೂಶನ್ ಸೆಂಟರ್’ ಎಂಬ ಸಂಸ್ಥೆಯಿತ್ತು.

ಕಟ್ಟಡದ ಗೇಟಿನ ಮೇಲಿದ್ದ ಬೋರ್ಡಿನಲ್ಲಿ ‘ಬನ್ನಿ. ಕಾಫಿ ಟೀ ಬಾದಾಮಿ ತಿನ್ನುತ್ತ, ಸಾಮಾಜಿಕ ರಾಜಕೀಯ ಆರ್ಥಿಕ ಧಾರ್ಮಿಕ ವಿಷಯಗಳ ಬಗ್ಗೆ ಚರ್ಚೆ ಮಾಡಬಹುದು’ ಎಂದು ಬರೆಯಲಾಗಿತ್ತು. ಅದರೊಳಗೆ ಹೋಗಿ ಚರ್ಚೆ ಮಾಡಲು ನಮಗೆ ಸಾಧ್ಯವಾಗಲಿಲ್ಲ. ಆದರೆ ನಾವು ಭೇಟಿ ಮಾಡಿದ್ದಷ್ಟು ಜನ ಪ್ರಖರ ರಾಜಕೀಯ ಪ್ರಜ್ಞೆಯವರಾಗಿದ್ದರು. ಈಜಿಪ್ತಿನಲ್ಲೂ ಹಾಗೆಯೇ. ಪೈಪರಸ್ ಕಾಗದದ ಮೇಲೆ ಚಿತ್ರಕಲೆ ಮಾಡುವ ಕಲಾ ಶಾಲೆಯೊಂದಕ್ಕೆ ಹೋಗಿದ್ದೆವು. ಅಂಗಡಿಯ ಮಾಲಕಿ ಇಂಗ್ಲಿಷ್ ಬಲ್ಲವಳು. ಆಕೆಗೆ ‘ನಾವು ಇಸ್ರೇಲಿನಿಂದ ಇಲ್ಲಿಗೆ ಬಂದಿದ್ದೇವೆ. ಅವರು ನಗರಗಳನ್ನು ಎಷ್ಟು ನೀಟಾಗಿ ಇಟ್ಟುಕೊಂಡಿದ್ದಾರೆ. ಕೈರೊ ಯಾಕಿಷ್ಟು ಕೊಳಕಾಗಿದೆ’ ಎಂದು ನಾನು ಕೇಳಿದೆ. ಆಕೆ ತಟ್ಟನೆ ‘ಹೌದು, ನಾವು ಬಡತನದ ಜತೆ ಹೋರಾಡ್ತಾ ಇದ್ದೇವೆ. ನಮ್ಮಲ್ಲಿ ಗಲೀಜಿದೆ. ಆದರೆ ನಮ್ಮ ರಸ್ತೆಗಳ ಮೇಲೆ ರಕ್ತವಿಲ್ಲ’ ಎಂದಳು. ‘ರಸ್ತೆಯ ಮೇಲೆ ರಕ್ತವಿದೆ, ರಕ್ತವಿದೆ ರಸ್ತೆಯ ಮೇಲೆ’ ಎಂಬ ಸಾಲು ಬರೆದ ಕ್ರಾಂತಿಕಾರಿ ಕವಿಯನ್ನು ಓದಿದ್ದಳೇ ಇವಳು? ರಾಜಕೀಯ ಸತ್ಯವನ್ನು ಎಷ್ಟು ಸರಳವಾಗಿ ಹೇಳಿದಳು.

ಈಜಿಪ್ತಿನಲ್ಲಿ ಹೊಸತಲೆಮಾರಿನ ತರುಣ ತರುಣಿಯರು ತೆಹರೀರ್ ಸರ್ಕಲ್ಲಿನಲ್ಲಿ ಒಂದು ವಾರಕಾಲ ಕೂತು, ಭ್ರಷ್ಟ ಸರ್ಕಾರವನ್ನು ಇಳಿಸಿದ್ದು ನೆನಪಾಯಿತು. ದೇಶವೆಂದರೆ ಕಸವಿಲ್ಲದೆ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವ ಅಭಿಯಾನ ಮುಖ್ಯವಲ್ಲ, ದ್ವೇಷವನ್ನು ಬಿತ್ತಿ ರಕ್ತಹರಿಸುವ ಕ್ರೌರ್ಯವಿಲ್ಲದೆ ಇರಿಸಿಕೊಳ್ಳುವುದು ಮುಖ್ಯ. ರಾಜಕೀಯ ಸಂಘರ್ಷವುಳ್ಳ ಪ್ರದೇಶಗಳಲ್ಲಿ ಜನ ತಮ್ಮ ದೇಶದ ಆರ್ಥಿಕ ರಾಜಕೀಯ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸೂಕ್ಷ್ಮಪ್ರಜ್ಞೆ ಬೆಳೆಸಿಕೊಂಡಿರುತ್ತಾರೆ.

ನೂರಾರು ಪ್ರವಾದಿ ವಿಜ್ಞಾನಿ ಕವಿ ದಾರ್ಶನಿಕ ಚಳುವಳಿಗಾರರನ್ನು ರೂಪಿಸಿರುವ ಜೆರುಸಲೆಂ ಜ್ಞಾನಕೇಂದ್ರಗಳು. ಈ ಜ್ಞಾನ ಧಾರ್ಮಿಕ ದ್ವೇಷದಿಂದ ಮಾತ್ರವಲ್ಲ, ರಾಜಕೀಯ ಸಂಘರ್ಷವನ್ನು ಹೇಗೆ ಶಾಂತಿಯುತವಾಗಿ ಎರಡೂ ಕಡೆ ಘನತೆಯಿಂದ ಬದುಕುವ ದಿನಗಳನ್ನು ರೂಪಿಸಲು ಯತ್ನಿಸಬೇಕು ಎಂಬ ಮಾನವೀಯ ವಿವೇಕದಿಂದಲೂ ಹುಟ್ಟಿದ್ದು. ಜೆರುಸಲೇಮಿನಲ್ಲಿ ನಮ್ಮ ವಾಹನ ಚಾಲಕ ನಜೀರ್ ಮುಸ್ಲಿಂ. ರಷ್ಯಾದಿಂದ ವಲಸೆ ಬಂದಿರುವ ನಮ್ಮಮಾರ್ಗದರ್ಶಕಿ ಯಹೂದಿ. ಇಬ್ಬರೂ ಇಸ್ರೇಲಿ ನಾಗರಿಕರು.

ನಜೀರ್ ತನ್ನೆರಡೂ ಗಂಡುಮಕ್ಕಳನ್ನು ಜರ್ಮನಿಗೆ ಓದಲು ಮತ್ತು ದುಡಿಯಲು ಕಳಿಸಿದ್ದಾನೆ. ಅವನಿಗೆ ಇಸ್ರೇಲಿನಲ್ಲಿ ಮಗಳನ್ನು ಬೆಳೆಸುವ ಚಿಂತೆ. ವಿಮೋಚಿತ ಪ್ಯಾಲೆಸ್ತೈನಿನ ಕನಸು ಅವನಲ್ಲಿತ್ತೊ ಇಲ್ಲವೊ ತಿಳಿಯಲಿಲ್ಲ. ಈಗಿರುವ ಪ್ಯಾಲೆಸ್ತೇನಿಗೆ ಹೋದರೆ ಬಡತನ ಮತ್ತು ಹೋರಾಟ ಹಂಚಿಕೊಳ್ಳಬೇಕು. ಇಲ್ಲಾದರೆ ದುಡಿಮೆಯಿದೆ. ಆದಾಯವಿದೆ. ಜತೆಗೆ ಕಾಡುವ ಅಭದ್ರತೆಯೂ ಇದೆ. ಯಹೂದಿ ಕೋಮುವಾದವು (ಜಿಯೋನಿಸಂ) ಇಸ್ರೇಲಿನಲ್ಲಿ ತೀವ್ರವಾಗಿ ಬೆಳೆಯುತ್ತಿದೆ. ಆದರೂ ಹಿಬ್ರೂ-ಅರಬ್ಬಿ ಭಾಷೆಗಳಲ್ಲಿ ಪರಸ್ಪರ ಮಾತಾಡುತ್ತಿದ್ದ ಮರೀನಾ-ನಜೀರ್ ಅನೋನ್ಯವಾಗಿದ್ದಾರೆ.

ಇಬ್ಬರೂ ಪ್ಯಾಲೆಸ್ತೈನ್ ಪ್ರದೇಶದಲ್ಲಿ ಓಡಾಡಲು ಪರವಾನಿಗೆ ಪಡೆದಿದ್ದಾರೆ. ಬೇಲಿ ಗೋಡೆಗಳಿದ್ದರೂ ಅವುಗಳ ದಾಟುವಿಕೆಯ ನೂರಾರು ಕಿಂಡಿಗಳಿವೆ ಅನಿಸುತ್ತಿತ್ತು. ಏನಿಲ್ಲವೆಂದರೂ ಧರ್ಮಾತೀತ ಪ್ರೇಮಿಗಳು ಈ ಕಿಂಡಿಗಳನ್ನು ಕೊರೆದಿರಬಹುದು ಎಂದು ಊಹಿಸಿದೆ. ನನಗೆ ಆಗ ಹಳೆಒಡಂಬಡಿಕೆಯ ‘ಸಾಂಗ್ ಆಫ್ ಸಾಂಗ್ಸ್’ ಭಾಗದ ಹಾಡುಗಳು ನೆನಪಾದವು. ಅಲ್ಲಿ ಜೆರುಸಲೆಮಿನ ವಿರಹತಪ್ತರಾದ ಪ್ರೇಮಿಗಳ ಉತ್ಕಟವಾದ ಭಾವನೆಗಳು ವ್ಯಕ್ತವಾಗಿವೆ. ಅವು ಬೈಬಲ್ ಪ್ರೇಮಕಾವ್ಯವೇ ಎಂದು ಬೆರಗು ಹುಟ್ಟಿಸುವಂತಿವೆ.

ಜೆರುಸಲೆಂ ಪ್ರೇಮಿಗಳ ನಗರವೂ ಆಗಿದೆ. ಇಲ್ಲಿನ ಮಸೀದಿಗಳ ಮುಂದೆ ‘ಆಯುಧ ಒಯ್ಯುವುದು ಮತ್ತು ಪ್ರೇಮಿಗಳು ಅಪ್ಪಿಕೊಳ್ಳುವುದು ಮುದ್ದಿಡುವುದು ನಿಷೇಧಿಸಲಾಗಿದೆ’ ಎಂಬ ಎಚ್ಚರಿಕೆ ಫಲಕ ಕಂಡೆ. ಪ್ರೇಮಕ್ಕಿಂತ ಬಲವಾದ ಆಯುಧ ಯಾವುದಿದೆ? ನಾನು ಮರೀನಾಗೆ ‘ಅರಬ್ ಕ್ರೈಸ್ತ ಯಹೂದಿ ತರುಣ ತರುಣಿಯರ ನಡುವೆ ಪ್ರೇಮ-ಮದುವೆ ಆಗಿವೆಯೇ?’ ಎಂದು ಕೇಳಿದೆ. ಅವಳು ಮೊಬೈಲ್ ತೆರೆದು ಮಗಳು ಅಳಿಯ ಮೊಮ್ಮಕ್ಕಳ ಚಿತ್ರಗಳನ್ನು ತೋರಿಸುತ್ತ ಹೆಮ್ಮೆಯಿಂದ ಹೇಳಿದಳು: ‘ನನ್ನ ಅಳಿಯ ಕ್ರೈಸ್ತ. ಚಿನ್ನದಂತಹ ಹುಡುಗ’. ಅದೊಂದು ಪುಟ್ಟ ಸುಂದರ ಸಂಸಾರ. ಕಟ್ಟಿದ ಗೋಡೆಗಳನ್ನು ದಾಟಿ ಮಾನವ ಸಂಬಂಧಗಳು ಸಾಕಷ್ಟು ಬೆಳೆದಿವೆ.

ಜೆರುಸಲೆಂ ಸಮುದಾಯಗಳನ್ನು ಬೆಸೆವ ಕೊಂಡಿಯಂತೆಯೂ ಕೆಲಸ ಮಾಡುತ್ತಿದೆ. ಜೆರುಸಲೆಮಿನ ಗೋಡೆಗಳ ಬಗ್ಗೆ ಪ್ಯಾಲೆಸ್ತೇನಿಯರಿಗೆ ಆಕ್ರೋಶವಿದೆ. ಇಸ್ರೇಲ್ ಭಾಗದಲ್ಲೂ ಗೋಡೆದ್ವೇಷಿಗಳಿದ್ದಾರೆ. ಎಂತಲೇ ಗೋಡೆ ಕುರಿತು ನೂರಾರು ಜೋಕುಗಳು ಹುಟ್ಟಿವೆ. ಇವುಗಳಲ್ಲ್ಲಿರುವ ವ್ಯಂಗ್ಯವು ಮಾನವರಲ್ಲಿರುವ ಕೂಡುಬದುಕಿನ ಕನಸುಗಳ ಭ್ರೂಣದಂತಿದೆ. ಚರಿತ್ರೆಯಲ್ಲಿ ಅಗಲಿದ ಊರು ದೇಶ ಮನೆಗಳು ಕೂಡಿಬಾಳುವ ತಾಣಗಳಾಗುವುದು ಕಷ್ಟ ನಿಜ. ಆದರೆ ಹಂಚಿಕೊಂಡು ಬಾಳುವ ತಾಣಗಳೂ ಆಗಬಾರದೇ? ಇದೇನು ಅಸಾಧ್ಯ ಆದರ್ಶವಲ್ಲ.

ಜಗತ್ತಿನ ರಾಜಕಾರಣದಲ್ಲಿ ಸಂಭವಿಸಿರುವ ವಾಸ್ತವಗಳು. ಜೆರುಸಲೆಮಿನ ಆಗಸದಲ್ಲಿ ಹಾರುವ ಹಕ್ಕಿದಂಡನ್ನು ತೋರಿಸುತ್ತ ಮರೀನಾ ‘ನೋಡಿ, ಇವಕ್ಕೆ ಪಾಸುಪೋರ್ಟು ವೀಸಾಗಳ ಹಂಗೇ ಇಲ್ಲ’ ಎಂದು ಹೇಳಿದಳು. ಗೋಡೆಗಳು ಹುಟ್ಟುವುದು ಮೊದಲು ಮನಸ್ಸುಗಳಲ್ಲಿ. ಬಳಿಕ ಅವು ಭೌತಿಕ ರೂಪದಲ್ಲಿ ಮೇಲೇಳುತ್ತವೆ. ಅವನ್ನು ಮತೀಯ ಸಿದ್ಧಾಂತ ಮತ್ತು ಮೂಲಭೂತವಾದಿ ಧರ್ಮಗಳು ಅನುಲ್ಲಂಘನೀಯ ಮಾಡುತ್ತವೆ. ಇಸ್ರೇಲ್-ಪ್ಯಾಲಸ್ತೇನ್ ಗೋಡೆಗಳ ಹಿಂದೆ ಬಲಿಷ್ಠ ರಾಷ್ಟ್ರಗಳ ಫಿತೂರಿ ರಾಜಕಾರಣವಿದೆ.

ಈ ಗೋಡೆಗಳನ್ನು ಒಡೆಯುವ ಮೊದಲು ಅವನ್ನೂ ಅರ್ಥಮಾಡಿಕೊಳ್ಳಬೇಕಿದೆ. ಇಸ್ರೇಲ್ ಭಾಗದ ಗೋಡೆಗಳು ಸ್ವಚ್ಛವಾಗಿವೆ. ಆದರೆ ಗೂನುಬೆನ್ನಂತೆ ಬಾಗಿದ ಪ್ಯಾಲೆಸ್ತೈನಿ ಗೋಡೆಗಳೆಲ್ಲ ಕ್ಯಾನ್‍ವಾಸುಗಳಾಗಿವೆ. ಅವುಗಳ ತುಂಬ ಘೋಷಣೆ ಚಿತ್ರ ಕವಿತೆಗಳು. ಒಂದು ಕವಿತೆ ಹೀಗಿತ್ತು: ದಿ ವಾಲ್ ಕ್ಯನಾಟ್ ಫೀಲ್ ಬಟ್ ಕ್ಯನ್ ಕ್ರೈ ಔಟ್ ಆಫ್ ಫಿಯರ್ದ ವಾಲ್ ಹ್ಯಾಸ್ ನೋ ವಾಯ್ಸ್ ಬಟ್ ಇಟ್ ಸ್ಪೀಕ್ಸ್ ಲೌಡ್ ಅಂಡ್ ಕ್ಲಿಯರ್ದಿ ವಾಲ್ ಹ್ಯಾಸ್ ನೊ ಐಯ್ಸ್ ಬಟ್ ಲುಕ್ಸ್‍ಡೌನ್ ಆನ್ ಅಸ್ ಆಲ್ದಿ ವಾಲ್ ಕ್ಯನಾಟ್ ಮೋವ್ ಬಟ್ ವನ್ ಡೇ ಇಟ್ ವಿಲ್ ಫಾಲ್ ನನಗೆ ಸ್ಥಾವರಕ್ಕಳಿವುಂಟು ವಚನ ನೆನಪಾಯಿತು.

ಗೋಡೆಯ ಬರೆಹಗಳನ್ನೆಲ್ಲ ಓದಿಕೊಂಡು ಓಡಾಡಬೇಕು ಅನಿಸಿತು. ಜೆರುಸಲೆಮಿನ ಗಡಿಗೋಡೆಗಳ ಹಿಂದೆ ಸಾವಿರಾರು ವರ್ಷಗಳ ಜನಾಂಗಗಳ ಧರ್ಮಗಳ ಸಂಸ್ಕೃತಿಗಳ ಸಂಘರ್ಷದ ಚರಿತ್ರೆಯಿದೆ. ಆದರ್ಶದ ಹುಮ್ಮಸ್ಸಿನಿಂದ ಇದು ಬೀಳುತ್ತದೆ ಎಂದು ನಂಬಲು ಕಷ್ಟವಾಗುವಂತೆ ಸನ್ನಿವೇಶ ಜಟಿಲವಾಗಿದೆ. ಆದರೆ ಗೋಡೆಯ ಮೇಲೆ ಹುಟ್ಟಿರುವ ಜೋಕು- ಕವಿತೆ-ಘೋಷಣೆಗಳು ಗೋಡೆಗಳಿಲ್ಲದ ದೇಶವನ್ನು ಹಾರೈಸುತ್ತಿವೆ. ಆ ದಿನ ಖಂಡಿತ ಬರುತ್ತದೆ ಎಂಬ ಸದಾಶಯ ಮೂಡಿತು- ಗಡಿಗೋಡೆಯ ಎರಡೂ ಭಾಗದ ಸೈನಿಕರು ಪಾಳಿ ಬದಲಿಸುವಾಗ ಅಪ್ಪಿಕೊಳ್ಳುವಾಗ; ತಮ್ಮಲ್ಲೇ ಸಿಗರೇಟು ವಿನಿಮಯ ಮಾಡಿಕೊಳ್ಳುವುದನ್ನು ಕಾಣುವಾಗ.

ನಾವು ಜೆರುಸಲೆಮಿನಿಂದ ಬಂದ ಬಳಿಕ ಎರಡು ಘಟನೆಗಳು ವರದಿಯಾದವು. ಮೊದಲನೆಯದು- ಜೆರುಸಲೆಮಿನ ಹಿಬ್ರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಭಾರತದ ಸಂಸ್ಕೃತ ವಿದ್ವಾಂಸ ಡೇವಿಡ್ ಶುಲ್ಮನ್, ಇಸ್ರೇಲ್ ಸರ್ಕಾರ ಕೊಟ್ಟಿರುವ ಅತ್ಯುನ್ನತ ಪ್ರಶಸ್ತಿಯ ಮೊತ್ತವನ್ನೆಲ್ಲ ಹೆಬ್ರೋನ್ ಬೆಟ್ಟಗಳ ಟೆಂಟುಗಳಲ್ಲಿ ಜೀವಿಸುತ್ತಿರುವ ಪ್ಯಾಲೆಸ್ತೈನಿಗಳ ಒಳಿತಿಗಾಗಿ ಕೊಟ್ಟಿದ್ದು.

ಎರಡನೆಯದು- ಅಮೆರಿಕದಲ್ಲಿ ನಿಧನನಾದ ಬಾಕ್ಸಿಂಗ್ ಪಟು ಮಹಮದಾಲಿಯ ಆತ್ಮೀಯ ಗೆಳೆಯ, ಬರ್ಕಲಿ ನಗರದ ಸಿನಗಾಗಿನ ಯಹೂದಿ ನಾಯಕ ಮತ್ತು ಧರ್ಮಗುರು, ಶವಸಂಸ್ಕಾರದ ಸಭೆಯಲ್ಲಿ ಮಾತಾಡುತ್ತ, ‘ನಿಜವಾದ ಆತ್ಮರಕ್ಷಣೆ ಎಂದರೆ ಎದುರಿಗಿರುವ ದುರ್ಬಲರ ಮೇಲೆ ಆಕ್ರಮಣ ಮಾಡುವುದಲ್ಲ. ಅವರಿಗೆ ನೆಮ್ಮದಿಯಿಂದ ಬದುಕುವ ಅವಕಾಶ ಕಲ್ಪಿಸುವುದು. ಇಸ್ರೇಲ್ ದೇಶದ ಜನರ ಭವಿಷ್ಯವು ಪ್ಯಾಲೆಸ್ತೇನಿಯರ ನೋವನ್ನು ಅರ್ಥಮಾಡಿಕೊಂಡು ಅವರ ಸರ್ಕಾರವನ್ನು ಮಾನ್ಯ ಮಾಡುವುದರಲ್ಲಿದೆ ಎಂದು ಇಸ್ರೇಲ್ ಪ್ರಧಾನಿಗೆ ಈ ಮೂಲಕ ತಿಳಿಸುತ್ತಿದ್ದೇನೆ’ ಎಂದು ಕರೆಗೊಟ್ಟಿದ್ದು. ಜೆರುಸಲೆಂ ಗೋಡೆಗಳ ನಗರ ಮಾತ್ರವಲ್ಲ, ಗೋಡೆಗಳನ್ನು ಕೆಡವಿಕೊಂಡು ಬಿಡುಗಡೆಯ ಕನಸನ್ನೂ ಕಾಣುತ್ತಿರುವ ನಗರವೆಂದು ಭಾಸವಾಗುತ್ತದೆ.

‍ಲೇಖಕರು Avadhi

May 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: