ಶಿವಕುಮಾರ್ ಮಾವಲಿ
ಯುದ್ಧದ ವಿಷಯದಲ್ಲಿ ಯಾವ
ಪದಕೋಶಗಳು ಕರಾರುವಾಕ್ಕಾಗಿ
ಅರ್ಥ ನೀಡಲಾರವು ಎಂಬುದೇ ಸತ್ಯ.
ಅಲ್ಲಿ ಆರಂಭ ಎಂದರೆ ಅಂತ್ಯ
ಮುಕ್ತಾಯ ಎಂದರೆ ನಾಂದಿ ಎಂದರ್ಥ.
ಒಪ್ಪಂದಗಳು ಜರುಗಿದ ತರುವಾಯವೇ
ನಿಜದ ಯುದ್ಧ ಶುರುವಿಟ್ಟುಕೊಳ್ಳುತ್ತದೆ.
ಜಗತ್ತಿನ ಮೊದಲ ಯುದ್ಧಕ್ಕೆ
ಏನು ಕಾರಣಗಳಿದ್ದವೋ, ಅವವೇ ಪರಿಣಾಮಗಳು
ಅಸಂಖ್ಯ ಯುದ್ಧಕ್ಕೆ ನಾಂದಿಯಾಗಿಬಿಟ್ಟಿದ್ದು
ಚರ್ಚಾತೀತ ಸತ್ಯ …
‘ಗೆದ್ದವ ಸೋತ, ಸೋತವ ಸತ್ತ ‘
ಎಂಬುದು ಹಳಸಿದ ಅಂಬೋಣ.
ತಂದೆ ಮಗನನ್ನು, ಗುರು-ಶಿಷ್ಯನನ್ನು ಕೊಲ್ಲುವ
ಯಾರೋ ಸತ್ತು ಅತ್ತರೂ, ಮತ್ಯಾರೋ ಅತ್ತು ಸತ್ತರೋ
ಎಂದು ಸಾರುವ ಯಾವ ಯುದ್ಧವೂ ಗೆಲವು ಕಂಡಿಲ್ಲ.
ಯಾರೇ ಗೆಲ್ಲಲಿ, ಮತ್ಯಾರೇ ಸೋಲಲಿ,
ಸೋಲಿನ ಹಗೆ, ಗೆಲುವಿನ ಮದ
ಇವರೆಡೇ ಯುದ್ಧದ ಪರಿಣಾಮಗಳು.
ಹಾಗಾಗಿಯೇ ಯುದ್ಧ ಮುಗಿದ ಮೇಲೆ
‘ ಕದನ ವಿರಾಮ ಘೋಷಣೆ ‘
ಅಂದರೆ ಸೂತಕದ ಯುದ್ಧ ಭೂಮಿಗೆ
ಮುಂದಿನ ಯುದ್ಧದವರೆಗೂ
ಸಣ್ಣ ವಿರಾಮಷ್ಟೇ !
0 ಪ್ರತಿಕ್ರಿಯೆಗಳು