– ಮೌನೇಶ ನವಲಹಳ್ಳಿ
ಮತ್ತ್ಯಾ ಯಾರಿಗೆ ಹೇಳಾಣ
ಕಾದ ಮಣ್ಣಿನ ಮ್ಯಾಗ,
ಬೆತ್ತಲ ಕಾಲಾಗ
ಹೊಂಟೀವಿ ನಾವು—ನೋವಾದರೂ,
ಭಾರೀ ಬ್ಯಾನಾದರೂ
ಗೆದ್ದ ದಾರ್ಯಾಗ,
ಬೂಟಿನ ಕಾಲಾಗ
ದರ್ಬಾರು ಹೊಂಟಾರ ನಾಯಕರು,
ನಮ್ಮ ಯಜಮಾನರು
ನೋಟಿನ ಆಸೆಗೆ,
ಪುಗಸಟ್ಟೆ ಕೂಳಿಗೆ,
ನಮ್ಮನ್ನ ನಾವು ಮಾರಿಕೆಂಡೀವಿ,
ನಮ್ಗ ನಾವೇ ಗುಂಡಿ ತೋಡಿಕೆಂಡೀವಿ
ಊರಿನ ಹಳ್ಳಕ್ಕ,
ದೂರದ ಗುಡ್ಡಕ್ಕ,
ಊರ ದೇವ್ರಿಗೂ ನಾಮ ಹಾಕ್ಯಾರ,
ಜಾತ್ರಿ ಮಾಡ್ಯಾರ, ತಿಂದು ತೇಗ್ಯಾರ.
ಮಕ್ಕಳು ತಿನ್ನುವ ಅನ್ನಕ್ಕು ಕಲ್ಲಾಕಿ,
ಮಕ್ಕಳು ಓದುವ ಬುಕ್ಕಿಗೂ ಕಣ್ಣಾಕಿ,
ಉದ್ಯೋಗ ಕೊಡದ ಗುದ್ದ್ಯಾಟ ಕಚ್ಚಿ ಕುಂತಾರ,
ಅವರ ಮರಿ-ಮೊಮ್ಮಕ್ಕಳಿಗೂ ಆಸ್ತಿ ಮಾಡಿ ಇಟ್ಟಾರ
ಯಾರಿಗೆ ಹೇಳಾಣ? ಯಾರಿಗೆ ಕೇಳಾಣ?
ನಮ್ಮ ಈ ಗೋಳನ್ನ—
ನಮ್ಮವರೇ ನಮ್ಗ ಗೊತ್ತಾಗ್ದಂಗ
ಮುರದಾರ ಗೋಣನ್ನ.
ಮತ್ತ್ಯಾ ಯಾರಿಗೆ ಹೇಳಾಣ…






0 Comments