ಮಾಲಾ.ಮ.ಅಕ್ಕಿಶೆಟ್ಟಿ ಅವರ ‘ನಿತ್ಯದ ನೋಟಗಳಿಗೆ ನಿರುತ್ತರ’
ಕ್ರಿಯೇಟಿವ್ ಪುಸ್ತಕಮನೆ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ಸಾವಿತ್ರಿ ಶಾನುಬಾಗ ಅವರ ಬರಹ ಇಲ್ಲಿದೆ.
-ಸಾವಿತ್ರಿ ಶಾನುಬಾಗ
ಕಪ್ಪು ಕೂದಲು ಬೇಕು, ಆದರೆ ಕಪ್ಪು ಹುಡುಗಿ ಬೇಡ ಎನ್ನುವುದು ನ್ಯಾಯವೇ? ಕಪ್ಪು ಬಣ್ಣ ತಿಳಿಗೊಳಿಸುವ ಫೇರ್-ನೆಸ್ ಕ್ರೀಮುಗಳ ಜಾಹೀರಾತುಗಳಿಗೆ ಮರುಳಾಗಿ, ಅದನ್ನು ಕೊಳ್ಳುವವರ ಸಂಖ್ಯೆಗೇನೂ ಕಡಿಮೆಯೇ? ಬಿಳಿ ಹೆಂಡತಿಯನ್ನು ವರಿಸಿದರೆ ಹುಟ್ಟಿದ ಮಕ್ಕಳು ಖಂಡಿತ ಬಿಳಿಯಾಗಿರುವರೆ? ಹೀಗೆ ಮಾನವನ ಬದುಕಿನಲ್ಲಿ ಎಲ್ಲರನ್ನು ಸಮಾನವಾಗಿ ಕಾಣುವುದು ಎಂತು ಎಂದು ಪ್ರಶ್ನಿಸುತ್ತಾ ಪ್ರಬಂಧವನ್ನು ಹೆಣೆದು ನಮ್ಮ ಮುಂದೆ ಇಟ್ಟಿರುವ ಮಾಲಾ ಮ.ಅಕ್ಕಿಶೆಟ್ಟಿಯವರ ʼನಿತ್ಯದ ನೋಟಗಳಿಗೆ ನಿರುತ್ತರʼ ಪ್ರಬಂಧ ಸಂಕಲನ ಈ ಸದ್ಯ ಬಿಡುಗಡೆಯಾಗಿ ಓದುವ ಅವಕಾಶ ನನಗೆ ಸಿಕ್ಕಿತು. ೨೦ ವಿವಿಧ ರೀತಿಯ ಪ್ರಬಂಧಗಳನ್ನು ಹೆಣೆದು ನಮ್ಮ ಮುಂದೆ ಇಟ್ಟಿರುವ ಲೇಖಕರು ನಮ್ಮನ್ನು ಬೇರೆಯದೇ ಹೊಸಾ ಕಲ್ಪನಾ ಲೋಕಕ್ಕೂ ಒಯ್ಯುತ್ತಾರೆ, ಹಾಗೆ ನಮ್ಮ ಸುತ್ತಮುತ್ತಲಿನ ಬಸ್ ಪ್ರಯಾಣ, ಅವರ ಪ್ರವಾಸ ಕಥನವನ್ನು ಹೇಳುತ್ತಾರೆ.

ಅಲೆಕ್ಸಾ ಬಂದಾಗ ಅವರ ಮನೆಯಲ್ಲಾದ ಅನುಭವ, ಹಿಂದೆ ಕ್ಯಾಸೆಟ್ ಬಂದ ತಕ್ಷಣ ತೆಗೆದುಕೊಳ್ಳಲು ಹೋದ ಅನುಭವ,ಈಗ ಅವುಗಳನ್ನು ಪೇರಿಸಿಟ್ಟು ದೇವರ ಮನೆ ಸ್ಡಚ್ಚ ಮಾಡಿದಂತೆ ಅವನ್ನು ಒಪ್ಪಗೊಳಿಸುವ ಪರಿ,ಅದನ್ನು ಎಲ್ಲಾದರೂ ಮರು ಉಪಯೋಗಿಸಬಹುದೇ ಎಂಬ ಅವರ ಕಾಳಜಿ, ಹಾಗೇ ಅಟ್ಟದ ಮೇಲೆ ಪೇರಿಸಿಟ್ಟ ಹಳೆಯ ಸಾಮಾನುಗಳು ಅವುಗಳನ್ನು ಕಾಲೆಳೆಯುತ್ತಾ ಅವರಲ್ಲಿಯೂ ರಾಜಾ, ರಾಣಿಗಳಿದ್ದು ತಮ್ಮಷ್ಟಕ್ಕೇ ಆಟವಾಡುತ್ತವೆ ಎಂದು ಹೇಳುತ್ತಾ ನಮ್ಮಲ್ಲಿ ಸಣ್ಣ ನಗೆಯೊಂದು ಮೂಡುವಂತೆ ಮಾಡಿದ್ದಾರೆ.
ಎಲ್ಲಾ ಲಲಿತ ಪ್ರಬಂಧಗಳಿಗಿರುವಂತೆ ಇವರ ಪ್ರಬಂಧಗಳಲ್ಲೂ ಹಾಸ್ಯರಸ, ಶಾಂತರಸ, ಕೋಪ ಹೀಗೆ ನವರಸಗಳನ್ನು ಅವುಗಳಲ್ಲಿ ಬೆರೆಸಲು ಮರೆಯದೇ ನ್ಯಾಯ ಒದಗಿಸಿದ್ದಾರೆ. ನಾಯಿಯೊಂದನ್ನು ಸಾಕಿ ಅದರ ಬಗ್ಗೆ ಕಾಳಜಿ,ಅದರಿಂದ ಪಡುವ ಕಷ್ಟ,ಬಸ್ ಪ್ರಯಾಣದ ಹೊತ್ತಲ್ಲಿ ಅವರ ಸಹಪ್ರಯಾಣಿಕರಿಗೆ ಅವರು ಮಾಡಿದ ಸಹಾಯ,ಅವರ ಅನುಭವಗಳು ಇದರಲ್ಲಿ ಸೇರಿವೆ.
ಇನ್ನೂ ಪ್ರವಾಸಿಪ್ರಿಯರಾಗಿರುವ ಲೇಖಕಿ, ಪ್ರವಾಸದ ಪೂರ್ವ ತಯಾರಿ, ಪ್ರವಾಸದ ಅನುಭವ, ಅಲ್ಲಿ ಬರುವ ತೊಂದರೆ, ಒಮ್ಮೊಮ್ಮೆ ರಿಕ್ಷಾ, ಹೊಟೆಲುಗಳಿಗೆ ತೆರಬೇಕಾದ ಹೆಚ್ಚಿನ ಹಣ ಇವೆಲ್ಲವನ್ನು ಹೇಳುತ್ತಾ ಅವರ ರಾಮೇಶ್ವರ ಪ್ರವಾಸದ ಅನುಭವವನ್ನೂ ನಮ್ಮ ಮುಂದೆ ಇಟ್ಟಿದ್ದಾರೆ.
ದೇಸಿ ಭಾಷೆಗೆ ಪ್ರಾಮುಖ್ಯತೆ ಕೊಟ್ಟು ರೊಟ್ಟಿಯ ಸವಿಯನ್ನು ಅವರ ಆಡುಭಾಷೆಯಲ್ಲೇ ನಮಗೆ ಉಣಬಡಿಸಿ,ಊಟದ ಸವಿಯನ್ನು ಹೆಚ್ಚಿಸಿದ್ದಾರೆ. ಹೀಗೆ ಅವರ ಎಲ್ಲಾ ಲೇಖನಗಳು ಓದಿಸಿಕೊಂಡು ಹೋಗುತ್ತಾ, ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಬಂದಿರುವ ಲೇಖನಗಳಾಗಿದ್ದು ಒಂದೇ ಕಡೆ ನಮಗೆ ಓದಲು ಸಿಗುವಂತಾಗಿರುವುದು ಸಂತೋಷಕರ.






0 Comments