ಹರಿನ್ಮಣಿ
ಗೋಡೆಯನ್ನು ನಿರಂತರ
ಒಂದೊಂದೇ ಇಟ್ಟಿಗೆಗಳನಿಟ್ಟು
ಎತ್ತರಿಸುತ್ತಾ ಎಚ್ಚರ ತಪ್ಪಿದ್ದೆವು
ನಾವು. ಕಟ್ಟಕಡೆಗೆ ನಿರ್ಮಾಣ
ಮುಗಿದಾಗ ಆಚೀಚೆ ಬದಿಯಲ್ಲಿ
ಮುಖ ಕಾಣದಂತೆ ನಿಂತಿದ್ದೆವು.
ಹಸಿವೆಂದು ಹಿಂದೆ ಮುಂದೆ
ನೋಡದೇ ನುಂಗಿದ ತುತ್ತಿನೊಡನೆ
ಕಹಿ ತತ್ತಿಗಳನು ಹೊಟ್ಟೆಗಿಳಿಸಿ
ಉಂಡ ತೃಪ್ತಿಯಲಿ ತೇಗಿದ್ದೆವು.
ಅನಾರೋಗ್ಯ ಮರಿಯಾಗಿ
ನರತಂತುವಿನಲಿ ಬೆರೆತಾಗ
ಆರೋಗ್ಯದ ಮಹತ್ತನರಿತೆವು.
ಹಸಿಯ ನೆಲದಾಳಕ್ಕಿಳಿಯದ ಬೇರು
ಜಲವನು ಮುಟ್ಟಲಾರದು. ನಂಬಿಕೆ
ನೆಲೆಯೂರದೆ ಬಂಧ ಬೆಸೆಯದು.
ಹಿರಿಮೆ ಗರಿಮೆಗಳ ತುರಾಯಿ ತಲೆಗೇರಿ
ಗೌಣವಾಗದಿರಲಿ ಒಲವ ಬುನಾದಿ.
ನಂಬಿಕೆ ಹೊರತುಪಡಿಸಿ ಈ ಜಗದಲಿ
ಯಾವುದೂ ಸಮನಾಗಿ ನಿಲ್ಲದೆಂಬ
ನಿತ್ಯಸತ್ಯವು ಅರಿವಾಗಲಿ.
0 ಪ್ರತಿಕ್ರಿಯೆಗಳು