ಕುಪ್ಪಳಿ ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಕುವೆಂಪು ಅವರ ಕವಿಶೈಲ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಇಂದಿನ ‘ನನ್ನ ಕುಪ್ಪಳಿ’ ಅಂಕಣದಲ್ಲಿ ಕವಿಶೈಲವು ತಮಗೆ ಕಂಡ ಬಗೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ಮಾರನೆ ಬೆಳಗ್ಗೆ ಮಳೆಯ ಆರ್ಭಟ ನಿಂತಿತ್ತಾದರೂ ತುಂತುರು ಮಳೆಯ ಸಿಂಚನ ಹಾಗೇ ನಡೆದಿತ್ತು. ಸ್ವಲ್ಪ ತಡವಾಗಿಯೇ ಎದ್ದ ನಾನು ಕೊಡೆ ಹಿಡಿದು ಕವಿಶೈಲಕ್ಕೆ ಹೊರಟೆ. ಇತ್ತ ಕಡೆಯಿಂದ ತೇಜಸ್ವಿ ಸಮಾಧಿ ಎದುರಿನ ರಸ್ತೆಯಲ್ಲಿ ಏರುತ್ತ ಹೋಗಿ ಅತ್ತ ಕಡೆಯಿಂದ ಕವಿಮನೆ ಸೇರುವ ಮೆಟ್ಟಿಲುಗಳಲ್ಲಿ ಇಳಿಯುವ ಹಾಗೆ ಹೊರಟೆ. ಕವಿ ಶೈಲದ ಟಾರು ರಸ್ತೆ ಮಹಾ ಮಜ್ಜನಗೈದು ಕಳೆಕಳೆಯಾಗಿ ಬಿದ್ದುಕೊಂಡಿತ್ತು.
ಆ ಸ್ವಚ್ಛ ರಸ್ತೆಯಲ್ಲಿ ನಡೆಯುವುದೇ ಒಂದು ಆನಂದ. ನಾನಾ ವಿಧದ ಹಕ್ಕಿಪಕ್ಷಿಗಳು ಉಲಿಯುತ್ತಿದ್ದವು. ಅವುಗಳ ಇಂಚರ ಆಲಿಸುತ್ತಾ ಕವಿಶೈಲದ ಬೃಹತ್ ಬಂಡೆಗಂಬಗಳು ಬಂದಿದ್ದು ಗೊತ್ತೇ ಆಗಲಿಲ್ಲ. ಈಗಾಗಲೇ ಎಷ್ಟೋ ಬಾರಿ ಆ ಒರಟು ಕಂಬಗಳ ಶಿಲ್ಪಗಳನ್ನು ಕಂಡಿದ್ದೆ. ಆದರೆ ಇಂದು ಮೋಡ ಮುಚ್ಚಿದ ತಿಳಿ ಮಬ್ಬಿನಲ್ಲಿ ಅವು ಜೀವ ತುಂಬಿಕೊಂಡು ವಿಸ್ಮಯ ಹುಟ್ಟಿಸುವ ಹಾಗೆ ನಿಂತಿದ್ದವು.
ಕುವೆಂಪು ಅವರಿಗಿಂತಲೂ ಆದಿಕವಿ ಪಂಪನಿಗಿಂತಲೂ ಮೊದಲೇ ಹುಟ್ಟಿದ ಸೃಷ್ಟಿ ಸೂರಿಗಳಂತೆ ಮೌನವಾಗಿ ನಿಸರ್ಗದೊಡನೆ ಬೆರೆತು ಹೋಗಿದ್ದವು. ಕುವೆಂಪು ಅವರಂಥ ಮಹಾನ್ ಸೃಷ್ಟಿಶೀಲನ ಸಮಾಧಿ ಸ್ಥಳವನ್ನು ಇದಕ್ಕಿಂತ ಅರ್ಥಪೂರ್ಣಗೊಳಿಸಲು ಸಾಧ್ಯವಿರಲಿಲ್ಲ. ಅಂಥ ಒಂದು ಸೃಜನಶೀಲ ಕಲ್ಪನೆಕೊಟ್ಟ ಕಲಾವಿದ ಕೆ.ಟಿ. ಶಿವಪ್ರಸಾದ್ ನಿಜಕ್ಕೂ ಅಭಿನಂದನಾರ್ಹರು ಎನಿಸಿತು.
ಕವಿಶೈಲದ ಹಾಸುಬಂಡೆಯ ಮೇಲೆ ನಿಂತು ಸುತ್ತಲೂ ಕಣ್ಣಾಡಿಸಿದಾಗ ಕಣ್ತುಂಬಿಕೊಳ್ಳುವ ಬೆಳಗಿನ ದೃಶ್ಯವನ್ನು ಕುವೆಂಪು ವಿಧವಿಧವಾಗಿ ವರ್ಣಿಸಿದ್ದಾರೆ. ಆದರೂ ಅದು ದಿನದಿನವೂ ನವನವೋನ್ಮೇಷಶಾಲಿನಿ. ಒಂದು ದಿನ ಇದ್ದಂತೆ ಮತ್ತೊಂದು ದಿನ ಇರುವುದಿಲ್ಲ. ಕವಿಯ ಮಾತಿನಲ್ಲೇ ಹೇಳುವುದಾದರೆ…
ಓ ಕವಿಶೈಲ, ನಿನ್ನ
ಸಂಪದವನೆನಿತು ಬಣ್ಣಿಸಲಳವು ಕವನದಲಿ?
ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ
ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ
ದೃಶ್ಯ ವೈವಿಧ್ಯಮಂ ರಚಿಸಿ ನೀಂ ಭುವನದಲಿ
ಸ್ವರ್ಗವಾಗಿಹೆ ನನಗೆ!…
ತೆರೆ ಮೇಲೆ ತೆರೆದಿದ್ದು ಹರಿಯುತಿದೆ ಗಿರಿಪಂಕ್ತಿ
ಕಣ್ದಿಟ್ಟಿ ಹೋಹನ್ನೆಗಂ. ಚಿತ್ರ ಬರೆದಂತೆ
ಕಡುಹಸುರು ತಿಳಿಹಸುರು ಹಸುರುಬಣ್ಣದ ಸಂತೆ
ಶೋಭಿಸಿಹುದಾತ್ಮವರಳುವ ತೆರದಿ. ದಿಗ್ದಂತಿ
ಕೊಂಕಿಸಿದ ದೀರ್ಘಬಾಹುವ ಭಂಗಿಯನು ಹೋಲಿ
ಮೆರೆದಿದೆ ದಿಗಂತರೇಖೆ.
… ಮಳೆಬಂದು ನಿಂತಿಹುದು; ಮಿಂದಿಹುದು ಹಸುರೆಲ್ಲ;
ಬಿಸಿಲ ಬೇಗೆಯು ಮಾದು, ಬಂದಿಹುದು ಹೊಸತಂಪು;
ಹೊಸತು ಮಳೆ ತೊಯಿಸಿರುವ ನೆಲದ ಕಮ್ಮನೆ ಕಂಪು
ತೀಡುತಿರೆ, ಮಣ್ಣು ತಿನ್ನುವುದೇನು ಮರುಳಲ್ಲ!
ವಾಯು ಮಂಡಲ ಶುಭ್ರ; ಗಗನದಲಿ ಮುಗಿಲಿಲ್ಲ;
ಮೈಲುತುತ್ತಿನ ಬಣ್ಣದಗಲ ಗಾಜನು ಹೋಲಿ
ಕಮನೀಯವಾಗಿರಲು ಧೌತಾಂಬರದ ನೀಲಿ,
ಕವಿಗೆ ಮನೆ ಬೇಡೆಂಬುದೊಂದು ಸೋಜಿಗವಲ್ಲ!
ಕರಿದಾಗಿ ಹಸರಿಸಿಹ ಕವಿಶೈಲದರೆಯಲ್ಲಿ
ಬಿಸಿಲಿನಲಿ ಮಿರುಗುತಿವೆ ಕನ್ನಡಿಗಳೆಂಬವೋಲ್
ನಿಂತ ನೀರುಗಳು; ಆವಿಗಳೆದ್ದು, ಅಲ್ಲಲ್ಲಿ,
ನಭಕೇರುತಿವೆ. ಹಕ್ಕಿ ಹಾಡತೊಡಗಿವೆ, ಕೇಳು;
ಹೇ ಬಂಧು, ಸೊಬಗಿನಲಿ ನಿನ್ನಾತ್ಮವನು ತೇಲು;
ಪ್ರಜ್ವಲಿಸಲೈ ಕಲ್ಪನೆ, ಕೆರಳ್ದ ಬೆಂಕಿಯೋಲ್!…
ಇಂಥ ಒಂದು ದಿವ್ಯ ನಿಸರ್ಗವನ್ನು ಮಾತಿಲ್ಲದೆ ಮೌನವನಾಂತು ತಪಸ್ಸಿನೋಪಾದಿಯಲ್ಲಿ ಅನುಭವಿಸಬೇಕಲ್ಲವೇ? ಆ ಎಚ್ಚರವನ್ನೂ ಕವಿ ನೀಡುತ್ತಾರೆ.
ಮಿತ್ರರಿರೆ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ:
ಮೌನವೆ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ
ಕವಿಶೈಲದಲಿ. ಮುತ್ತಿಬಹ ಸಂಜೆಗತ್ತಲಲಿ
ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ!
ಮುಗಿಲ್ದೆರೆಗಳಾಗಸದಿ ಮುಗುಳ್ನಗುವ ತದಿಗೆಪೆರೆ,
ಕೊಂಕು ಬಿಂಕವ ಬೀರಿ, ಬಾನ್ದೇವಿ ಚಂದದಲಿ
ನೋಂತ ಸೊಡರಿನ ಹಣತೆಹೊಂದೋಣಿಯಂದದಲಿ
ಮೆರೆಯುತ್ತೆ ಮತ್ತೆ ಮರೆಯಾಗುತ್ತೆ ತೇಲುತಿರೆ,
ಬೆಳಕು ನೆಳಲೂ ಸೇರಿ ಶಿವಶಿವಾಣಿಯರಂತೆ
ಸರಸವಾಡುತಿವೆ ಅದೊ ತರುತಲ ಧರಾತಲದಿ!
ಪಟ್ಟಣದಿ, ಬೀದಿಯಲಿ, ಮನೆಯಲ್ಲಿ, ಸರ್ವತ್ರ
ಇದ್ದೆಯಿದೆ ನಿಮ್ಮ ಹರಟೆಯ ಗುಲ್ಲು! ಆ ಸಂತೆ
ಇಲ್ಲೇಕೆ? – ಪ್ರಕೃತಿ ದೇವಿಯ ಸೊಬಗು ದೇಗುಲದಿ
ಆನಂದವೇ ಪೂಜೆ; ಮೌನವೆ ಮಹಾಸ್ತೋತ್ರ!
ಕ್ಷಣ ಹೊತ್ತು ಅಲ್ಲಿ ಕುಂತು ಸುತ್ತಮುತ್ತ ದಿಟ್ಟಿಸುವ ಹೊತ್ತಿಗೆ ಅದೆಲ್ಲಿತ್ತೋ ಮೋಡ, ಅದೆಲ್ಲಿತ್ತೋ ಆ ವರ್ಷಧಾರೆ, ಸುಯ್ಯನೆ ಸುರಿದು ಬಿಟ್ಟಿತ್ತು; ಹತ್ತು ನಿಮಿಷಗಳ ಕಾಲವಷ್ಟೆ! ಕೊಡೆ ಇದ್ದುದರಿಂದ ನಾನು ಬಚಾವಾದೆ. ಕವಿಯ ಸ್ಮಾರಕ ಬಂಡೆಗಳ ಅಡಿಯಲ್ಲಿ ಹಾಗೇ ನಿಂತೆ. ಮಳೆನಿಂತ ಮರುಕ್ಷಣ ಮೋಡವೆಲ್ಲ ಸರಿದು ಎಳೆ ಬಿಸಿಲ ಕಿರಣಗಳು ತಣ್ಣಗೆ ಚಾಚಿಕೊಂಡವು. ಇದೊಂದು ಆಕಸ್ಮಿಕ ಅಪರೂಪದ ಸಂದರ್ಭ ಎನಿಸಿತು.
ನಮ್ಮ ಬಯಲು ಸೀಮೆಯಲ್ಲಿ ಇಂಥ ದಿಢೀರ್ ಚೋದ್ಯಗಳು ಇಲ್ಲವೇ ಇಲ್ಲ. ಕ್ಷಣಾರ್ಧದಲ್ಲಿ ಕವಿಶೈಲದ ಸುತ್ತಮುತ್ತಲ ಸಮೃದ್ಧ ಕಾಡು ಲಕಲಕನೆ ಹೊಳೆಯತೊಡಗಿತು. ಮರಗಿಡಗಳೆಲ್ಲ ತೊಳೆದಿಟ್ಟಂತೆ ಸ್ವಚ್ಛವಾಗಿ ಶುಭ್ರವಾಗಿ ಕಂಗೊಳಿಸಿದವು. ಕವಿ ಮನೆಯ ಹಿಂದಿನ ದಟ್ಟಾರಣ್ಯದ ಬೆಟ್ಟದ ತುದಿಯಲ್ಲಿ ಅರಳೆರಾಶಿಗಳಂಥ ಬೆಳ್ಮೋಡಗಳು ಮುತ್ತಿಡುತ್ತಿದ್ದವು. ಅಷ್ಟರಲ್ಲಿ ಎಲ್ಲಿಂದಲೋ ತೂರಿ ಬಂದ ಘಮಘಮಿಸುವ ವಾಸನೆ ಗಾಳಿಯಲ್ಲಿ ಗಂಧವಾಗಿ ತೇಲಿದ ಅನುಭವ, ಅರೆ ಇದೇನಿದು? ಹಾಗೇ ಜಾಡು ಹಿಡಿದು ಮುಂಬರಿದೆ.
ದಾರಿ ಪಕ್ಕದ ಕಾಡಂಚಿನಲ್ಲಿ ಕಾಡು ಸುರಗಿ ಮರವೊಂದು ಇಳೆಯ ಕಡೆಗೆ ಚಾಚಿದ್ದ ತನ್ನ ಸಣ್ಣ ಸಣ್ಣ ಎಸಳುಗಳಲ್ಲಿ ಸುಂದರ ಬಿಳಿ ಹೂಗಳನ್ನು ತುಂಬಿಕೊಂಡಿತ್ತು. ಥೇಟ್ ಪಾರಿಜಾತದ ಹೂವಿನಂಥ ಆಕಾರ, ಅದೇ ಬಗೆಯ ಮಧುರ ಪರಿಮಳ. ಮೊದಲ ಮಳೆಗೆ ತೊಯ್ದ ಕವಿಶೈಲದ ಈ ಪ್ರಥಮಾನುಭವ ನನಗೊಂದು ಅಸದೃಶ್ಯ ಸಂಗತಿಯಾಗಿ ಉಳಿಯಿತು.
0 ಪ್ರತಿಕ್ರಿಯೆಗಳು