ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾಮನೆಯ ‘ವಿಷಾದ ಗಾಥೆ’

ಮಹಾಮನೆ

ವಿಷಾದ ಗಾಥೆ 1

ನನ್ನ ಬದುಕು
ನರಕದ ಕಡೆಗಿನ ಯಾತ್ರೆ
ಅಲ್ಲೊಂದು ಹೂಗಿಡ ನೆಡಲು ಹೊರಟಿದ್ದೇನೆ

ನರಕ ದೇವನೇ
ಬಾರಯ್ಯ ನನ್ನ ಜೊತೆಗೆ
ಗಿಡಕ್ಕೆ ನೀರನೂಯ್ದು ಸ್ವರ್ಗ ಕಾಣುವೆಯಂತೆ

ವಿಷಾದ ಗಾಥೆ 2

ಅವಳು ಕರೆದಳು
ಎಲ್ಲಿಗೆಂದು ನಾ ಕೇಳಿದೆ
ನರಕದಲ್ಲೊಂದು ಸ್ವರ್ಗ ಕಟ್ಟೋಣ ಎಂದಳು

ನಾನು ಜೊತೆಯಾದೆ
ಮುಂದೆ ಹೆಜ್ಜೆ ಹಾಕುತ್ತಿದ್ದಂತೆ
ಅವಳು ಎಲ್ಲೋ ಮಾಯವಾಗಿಬಿಟ್ಟಳು

ವಿಷಾದ ಗಾಥೆ 3

ಏನು ಬೇಕು
ಈ ರಣ ಹದ್ದಿಗೆ
ನಿದ್ರಿಸದೆ ಸೋತ ಕಣ್ಣ ಗುಡ್ಡೆಗಳು

ಬೇಕೇ ಇದಕೆ
ಒಡಲ ಹಸಿ ಮಾಂಸ
ಸದಾ ಮಿಡಿವ ನನ್ನ ಹೃದಯ

ವಿಷಾದ ಗಾಥೆ 4

ನಾನೇನೂ ಬೇಡೆನು
ಬಗೆದು ಕೊಡುವೆ ಹೃದಯವ
ಕರುಳ ಮಾಲೆ ಹಾಕಿ ಬಿಡುವೆ

ಹೀಗೇಕೆ ಕಾಡುವೆ
ಕುಣಿದು ರಣಕೇಕೆ ಹಾಕುವೆ
ಬಸಿರ ಬಳ್ಳಿಯ ಉಸಿರ ಸೆಳೆಯದಿರು

ವಿಷಾದ ಗಾಥೆ 5

ಸಾವ ಸೈತಾನನೇ
ಕೊಡಲಿಕ್ಕೆ ಮತ್ತೇನೂ ಉಳಿದಿಲ್ಲ
ನನ್ನ ಎದೆಯೊಳಗಿನ ಜ್ಯೋತಿ ಬಿಟ್ಟು

ನನಗದು ಬೇಕು
ನನ್ನ ಉಸಿರು ನಿಲ್ಲುವವರೆಗೆ
ನೊಂದವರ ಮನದಲಿ ದೀಪ ಹಚ್ಚಲು

ವಿಷಾದ ಗಾಥೆ 6

ಹೂ ಬನದಲಿ
ವಿಷವಿಕ್ಕಿ ಎತ್ತ ಹೋದೆ
ಸತ್ತ ಹೂಗಳ ಸುತ್ತ ಬಿಕ್ಕಳಿಸುತ್ತಿವೆ

ಸಾವ ದೇವನೇ
ಮೂರ್ಖ… ಕೇಳು ಬಾರೋ
ಈ ಬನದ ದುಂಬಿಗಳ ಆರ್ತನಾದವ

‍ಲೇಖಕರು Avadhi

21 May, 2021

1 Comment

  1. Vasundhara k m

    ಚೆನ್ನಾಗಿವೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading