ಡಾ.ಮಹಾಂತೇಶ್ ಪಾಟೀಲ
೧.
ಎಷ್ಟೊಂದು ಚಿಗುರಿತ್ತು
ದಿಕ್ಕು ದಿಕ್ಕಿಗೆ ಮೈಚಾಚಿದ ಟೊಂಗೆ
ಮೂಡಣ ಪಡುವಣದ ಹಕ್ಕಿಗಳು ಕಟ್ಟಿದವು ಗೂಡು
ಸ್ವಾತಂತ್ರ್ಯದ ತಲೆಗಳು ಹೂಮೂಡಿದವು
ಹಸಿದ ಆತ್ಮಗಳು ಗಿಡದ ಹಣ್ಣು ತಿಂದೆವು
ಬಳಲಿದ ಭಾವಗಳು ನೆರಳುಂಡವು
ಒಂದೇ ಎರಡೇ ಗಿಡದ ಗರಿಮೆ-ಹಿರಿಮೆ
೨.
ಆಗ ಎಷ್ಟೊಂದು
ಹೂ ಹಣ್ಣು ಬೀಜಕೆ ರಾಜಯೋಗವಿತ್ತು…
ಆದರೂ ಮಹಾತ್ಮ
ಮರವೆನಿಸಲಿಲ್ಲ ಈ ಮಂಪರು ಮಂದಿಗೆ!.
೩.
ಒಬ್ಬ ಗಾಂಧಿಗಿಡ ಬೇರಿಗೆ ಗುಂಡಿಟ್ಟ
ಮತ್ತೊಬ್ಬ ಚಿಗುರಿಗೆ ಆಸಿಡ್ ಎರಚಿದ
ಮಗದೊಬ್ಬ ಹೂಗಳ ಹೊಸಕಿ ಹಾಕಿದ!
ಈಗ ಎಲೆಗೊಬ್ಬಬ್ಬರು ಗೋಡ್ಸೆಗಳು ಹುಟ್ಟಿ
ಬೊಲ್ಡಿಜರ್ ದೊರೆಯೊಬ್ಬ ಫರ್ಮಾನು ಹೊರಡಿಸಿದ್ದಾನೆ
ಗಾಂಧಿಗಿಡದ ಜಾಗ ಅತಿಕ್ರಮಣವೆಂದು!
೪.
ಉಸಿರಿಗೆ ಗಾಳಿಯಂತಿದ್ದ ಗಾಂಧಿಗಿಡ
ಸುತ್ತ ಗಾಂಪರರ ಮೈತ್ರಿಕೂಟವೀಗ
ಗಾಂಧಿ ಗಿಡದಲ್ಲಿ
ವಸಂತದ ಚಿಗುರಿಲ್ಲ
ಹಣ್ಣಿನ ಕನಸು ಬೇರೆ ನಮಗೆ!
ಆಫೀಸು ಮನೆಯ
ಅಲಂಕಾರಿಕ ಶೋಕಿಸಿನಲಿ
ಬಣ್ಣದ ಪ್ಲಾಸ್ಟಿಕಿನ ಗಾಂಧಿಗಿಡ
ಎಂದಾದರು ಚಿಗುರಿತು?!
0 ಪ್ರತಿಕ್ರಿಯೆಗಳು