ಸೌಮ್ಯ ದಯಾನಂದ
**
ಸಾಧಾರಣ ಪಂಚೆ
ಹೊಳಪನ್ನು ಕಳೆದುಕೊಂಡ
ಒಂದು ಬಿಳಿ ಅಂಗಿ
ನೇಗಿಲ ಹೊತ್ತ ಅವನ
ಆ ಅಂಗಿಯ ಹೊಳಪು ದಾಟಿ
ಮಗಳ ಮುಖದಲ್ಲಿ ಥಳಥಳಿತ್ತು
ತನ್ನ ಚೆಂದದ ಖಬರು
ಎಂದೂ ಇರಲಿಲ್ಲ
ಅದು
ಚಪ್ಪರವನ್ನು ಅಲಂಕರಿಸಿತ್ತು
ಹೂನಗೆ ತೋರಣವಾಗಿತ್ತು
ಅದು ನಳನಳಿಸಿತ್ತು
ಅವನ ಕಣ್ಣಲ್ಲಿ
ಹೊಲದ ಹಸಿರ ಕನಸು
ಮಗಳ ಖುಷಿಗಾಗಿ
ಮುಖ ಕ್ಷೌರ
“ಏನಪ್ಪಾ ಈ ದಿನವೂ…”
ಎಂದಾಳೆಂದು..
ಒಂದು ಕಳೆಯೂ ಇಲ್ಲದ
ಸ್ವಚ್ಛ ತೋಟ ಅವನದು
ಸಿಹಿಯೂಟದ ಆಸೆಯಿಲ್ಲ
ಬಂದವರ
ತೃಪ್ತಿಯ ನೋಟ ಸಾಕು
ದನಗಳಿಗೆ ಹುಲ್ಲು ತರಬೇಕು
ಮುಸುರೆ ಕುಡಿಸಬೇಕು
ಮೋಜಿನ
ಸಂಗೀತದ ನಡುವೆಯೂ
ಕರುವಿನ ಕೂಗು ಕೇಳುತ್ತಾನೆ
ತಲೆ ಸವರಿ “ಮಗಳೇ..” ಎನ್ನುತ್ತಾನೆ
ಹಾಲು ಹಿಂಡುವ
ಸರ್ ಬರ್ ಸದ್ದೇ ಮೇಳ
ತಾಳಿಕಟ್ಟುವ ವೇಳೆ
ನಾಟಿ ಹಚ್ಚುವ ಕನಸು
ಗಟ್ಟಿಮೇಳದಂತೆ..
ಬೀಗರೂಟಕ್ಕೂ ಮೊದಲು
ಹೊಲಕ್ಕೆ ನೀರು ಕಟ್ಟುವ ಚಿಂತೆ
ಹೊಳೆವ ರಂಗೋಲಿಯಲ್ಲಿ
ಹೋರಿಗಳ ಕಾಲ್ಗುರುತು
ಮಗಳ ಮದುವೆಯಲ್ಲಿ
ಮಳೆಹನಿಯ ಅಕ್ಷತೆ
ಈಗ
ಎಲ್ಲೆಲ್ಲೂ ಹಸಿರು
ಮಗಳೂ ಬಸಿರು!
0 ಪ್ರತಿಕ್ರಿಯೆಗಳು