-ಸುಧಾ ಎನ್ ತೇಲ್ಕರ್
ಗಜಲ್
ಮನಗಳ ನಡುವಿನ ಗೋಡೆಯ ಕೆಡವುವವರು ಬೇಕಾಗಿದ್ದಾರೆ ಇಲ್ಲಿ
ಮತ್ಸರವು ಹೆತ್ತ ಕಾಡ್ಗಿಚ್ಚನು ತೊಡೆಯುವವರು ಬೇಕಾಗಿದ್ದಾರೆ ಇಲ್ಲಿ
ಮನುಜರ ಎದೆಯ ಅಂಗಳದಿ ಮಸಣವನು ನಿರ್ಮಿಸಿದವರು ಯಾರು
ಹೃದಯ ಮಿಡಿಯುವ ಪ್ರೇಮವನು ಹರಡುವವರು ಬೇಕಾಗಿದ್ದರೆ ಇಲ್ಲಿ
ಚಂದಿರನ ಬಿಳಿಮೊಗಕೂ ಮಸಿಯ ಬಳಿದು ಅಮಾವಾಸ್ಯೆ ಎನ್ನುತಿಹರು
ತೆರೆಮರೆಯ ಸತ್ಯದ ಮೆರವಣಿಗೆ ಮಾಡುವವರು ಬೇಕಾಗಿದ್ದಾರೆ ಇಲ್ಲಿ
ಸ್ವಾರ್ಥದ ಹೋಮಕ್ಕೆ ಮಾನವತೆಯ ಅರ್ಘ್ಯವ ನೀಡುತಿಹರು ನೋಡು
ಸಹೃದಯ ಬೀಜವ ಬಿತ್ತಿ ಸತ್ಫಲವ ಪಡೆಯುವವರು ಬೇಕಾಗಿದ್ದಾರೆ ಇಲ್ಲಿ
ಮಲ್ಲಿಗೆಯ ಬನದಿ ಮುಳ್ಳು ಬೆಳೆದು ವಿಕೃತಿಯನು ಮೆರೆಯುತಿರುವರು
ರಕ್ಕಸ ಕಳೆಯ ಪಳೆಯುಳಿಕೆಯ ಕೊಡವುವವರು ಬೇಕಾಗಿದ್ದಾರೆ ಇಲ್ಲಿ
ಶವದ ಮೇಲಿನ ಕಾಸುಗಳಲಿ ದಂಧೆಯನು ಮಾಡುವವರ ಸಂತೆ ನಡೆದಿದೆ
ತುತ್ತುಣಿಸಿದ ಕೈಕತ್ತರಿಸುವವರ ಸದೆ ಬಡೆಯುವವರು ಬೇಕಾಗಿದ್ದಾರೆ ಇಲ್ಲಿ
ಹಿತಶತ್ರುಗಳು ದ್ವೇಷದ ಕೆಂಡದುಂಡೆಗಳ ಕಾಲಡಿ ಹಾಸುತ್ತಿಹರು ಸುಧೆ
ಮಮತೆಯ ಹಿಮಗಡ್ಡೆಯ ಮೇಲೆ ನಡೆಸುವವರು ಬೇಕಾಗಿದ್ದಾರೆ ಇಲ್ಲಿ






ಚೆನ್ನಾಗಿದೆ ಬರಹ…. ಅಭಿನಂದನೆಗಳು