ಹೇಮಲತಾ ಭಟ್ ಸಾಗರ
ಇವಳಿನ್ನೂ ಮಧುಮಾಸದೊಂದು ಹಗಲಿನ ಪುಟ್ಟ ಹಕ್ಕಿ. ಅವನೋ ಶರತ್ಕಾಲದ ಸಮೃದ್ಧತೆಯಿಂದ ತುಂಬಿದ ಸಿಹಿಯಾದ ಪರಿಪಕ್ವ ಹಣ್ಣು.
ಅದೆಲ್ಲಿಂದಲೋ ಇದ್ದಕ್ಕಿದ್ದಂತೆ ಥಟ್ಟನೆ
ಹಾರಿ ಬಂದ ಅವಳು ಅವನ ಒಲವಿನ ಹಣ್ಣ ಕುಕ್ಕಿ ಸವಿದಳು.
ಆಹಾ!
ಅದೆಂಥಾ ಸಿಹಿ !
ಮತ್ತೆ ಮತ್ತೆ ಸವಿಯುವಾಸೆ.
ಆದರದು ಸಾಧ್ಯವಾಗದು
ಬೇಟೆಗಾರರ ಹಾವಳಿಯಿಂದ ತಳಮಳ
ಎದೆಯೊಳಗೆ
ಈ ಪುಟ್ಟ ಹಕ್ಕಿಗೆ.
ಮಾಗಿದ ಹಣ್ಣು ಕೇಳಿತು ಇನ್ನೆಷ್ಟು ದಿನ ಹೀಗೆಯೇ ನಾನಿರಲು ಸಾಧ್ಯ ?!
ಪುಟ್ಟ ಹಕ್ಕಿ ಚಿಂತಾಕ್ರಾಂತವಾಯಿತು.
ನನ್ನ ಇವನ ಸ್ನೇಹ ಉಳಿಯಲು ಈ ಸವಿಯ ಉಳಿಸಿಕೊಳ್ಳಲು ದಾರಿ ಇದೆಯೇ ?
ಹಾರಾಡಿತು ಚೀರಾಡಿತು
ಅರಚಾಡಿತು
ಸುತ್ತಿ ಸುತ್ತಿ ಸುಸ್ತಾಯಿತು.
ದಾರಿ ಇದೆಯೇ ? ಸಿಕ್ಕ ಸಿಕ್ಕವರನ್ನೆಲ್ಲ ಕೇಳಿತು.
ಹಗುರಾಗಲೇ ಇಲ್ಲ ಈ ಪುಟ್ಟ ಹಕ್ಕಿ.
ಇನ್ನೇನು ಮಾಡಲಿ ?
ಕಾಲ ಅಷ್ಟೊಂದು ಕ್ರೂರಿಯೇನು?! ಎಲ್ಲರನೂ ಮಣ್ಣಿಗೆ ಉರುಳಿಸಿಬಿಡುವ ಈ ಕಾಲನನು ಅಡ್ಡಗಟ್ಟಿ ತಡೆಯುವುದಾದರೂ ಹೇಗೆ ?!
ಹೇಗೆ ಉಳಿಸಿಕೊಳ್ಳಲಿ
ಮಾಗಿದ ಹಣ್ಣಿನ
ಈ ಸವಿಯಾದ ಸ್ನೇಹ?!
ಭಾರವಾಯಿತು ಪುಟ್ಟ ಹಕ್ಕಿ.
ದಾರಿ ಕಾಣದೇ ಮರದಲ್ಲೇ ಮುದುಡಿ ಕುಳಿತಿತ್ತು ಚಿಂತಾಕ್ರಾಂತವಾಗಿ.
ಓ ಕಾಲವೇ ನನ್ನನೂ ಕೊಂಡೊಯ್ಯಿ ನಿನ್ನ ಪಾಶದೊಳು.
ಹಣ್ಣಿಲ್ಲದೆ ಇನ್ನೆಷ್ಟು ಕಾಲ ಹಸಿದಿರಲು ಸಾಧ್ಯ ಈ ಪುಟ್ಟ ಹಕ್ಕಿ?!
ಕ್ರೂರಿ ಕಾಲವೇ ನನ್ನನೂ ಕೊಂಡೊಯ್ಯಿ ಹಣ್ಣಿನೊಡನೆಯೇ .
ಇಲ್ಲವೇ ಬಿಟ್ಟು ಬಿಡು ನನಗೆ ಈ ಹಣ್ಣನು. ಪ್ರಾರ್ಥಿಸಿಸುವೆ.
ಅಷ್ಟು ಹೇಳಿ ಮೌನವಾಯಿತು ಪುಟ್ಟ ಹಕ್ಕಿ.
0 ಪ್ರತಿಕ್ರಿಯೆಗಳು