ಮಂಜುನಾಥ ದಾಸನಪುರ
ಕುಳವ ಸಮುದಾಯದ ಜಲಮಂಡಳಿ ಆರ್. ರಾಮಚಂದ್ರ ಅವರ ಬದುಕಿನ ಬಾಲ್ಯದ ಏಕಾಂಗಿತನ, ಹಸಿವು, ಆ ಕಾರಣಕ್ಕಾಗಿ ಕಳ್ಳತನ, ಸ್ನೇಹಿತರಿಂದಲೇ ವಿಶ್ವಾಸದ್ರೋಹ, ಅದನ್ನು ಮೀರಿ ನಿಂತ ಬಗೆಯನ್ನು ಕವಿಮಿತ್ರ ಪಾಂಡುರಂಗನಾಯ್ಕ ಅವರಲ್ಲಿ ಹಂಚಿಕೊಂಡಾಗ, ನೊಂದು ಬೆಂದು ಪಕ್ವಗೊಂಡಿರುವ ಬದುಕು ಅದಾಗಿದೆ.
ಹೀಗಾಗಿ ಕನ್ನಡ ಸಾಹಿತ್ಯದ ಓದುಗರಿಗೆ ಮಾದರಿ ಆತ್ಮಕತನ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ನನ್ನೊಳಗೆ ಆತ್ಮವಿಶ್ವಾಸ ತುಂಬಿದರು. ಹೌದು, ಜಲಮಂಡಳಿ ರಾಮಚಂದ್ರ ಅವರು ಒಮ್ಮೆ ಫೋನ್ ಮಾಡಿ ನನ್ನ ಆತ್ಮಕತೆಯನ್ನು ಪುಸ್ತಕ ರೂಪದಲ್ಲಿ ತರಬೇಕೆಂದಿದ್ದೇನೆ. ಎಂಎ ಕನ್ನಡ ಓದಿದವರು ಯಾರಾದರು ಪರಿಚಯವಿದ್ದಾರ ಅಂದರು. ಅವರ ಬದುಕಿನ ಕುರಿತ ಸ್ಥೂಲ ಪರಿಚಯವಿದ್ದ ನನಗೆ ಇದೊಂದು ಉತ್ತಮ ಅವಕಾಶವೆಂದೆ ಭಾವಿಸಿ ನಿಮ್ಮ ಆತ್ಮಕತೆಯನ್ನು ನಾನೆ ಬರೆಯುತ್ತೇನೆ ಆಗಬಹುದಾ ಅಂದೆ. ನೀನಾದರು ಆಗಬಹುದು ಎಂದರು. ಅಂದಿನಿಂದ ನಾನವರ ಬೆನ್ನಟ್ಟಿದೆ.
ದಲಿತ, ಅಲೆಮಾರಿ ಸಮುದಾಯ ಸದಾ ಎದುರಿಸುವ ಬದುಕಿನ ಅನಿಶ್ಚಿತತೆಯ ಪಡಿಪಾಟಲುಗಳನ್ನು ವಿಶ್ವವಿದ್ಯಾಲಯಗಳು ಸಂವೇದನಾಶೀಲವಾಗಿ ವಿದ್ಯಾರ್ಥಿಗಳಿಗೆ ಮುಟ್ಟಿಸಿದ್ದೆ ಆಗಿದಿದ್ದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದಿದ್ದರೂ ಆ ಸಮುದಾಯಗಳ ಬದುಕು ಒಂದು ಮೆಟ್ಟಿಲು ಏರದೆ ಹಾಗೆ ಇರುತ್ತಿರಲಿಲ್ಲ. ಹೀಗಾಗಿ ಶೈಕ್ಷಣಿಕ ಅರ್ಹತೆಯೊಂದನ್ನೆ ಮುಂದಿಟ್ಟುಕೊಂಡು ಅವರ ಮುಂದೆ ಕುಳಿತಿದ್ದರೆ ಖಂಡಿತವಾಗಿಯೂ ಈ ಆತ್ಮಕತೆಯನ್ನು ಬರೆಯಲು ಸಾಧ್ಯವಾಗುತ್ತಿರಲಿಲ್ಲ.
ನನ್ನ ಸಾಮಾಜಿಕ ಹೋರಾಟದ ಹಿನ್ನೆಲೆ ಹಾಗೂ ಪತ್ರಕರ್ತ ವೃತ್ತಿಯ ಅನುಭವಗಳಿಂದಾಗಿ ಅಲೆಮಾರಿ ಸಮುದಾಯದ ಆರ್.ರಾಮಚಂದ್ರ ಅವರ ಬದುಕಿನ ಘಟನೆಗಳನ್ನು ಜೀರ್ಣಿಸಿಕೊಳ್ಳಲು, ಕಲ್ಪಿಸಿಕೊಂಡು ಕತನ ರೂಪಕ್ಕೆ ತರಲು ಸಾಧ್ಯವಾಯಿತೆ ವಿನಃ ಶೈಕ್ಷಣಿಕ ಅರ್ಹತೆಗಳಿಂದಲ್ಲ ಎಂಬುದು ವಾಸ್ತವ.
ಕುಳವ ಸಮುದಾಯದವನೆ ಆದ ನಾನು ಆರ್.ರಾಮಚಂದ್ರ ಅವರ ಬಾಲ್ಯ, ಶಾಲಾ ದಿನಗಳ ಘಟನೆಗಳನ್ನು ಕೇಳಿ ಅದನ್ನು ಕಲ್ಪಿಸಿಕೊಂಡಾಗ ಮನಸ್ಸು ಮಮ್ಮಲ ಮರುಗಿತು. ಹಸಿವು ತಾಳಲಾರದೆ ಗೋಧಿ ಹೊಟ್ಟನ್ನು ತಿಂದ ಘಟನೆ, ಹೆಣದ ಮೇಲೆ ಕಾಸು ಆಯುವ ಘಟನೆಗಳನ್ನು ಬರೆಯುವ ಸಂದರ್ಭದಲ್ಲಿ ಕಣ್ಣಂಚು ಒದ್ದೆಯಾಗಿ, ಎಷ್ಟೋ ಹೊತ್ತು ಬರೆಯದೆ ಹಾಗೆ ಕುಳಿತು ಬಿಟ್ಟಿದ್ದೇನೆ. ತುಪ್ಪ ತಿನ್ನುವ ಜನಗಳ ಮಧ್ಯೆ ತುತ್ತು ಅನ್ನಕ್ಕೂ ಗತಿಯಿಲ್ಲದ ಬದುಕಾಯಿತೆ ನಮ್ಮದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ಇಂತಹ ಪರಿಸ್ಥಿತಿ ಎದುರಿಸಿರುವ ಕುಳವ ಸಮುದಾಯ ಯಾವುದೇ ಸಾಂವಿಧಾನಿಕ ಹಕ್ಕುಗಳಿಲ್ಲದ ಸಂದರ್ಭದಲ್ಲಿ ಎಂತಹ ನಿಕೃಷ್ಟವಾದ ಬದುಕನ್ನು ಸಾಗಿಸಿರಬಹುದೆಂದು ನೆನೆದರೆ ಸಂಕಟವಾಗುತ್ತದೆ.
ಬದುಕಿನ ಇಷ್ಟೆಲ್ಲ ಪಡಿಪಾಟಲುಗಳ ನಡುವೆ ಆರ್.ರಾಮಚಂದ್ರ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ನಡೆಸಿದ ಹೋರಾಟ, ತಿಕ್ಕಾಟ, ತಾಳ್ಮೆ, ಸ್ನೇಹಪರತೆ ಯುವ ಜನತೆಗೆ ಮಾದರಿಯಾದದ್ದು. ಬ್ರಾಹ್ಮಣ ಸಮುದಾಯದ ಮಾಲಿಕತ್ವದ ಎಪಿಎಸ್(ಆಚಾರ್ಯ ಪಾಠ ಶಾಲೆ) ಕಾಲೇಜಿನ ವಿದ್ಯಾರ್ಥಿ ಸಂಘಟನೆಗೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು ಸುಲಭ ಸಾಧ್ಯವಾದುದ್ದಾಗಿರಲಿಲ್ಲ.
ಶೋಷಿತ ಸಮುದಾಯದ ಹಿನ್ನೆಲೆಯಿಂದ ಈ ಗೆಲವನ್ನು ನೋಡುವುದಾದರೆ ನನಗೆ ಅತ್ಯಂತ ಮಹತ್ವದ ಘಟನೆಯೆಂದೆನಿಸುತ್ತದೆ. ಏಕೆಂದರೆ, ದಲಿತ ಅಲೆಮಾರಿ ಸಮುದಾಯಗಳ ಜೀವನಾನುಭವದಿಂದಾಗಿಯೇ ಚಾಕಚಕ್ಯತೆ, ಶ್ರಮ, ಕಷ್ಟ ಸಹಿಷ್ಣುತೆ, ತಾಳ್ಮೆ ಎಲ್ಲವೂ ಬದುಕಿನ ಭಾಗವಾಗಿ ಸಹಜವಾಗಿ ಬಂದಿರುತ್ತದೆ. ಈ ಗುಣಗಳನ್ನು ಸರಿಯಾದ ಸಮಯದಲ್ಲಿ, ಸಂದರ್ಭಕ್ಕೆ ಅನುಗುಣವಾಗಿ ಪರಿಣಾಮಕಾರಿಯಾಗಿ ಬಳಸಿಕೊಂಡರೆ ಯಶಸ್ಸಿನ ಹಾದಿಯಲ್ಲಿ ಸಾಗಬಹುದು ಎಂಬುದಕ್ಕೆ ಪುಷ್ಟಿಕರಿಸಿದಂತಿದೆ.
ಒಟ್ಟಾರೆ, ತಂದೆ-ತಾಯಿಯಿಂದ ಆರ್.ರಾಮಚಂದ್ರನೆAದು ನಾಮಾಕಿಂತನಾದ ಅವರು, ತಮ್ಮ ಸಂಘರ್ಷಮಯ ಹೋರಾಟದಿಂದಾಗಿ ಜಲಮಂಡಳಿ ರಾಮಚಂದ್ರ, ಕಲಾಸೇವೆಯ ಕಾರಣಕ್ಕಾಗಿ ಕೆಂಪೇಗೌಡ ಪ್ರಶಸ್ತಿ ವಿಜೇತ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಾಮಚಂದ್ರ ಆಗಿ ಬೆಳೆದದ್ದು ಸ್ಫೂರ್ತಿದಾಯಕ ಕತನವಾಗಿದೆ.
ಧನ್ಯವಾದಗಳು: ಆತ್ಮೀಯತೆಯಿಂದ ಮಾತನಾಡಿಸುತ್ತಾ ತಮ್ಮೆಲ್ಲಾ ಬದುಕಿನ ಘಟನೆಗಳನ್ನು ಹಂಚಿಕೊಂಡು ನನ್ನ ಜೀವನಾನುಭವವನ್ನು ಹೆಚ್ಚಿಸಿ, ಕುಳವನ ಪಡಿಪಾಟಲು ಆತ್ಮಕತೆ ಪುಸ್ತಕ ರೂಪದಲ್ಲಿ ಬರಲು ಕಾರಣರಾದ ಜಲಮಂಡಳಿ ಆರ್.ರಾಮಚಂದ್ರ ಅಂಕಲ್ ಅವರಿಗೆ ಧನ್ಯವಾದಗ:ಳು. ಹಾಗೆಯೇ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಮಲ್ಲೇಪುರಂ ಜಿ.ವೆಂಕಟೇಶ್ ಕರಡುಪ್ರತಿಯನ್ನು ಓದಿ ಅಗತ್ಯ ಸಲಹೆ ಸೂಚನೆಗಳನ್ನು ಕೊಟ್ಟು ಮುನ್ನುಡಿ ಬರೆದುಕೊಟ್ಟು ಹಾರೈಸಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು.
ಪುಸ್ತಕ ಕರಡನ್ನು ತಿದ್ದಿಕೊಟ್ಟ ನನ್ನ ಹಿತೈಷಿ ಹಾಗೂ ಪತ್ರಕರ್ತ ಮಿತ್ರರಾದ ಕಗ್ಗೆರೆ ಪ್ರಕಾಶ್ ಅವರಿಗೆ ಧನ್ಯವಾದಗಳು. ನನ್ನ ಪತ್ರಕರ್ತ ಗುರುಗಳಾದ ಜಿ.ಎನ್.ಮೋಹನ್, ಪಾರ್ವತೀಶ್ ಬಿಳಿದಾಳೆ, ಬಿ.ಎಂ.ಬಶೀರ್ ಅವರನ್ನು ನೆನೆಯುತ್ತೇನೆ. ನಾನು ಮತ್ತು ರಾಮಚಂದ್ರ ಅಂಕಲ್ ಇಬ್ಬರು ಗಂಟೆ, ಗಟ್ಟಲೆ ಕೂತು ಮಾತನಾಡುತ್ತಾ ಪಾಯಿಂಟ್ಸ್ ಮಾಡಿಕೊಳ್ಳುವ ಸಂದರ್ಭದಲ್ಲಿ ತಮ್ಮ ಕೆಲಸದ ಒತ್ತಡದ ನಡುವೆಯೇ ನಮಗೆ ಕಾಫಿ. ತಿಂಡಿ, ಊಟದ ವ್ಯವಸ್ಥೆ ಮಾಡಿದ ಗೀತಾ ಅವರನ್ನು ನೆನೆಯುತ್ತೇನೆ. ಹಾಗೂ ನನಗೆ ಸಲಹೆ, ಸೂಚನೆ ನೀಡುತ್ತಾ ಸದಾ ಬೆನ್ನಿಗಿರುವ ಮಿತ್ರರಾದ ಪಾಂಡುರಂಗನಾಯ್ಕ,. ಚಂದ್ರಶೇಖರ್ ಅತ್ತಿಬೆಲೆ, ಪುರುಷೋತ್ತಮ್ ಚಿಕ್ಕಹಾಗಡೆ, ಮುರಳಿ ಮೋಹನ್ ಕಾಟಿಯನ್ನು ನೆನೆಯುತ್ತೇನೆ. ಕೊನೆಯದಾಗಿ ನನ್ನೆಲ್ಲ ಜಂಜಾಟ. ಒತ್ತಡಗಳನ್ನು ಸಹಿಸಿಕೊಂಡು ಸಹಕರಿಸಿದ ಅಪ್ಪ ಕೃಷ್ಣಪ್ಪ, ಅಮ್ಮ ಲಕ್ಷö್ಮಮ್ಮ, ಗೆಳತಿ ವಾಣಿಶ್ರೀ, ಮಗಳು ಸಿರಿ ಶಾರು ಸಾತ್ಪಾಡಿಗೆ ಪ್ರೀತಿಯ ನೆನೆಕೆಗಳನ್ನು ಅರ್ಪಿಸುತ್ತೇನೆ.
0 ಪ್ರತಿಕ್ರಿಯೆಗಳು