ಮಂಜುನಾಥ್ ಕಾಮತ್
“14 ವರುಷಗಳು ಆಯ್ತು ಸಾರ್. ಮತ್ತೆ ಈ ರೀತಿ ಬೆಂಚಿನಮೇಲೆ ಕೂತ್ಕೋತ್ತೇನೆ ಅಂತ ಅಂದುಕೊಂಡೇ ಇರ್ಲಿಲ್ಲ. ಬೇರೆಯೋರು ಏನ್ಮಾಡ್ತಾರೋ ಗೊತ್ತಿಲ್ಲ. ನಾನಂತೂ ಈ ವರುಷವೇ ಪರೀಕ್ಷೆ ಬರೀತೇನೆ. ಪಾಸ್ ಆಗಿಯೇ ಆಗ್ತೇನೆ. ಬರೀ ಪಾಸ್ ಅಲ್ಲ. ಫರ್ಸ್ಟ್ ಕ್ಲಾಸಲ್ಲಿ ಪಾಸ್ ಆಗ್ತೇನೆ”
ಇದು ನಗ್ಮಾ ಅವ್ರ ಮಾತು. 14 ವರುಷದ ಹಿಂದೆ ನಾಲ್ಕನೇ ಕ್ಲಾಸಿಗೆ ಓದು ಮುಗಿದು ಹೋಗಿತ್ತು. ಈಗ ಮತ್ತೊಮ್ಮೆ ಆರಂಭವಾಗುತ್ತಿದೆ. ವಾಟ್ಸಪ್ “ಓದುಗರು” ಬಳಗ ಸುಮಾರು ಹತ್ತು ಮಂದಿ ಮಂಗಳಮುಖಿಯರಿಗೆ ಓದಿಸೋಕೆ ರೆಡಿಯಾಗ್ತಿದೆ.
“ನಾನು ಅವನಲ್ಲ ಅವಳು” ಸಿನಿಮಾ ನೋಡಿದಂದಿನಿಂದ ಜೆ.ಸಿ ರಾಜೇಂದ್ರ ಭಟ್ ಸರ್ ಕಲಿಸೋ ವಿಷಯದಲ್ಲಿ ನಿಮಗೇನು ಸಹಾಯ ಬೇಕಾದ್ರೂ ಮಾಡ್ತೇನೆ ಅಂದಿದ್ರು. ಅವ್ರು ನಮ್ಮೊಂದಿಗಿದ್ದಾರೆ. ಜೊತೆಗೀಗ ಉಮೇಶ್ ನಾಯಕ್ ದೊಡ್ಡ ಸಹಾಯಕ್ಕೆ ಮುಂದೆ ಬಂದಿದ್ದಾರೆ. ಅದೆಷ್ಟು ಜನರಿಗಾದ್ರೂ ಉಚಿತವಾಗಿಯೇ ಕಲಿಸುತ್ತೇನೆ ಅಂತ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದಾರೆ. ಕಲಿಯೋಕೆ ಕ್ಲಾಸ್ ರೂಮು, ಟೆಕ್ಸ್ಟ್ ಬುಕ್ಕು, ರಿಜಿಸ್ಟ್ರೇಷನ್ನು ಎಲ್ಲವನ್ನೂ ಅವರೇ ನೋಡ್ಕೋತ್ತೇನೆ ಅಂದಿದ್ದಾರೆ.
ಜುಲೈ ತಿಂಗಳಿಂದ ಕ್ಲಾಸನ್ನು ಆರಂಭಿಸುತ್ತೇವೆ. ನಮ್ಮ ಬಳಗದ ಸುಧೀರ್ ಶಾನುಭಾಗ್ ಅವ್ರ ಕಲ್ಪನೆಯಂತೆ ಕಾಜಲ್ ಒಬ್ರು ಬಿ.ಎ ಓದುತ್ತಾಳೆ. ಉಳಿದವರೆಲ್ಲರೂ ನೇರವಾಗಿ ಹತ್ತನೇ ಕ್ಲಾಸಿನ ಪರೀಕ್ಷೆಯನ್ನು ಬರೆಯುತ್ತಾರೆ. ಆದರೂ ಸಣ್ಣ ವಯಸ್ಸಿನಲ್ಲೇ ಶಾಲೆಯನ್ನು ತೊರೆಯಬೇಕಾಗಿ ಬಂದಿರೋದ್ರಿಂದ ಒಂದನೇ ತರಗತಿಯಿಂದಲೇ ಅವ್ರಿಗೆ ವಿದ್ಯಾಭ್ಯಾಸವನ್ನು ನೀಡಬೇಕು.
ಜುಲೈ ತಿಂಗಳಿಂದ ಮುಂದಿನ ಹತ್ತು ತಿಂಗಳು ಪ್ರತೀ ದಿನ ಸಂಜೆ ಒಂದೆರಡು ಗಂಟೆ ಪಾಠ. ಉಡುಪಿಯಲ್ಲಿ. “ಓದುಗರು” ಬಳಗದವರು ಒಬ್ಬೊಬ್ಬ ಮಂಗಳಮುಖಿಯರಿಗೆ ಪೋಷಕರಾಗಿ ಅವ್ರ ಓದಿನ ಪ್ರಗತಿಪರಿಶೀಲನೆ ಮಾಡುತ್ತಾರೆ. ನಾವು ಓದಲೇ ಬೇಕು ಅಂತ ಮುಂದೆ ಬಂದಿರೋ ಮಂಗಳಮುಖಿಯರು ತಮ್ಮ ಗುರಿ ಮುಟ್ಟುವವರೆಗೂ ನಮ್ಮವ್ರು ಅವರ ಬೆನ್ನಹಿಂದಿರುತ್ತಾರೆ.
ಈ ವಿದ್ಯೆ ನೀಡೋ ಕಾಯಕದಲ್ಲಿ ನೀವೂ ಪಾಲ್ಗೊಳ್ಳಬಹುದು. ನಮ್ಮ ಜೊತೆಯಾಗಬಹುದು. ನೀವು ನಿಮಗಿಷ್ಟದ ಪಾಠವನ್ನು ನಿಮಗೆ ಅನುಕೂಲವಾಗೋ ದಿನದಂದು ಬಂದು ಹೇಳಿಕೊಡಬಹುದು.
ಆಸಕ್ತರು ನನಗೊಂದು ಮೆಸೇಜ್ ಮಾಡಿ. ಆ ನಂತರ ಉಮೇಶ್ ನಾಯಕ್, ರಾಜೇಂದ್ರ ಭಟ್ ಮತ್ತು ನಮ್ಮ ಬಳಗದೊಂದಿಗೆ ಚರ್ಚಿಸಿ, ಯೋಜಿಸಿ ಪಾಠ ಆರಂಭಿಸುವ ದಿನ, ಸ್ಥಳಗಳನ್ನು ತಿಳಿಸುತ್ತೇನೆ. ನನ್ನ ನಂಬರ್ರು 9980665368.
ನಾವು ಅಂದುಕೊಂಡಂತೆ ನಡೆದರೆ ನಮ್ಮ ಬಳಗದ ಮಂಜುಳಾ ಸುಬ್ರಮಣ್ಯ ಅವರ ನೇತೃತ್ವದಲ್ಲಿ ಬರುವ ವರುಷ ಮಂಗಳಮುಖಿಯರದೊಂದು ನಾಟಕ ತಂಡ ರಚಿಸಲಿದ್ದೇವೆ. ಗಣಪತಿ ದಿವಾಣ ಅವರ ಬದುಕಿನ ಬಗ್ಗೆ ಪುಸ್ತಕ ಬರೆಯುತ್ತಿದ್ದಾರೆ. ರಾಕೇಶ್ ಕೊಣಾಜೆ ಅವ್ರಿಗೆ ಶಾಶ್ವತ ಉದ್ಯೋಗ ದೊರಕಿಸುವತ್ತ ಆಲೋಚಿಸುತ್ತಿದ್ದಾರೆ.
ನಿಮ್ಮಲ್ಲೂ ಅಂತಹ ಯೋಜನೆ, ಆಲೋಚನೆಗಳಿದ್ದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ
ಸರ್ ನಿಮ್ಮ ಈ ಒಂದು ಬೆಂಬಲಕ್ಕೆ ತುಂಬಾ ದನ್ಯೆವಾದಗಳು ಹಿಗೆ ಬೆಂಬಲಿಸಿ