ಭಾಗ್ಯಜ್ಯೋತಿ ಗುಡಗೇರಿ
ಕಾಣುವ ಬೆಳಕಿಗೆ
ಕಂಡವಳಲ್ಲ
ಅನುಭವದ ಅರಿವಿಗೆ
ರಸವಾದವಳು
ಪ್ರಭೆಗಳಿಗೆ ಒಲಿಯದ
ಪ್ರಭಾವಳಿಯಂತೆ
ಇರುವೆ ಒಂದೇ ಮನಕೆ
ಭುವಿಯಾದವಳು
ಎದೆಯ ಕಣ್ಣಿಗೆ
ಒತ್ತರಿಸಿ ಬರುವ ಕಣ್ದಾರೆ
ಅಮೃತವಾಗಿ
ಎಲ್ಲ ವರ್ಣತಂತುಗಳಿಗೆ
ಹೊಟ್ಟೆ ತುಂಬಿಸಿದವಳು
ಅರಿವಿನ ಕಣ್ಬಟ್ಟೆ ಹೊತ್ತವಳಿಗೆ
ಬೆಳಕಿನೂರಿನ ಚಿಂತೆಯಿಲ್ಲ
ಬಸುರ ಬಯಲಲಿ ಮತ್ತೆ
ಹೆಣ್ಣಾದ ಅವಳು ಭೂಮಿದೀಪ
ಪಂಚಭೂತಗಳ ಸಂಗದವಳಿಗೆ
ಉಂಡುಟ್ಟ ವಾಸನೆಯ ಹಂಗಿಲ್ಲ
ತೊಟ್ಟುಡುಗೆಗೆ ಕಟ್ಟುವ
ಹೆರಳು ಬೆಳೆಯುತ್ತಲೇಯಿದೆ
ಶರಣೆಯ ಹಾದಿಗೆ
ಶರದಿಯೂ ಶರಣಾಗಿದೆ
ಉಸಿರ ಕಾವಿಗೆ
ಮೈ ತೇವವಾಗಿ
ನೆರಳೂ ಬೆರೆತು
ಬೆಳಕಿನಂಗಡಿಗೆ ಪಯಣ ಬೆಳೆಸಿದೆ
0 ಪ್ರತಿಕ್ರಿಯೆಗಳು