ಸೌಮ್ಯಶ್ರೀ ಎ ಎಸ್
ಅದೆಷ್ಟೋ ವರ್ಷಗಳಿಂದ ಹಗಳು ಇರುಳಿನ
ಪರಿವೆಯೇ ಇಲ್ಲದೆ ಬೆವರು ಸುರಿಸಿ ದುಡಿದು
ತುಂಬಿಸಿದ್ದ ಜೋಳಿಗೆ ಇದೀಗ ಖಾಲಿ
ಉಸಿರು ಕೊಟ್ಟ ಅಪ್ಪನಿಗೆ ಉಸಿರು ತುಂಬಲು
ತನ್ನನ್ನೇ ಪಣಕ್ಕೆ ಇಟ್ಟು ಬೊಗಸೆಯೊಡ್ಡಿ ನಿಂತಂತೆ ಇದೆ
ಭೀಷ್ಮ ತನ್ನೆಲ್ಲಾವನ್ನು ಶಂತನು ಮಹಾರಾಜನಿಗಾಗಿ
ಧಾರೆಯೆರೆದು ಒಬ್ಬಂಟಿಯಾಗಿ ಎದೆಯೊಡ್ಡಿ ಕಾಳಗಕ್ಕೆ
ನಿಂತಂತೆ!
ಎದೆಗೆ ಬಾಣ ತಗುಲಿ ರಕ್ತ ಉಸಿರುತ್ತಿದ್ದರೂ
ಯುದ್ದದಿಂದ ಸರಿಯುವ ಮಾತಿಲ್ಲ.
ಬೀಸುತಿರುವ ಬಿರುಗಾಳಿಗೆ
ಹಚ್ಚಿಟ್ಟ ಹಣತೆ ಅಲೆಯುತ್ತಿದ್ದರೂ
ತನ್ನೆರಡು ಕೈಗಳ ಚಾಚಿ ಬೊಗಸೆಯಲಿ
ಇಡಿದು ನಂದಂತೆ ತನ್ನ ಉಸಿರು ಬಿಗಿ ಹಿಡಿದು
ಕಾಲದ ಕರೆಯನ್ನೇ ಕಾಲಿನಿಂದ ದೂಡಿ ಕಾಯುತ್ತಿರುವ
ತೀರವನ್ನು ಮುಟ್ಟುವ
ಆಸೆಯಲ್ಲಿ ಅಲೆಯು ಅಲೆಯುತ್ತಾ
ಮುಳುಗಿ ಉಸಿರುಗಟ್ಟಿ ಸುಳಿಯೊಳಗೆ ಸಿಲುಕಿ
ಹೋದರೂ ಮತ್ತೆ ಮತ್ತೆ ಹುಟ್ಟಿ ಬಂದ ಅಲೆಗೆ
ಅಡ್ಡಲಾಗಿ ಬಂದ ಹೆಬ್ಬಂಡೆಯನ್ನೇ ಕರಗಿಸಿ ನೀರಾಗಿಸಿ
ತೀರವನ್ನೊಮ್ಮೆ ಮುಟ್ಟುವ ತವಕದಲ್ಲಿ ಕಾಯುತಿಹನು
ಕತ್ತಲೆಯನ್ನು ದೂಡಿ ಉರಿಯುತ್ತಿರುವ
ನಿಗಿ ನಿಗಿ ಬೆಂಕಿಗೆ ತನ್ನುಸಿರು ಊದಿ
ಬೆಂಕಿ ಹೊತ್ತಿಸಿ ತನ್ನ ನಡುಗುವ ಕೈಗಳಿಂದ
ಬೆಳಕಿನ ರುಜು ಮಾಡಿ ತನ್ನ ಎದೆಗೆ ಅಪ್ಪಿ
ತನ್ನ ಬೊಗಸೆಗೆ ಬಿದ್ದ ಉಸಿರನ್ನು ಬಿಗಿ ಹಿಡಿದು
ಮತ್ಯಾವ ಕತ್ತಲೆಯೂ ತನ್ನತ್ತ ಸುಳಿಯದಂತೆ ಕದ ಹಾಕಿ ಕುಳಿತಿಹನು!
0 ಪ್ರತಿಕ್ರಿಯೆಗಳು