– ನವೀನ್ ಮಧುಗಿರಿ
ಎರಡು ತೀರಗಳು
ಕೈ ಹಿಡಿದು ನಡೆಸುತಿವೆ
ಹರಿವ ನದಿಯನ್ನು
ದೂರ ಕಡಲಿಗೆ
—
ನ್ಯಾಯಬೆಲೆ ಅಂಗಡಿಯ
ಸೀಮೆಎಣ್ಣೆ
ವರದಕ್ಷಿಣೆ ಕಿರುಕುಳಕ್ಕೆ
ಬಳಕೆಯಾಗಿದ್ದು
ದುರಂತ ಅನ್ಯಾಯ
—
ದೀಪವು ಆರುವ ಮುನ್ನ
ಗಾಳಿಗೆ ಹೇಳಿದ
ಕೊನೆಯ ಮಾತು-
‘ನಿನ್ನನ್ನೇ ಪ್ರೀತಿಸುವೆ’.
—
ಬೆತ್ತಲೆ ಕೊಳದ
ಹೊಕ್ಕಳ
ಚುಂಬಿಸುತಿರುವನು
ಹುಣ್ಣಿಮೆಯ
ಪೋಲಿ ಚಂದಿರ
—
ತಂಗಾಳಿಯು
ಉಸಿರಾಡುವಾಗ
ಮೊಗ್ಗುಗಳು ಅರಳಿ
ಹೂವಾದವು
—
ಈ ಮೋಡಗಳಿಗೂ
ಮತ್ತು ಆಕಾಶಕ್ಕೂ
ಅಂತಹ ಯಾವುದೇ
ಬಾಂಧವ್ಯವಿಲ್ಲವೆಂಬ ಸತ್ಯವನ್ನು
ನಾನು ಬಲ್ಲೆ
—
ಬೆತ್ತಲೆ ದುಂಬಿಯ ಕಂಡು
ಬೆತ್ತಲೆ ಹೂವು
ನಾಚಿದ್ದು
ಇದುವರೆಗೂ
ನಾನು ಕಂಡಿಲ್ಲ
—
ರೈತನೆಂದರೆ-
ಕೆಂಪು ಬೆವರಿನ
ಉಪ್ಪುಪ್ಪು ನೆತ್ತರಿನ
ಹಸಿರು ಮನುಷ್ಯ
—
ನಾವಿಬ್ಬರೂ
ಅಂಗೈ ಬೆಸೆದುಕೊಂಡು
ನಡೆದ ಮೇಲಲ್ಲವೇ ?
ಆ ರಸ್ತೆಯ ಇಕ್ಕೆಲಗಳ
ಮರಗಳಲ್ಲಿ
ಹೂವುಗಳು ಅರಳಿದ್ದು!
—
ಕೊಳದ ಮಡಿಲಲ್ಲಿ
ಹೂವಿನಂತ ಮಗು
ಇಂದು ಹುಣ್ಣಿಮೆ
—
ಮಾಲೆ ಕಟ್ಟುವ
ಕೈಗಳಿಗೆ
ಸಾವಿರ ಹೂಗಳ
ಸಾವಿನ ಸೂತಕ
—
ತೀರ ತಬ್ಬುವ
ಕಡಲಿಗೆ
ನೂರು ನದಿಗಳ
ಪ್ರೋತ್ಸಾಹ
—
ವಸುಂಧರೆಯ
ಚೆಲುವ ಮೋಹಿಸಿದ
ಚಂದಿರ
ಬೆಳದಿಂಗಳ ಸ್ಖಲಿಸಿಕೊಂಡ
—
ಬಡಗಿಯ ಬಡತನ
ಸಿರಿವಂತರ
ಮನೆಯ ಸಿಂಗಾರ
—
ಹೂವ ಪ್ರೀತಿಸುವೆ,
ದುಂಬಿಯನೂ..
ನಾನೀಗ
ಯಾರ ಪರ ನಿಂತು
ನ್ಯಾಯ ಹೇಳುವುದು?
—
ಸೌದೆಯನ್ನು ಹೊರೆ
ಹೊತ್ತ
ಅವ್ವನ ನೆತ್ತಿಯ ಮೇಲೆ
ಸಂಸಾರದ
ಹಸುವಿನ ಭಾರ
—
ಮನಸಿಗೂ ತೂಕವುಂಟು!
ಕಿಟಕಿ ಪಕ್ಕದ
ಸೀಟಿನಲ್ಲಿ ಕೂತ ನಿನಗೆ
ಕೈ ಬೀಸುವಾಗ
ಬಲು ಭಾರವೆನಿಸಿತ್ತು.
—
ತಂಗಾಳಿಯ ಹರೆಯಕ್ಕೆ
ಹೂವೊಂದು
ಮೈ ನೆರೆಯಿತು
—
ನೇಸರ
ಮೈ ಮುರಿದು
ಮೇಲೆದ್ದು ಬಂದ
ದೂರ ಬೆಟ್ಟದ
ಮಡಿಲಿನಿಂದ
—
ಸೂಪರ್
Chendada Hani kavithegalu..
kavitegaLalli taajatanavide….nice sir!!!
Chennagive Naveen
ಸೂಪರ್ ಕಣ್ರೀ.. ಪ್ರತಿ ಪದ್ಯವೂ ಇಷ್ಟವಾಯ್ತು.