ಬೆತ್ತಲೆ ದುಂಬಿಯ ಕಂಡು, ಬೆತ್ತಲೆ ಹೂವು ನಾಚಿದ್ದು..

– ನವೀನ್ ಮಧುಗಿರಿ

ಎರಡು ತೀರಗಳು
ಕೈ ಹಿಡಿದು ನಡೆಸುತಿವೆ
ಹರಿವ ನದಿಯನ್ನು
ದೂರ ಕಡಲಿಗೆ

ನ್ಯಾಯಬೆಲೆ ಅಂಗಡಿಯ
ಸೀಮೆಎಣ್ಣೆ
ವರದಕ್ಷಿಣೆ ಕಿರುಕುಳಕ್ಕೆ
ಬಳಕೆಯಾಗಿದ್ದು
ದುರಂತ ಅನ್ಯಾಯ


ದೀಪವು ಆರುವ ಮುನ್ನ
ಗಾಳಿಗೆ ಹೇಳಿದ
ಕೊನೆಯ ಮಾತು-
‘ನಿನ್ನನ್ನೇ ಪ್ರೀತಿಸುವೆ’.

ಬೆತ್ತಲೆ ಕೊಳದ
ಹೊಕ್ಕಳ
ಚುಂಬಿಸುತಿರುವನು
ಹುಣ್ಣಿಮೆಯ
ಪೋಲಿ ಚಂದಿರ

ತಂಗಾಳಿಯು
ಉಸಿರಾಡುವಾಗ
ಮೊಗ್ಗುಗಳು ಅರಳಿ
ಹೂವಾದವು


ಈ ಮೋಡಗಳಿಗೂ
ಮತ್ತು ಆಕಾಶಕ್ಕೂ
ಅಂತಹ ಯಾವುದೇ
ಬಾಂಧವ್ಯವಿಲ್ಲವೆಂಬ ಸತ್ಯವನ್ನು
ನಾನು ಬಲ್ಲೆ

ಬೆತ್ತಲೆ ದುಂಬಿಯ ಕಂಡು
ಬೆತ್ತಲೆ ಹೂವು
ನಾಚಿದ್ದು
ಇದುವರೆಗೂ
ನಾನು ಕಂಡಿಲ್ಲ

ರೈತನೆಂದರೆ-
ಕೆಂಪು ಬೆವರಿನ
ಉಪ್ಪುಪ್ಪು ನೆತ್ತರಿನ
ಹಸಿರು ಮನುಷ್ಯ

ನಾವಿಬ್ಬರೂ
ಅಂಗೈ ಬೆಸೆದುಕೊಂಡು
ನಡೆದ ಮೇಲಲ್ಲವೇ ?
ಆ ರಸ್ತೆಯ ಇಕ್ಕೆಲಗಳ
ಮರಗಳಲ್ಲಿ
ಹೂವುಗಳು ಅರಳಿದ್ದು!


ಕೊಳದ ಮಡಿಲಲ್ಲಿ
ಹೂವಿನಂತ ಮಗು
ಇಂದು ಹುಣ್ಣಿಮೆ

ಮಾಲೆ ಕಟ್ಟುವ
ಕೈಗಳಿಗೆ
ಸಾವಿರ ಹೂಗಳ
ಸಾವಿನ ಸೂತಕ

ತೀರ ತಬ್ಬುವ
ಕಡಲಿಗೆ
ನೂರು ನದಿಗಳ
ಪ್ರೋತ್ಸಾಹ

ವಸುಂಧರೆಯ
ಚೆಲುವ ಮೋಹಿಸಿದ
ಚಂದಿರ
ಬೆಳದಿಂಗಳ ಸ್ಖಲಿಸಿಕೊಂಡ

ಬಡಗಿಯ ಬಡತನ
ಸಿರಿವಂತರ
ಮನೆಯ ಸಿಂಗಾರ

ಹೂವ ಪ್ರೀತಿಸುವೆ,
ದುಂಬಿಯನೂ..
ನಾನೀಗ
ಯಾರ ಪರ ನಿಂತು
ನ್ಯಾಯ ಹೇಳುವುದು?

ಸೌದೆಯನ್ನು ಹೊರೆ
ಹೊತ್ತ
ಅವ್ವನ ನೆತ್ತಿಯ ಮೇಲೆ
ಸಂಸಾರದ
ಹಸುವಿನ ಭಾರ

ಮನಸಿಗೂ ತೂಕವುಂಟು!
ಕಿಟಕಿ ಪಕ್ಕದ
ಸೀಟಿನಲ್ಲಿ ಕೂತ ನಿನಗೆ
ಕೈ ಬೀಸುವಾಗ
ಬಲು ಭಾರವೆನಿಸಿತ್ತು.

ತಂಗಾಳಿಯ ಹರೆಯಕ್ಕೆ
ಹೂವೊಂದು
ಮೈ ನೆರೆಯಿತು

ನೇಸರ
ಮೈ ಮುರಿದು
ಮೇಲೆದ್ದು ಬಂದ
ದೂರ ಬೆಟ್ಟದ
ಮಡಿಲಿನಿಂದ

 
 

‍ಲೇಖಕರು G

December 11, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ

    ಸೂಪರ್ ಕಣ್ರೀ.. ಪ್ರತಿ ಪದ್ಯವೂ ಇಷ್ಟವಾಯ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: