ಶಿಲ್ಪಶ್ರೀ ಜಿ
ದುಃಖಕ್ಕೆ ಮೂಲವಾದ
ಆಸೆಗಳನೆಲ್ಲಾ ಚಿವುಟುತ್ತಾ
ನಿರ್ಮೋಹಿಯಾಗುವುದಾದರೆ
ಕನಸು ಕಾಮನೆ
ಕಲ್ಪನೆಗಳ ತ್ಯಜಿಸಿ
ತ್ಯಾಗಿಯಾಗುವುದಾದರೆ
ಲೋಕಕ್ಕೆ ಕಾಣದ
ಎಲ್ಲಾ ಮುಖವಾಡಗಳ ಕಳಚಿ
ಬೆತ್ತಲಾಗುವುದಾದರೆ
ಭಾವೋದ್ವೇಗಗಳ ಏರಿಳಿತಗಳಿಲ್ಲದೆ
ಸರ್ವಕಾಲಕ್ಕೂ
ಶಾಂತರಸ ಸ್ಥಿರನಾಗುವುದಾದರೆ
ಅರಿಷಡ್ವರ್ಗಗಳ ಹಣಿಸುತ್ತಾ
ಗಾಂಭೀರ್ಯವೇ ಮೈವೆತ್ತಂತೆ
ಬದುಕುವುದಾದರೆ
ಇಹ ಪರಗಳ ನಡುವಿನ
ಪರದೆ ಕಳಚಿ
ಮುಕ್ತನಾಗುವುದಾದರೆ
ಮೌನಿಯಾಗುವುದಾದರೆ
ಧ್ಯಾನಿಯಾಗುವುದಾದರೆ
ಈಗೀಗ
ನಾನೂ
ಬುದ್ಧನಾಗುತ್ತಿರುವ ಭ್ರಾಂತಿ!!
0 ಪ್ರತಿಕ್ರಿಯೆಗಳು