ಬಿ ಎಂ ರೋಹಿಣಿ
‘ತುಷಾರ ಹಾರ’ ಓದಿ ಮುಗಿಸಿದ ಮೇಲೆ ಮಾತು ಮೂಕವಾಗಿದೆ. ನಿಮ್ಮ ಬದುಕಿನ ಆ ಎಂಟು ತಿಂಗಳ ಪ್ರತೀ ನಿಮಿಷವೂ ನೀವು ಅನುಭವಿಸಿದ ನೋವು ಎಷ್ಟು ತೀವ್ರವಾಗಿತ್ತು ಎಂದು ಅರ್ಥವಾಗುತ್ತದೆ. ಓದುವವರ ಕಣ್ಣು ತೇವ ಗೊಳ್ಳುವಂತೆ ಆ ನೋವಿಗೆ ನೀವು ಅಕ್ಷರಶಃ ಕೊಟ್ಟಿದ್ದು ಒಂದು ಅಪೂರ್ವ ಕೆಲಸವಾಗಿದೆ. ಕ್ಯಾನ್ಸರ್ ಬಗ್ಗೆ ಒಬ್ಬ ನುರಿತ ವೈದ್ಯನಿಗಿಂತ ಹೆಚ್ಚಿನ ಅನುಭವ ನಿಮ್ಮದು ಎಂಬುದು ಪುಟ ಪುಟಗಳಲ್ಲಿ ವ್ಯಕ್ತವಾಗಿದೆ. ಡಾಕ್ಟರುಗಳು ರೋಗಿಗಳನ್ನು ಎಷ್ಟೇ ಪ್ರೀತಿಯಿಂದ ಆರೈಕೆ ಮಾಡಿದರೂ, ದೇಹದ ಮೇಲೆ ಪ್ರಯೋಗ ಮಾಡಿಯೇ ಮಾಡುತ್ತಾರೆ. ಯಾಕೆಂದರೆ ಅವರುಗಳು ದೇವರುಗಳಲ್ಲ ವಲ್ಲಾ. ಆ ಪ್ರಯೋಗವು ರೋಗಿಗೆ ಎಷ್ಟೊಂದು ನೋವಿನ ಅನುಭವವನ್ನುಂಟು ಮಾಡುತ್ತದೆಂಬುದು ಅವರಿಗೆ ಮುಖ್ಯವಾಗುವುದಿಲ್ಲ. ಪ್ರಯೋಗ ಮಾಡುತ್ತಾ ರೋಗಿಯನ್ನು ಗುಣಮುಖವಾಗಿಸುವುದೇ ಅವರ ಉದ್ದೇಶವಾಗಿರುತ್ತದೆ, ಎಂಬುದನ್ನು ನಾವು ಒಪ್ಪಿಕೊಂಡರೂ, ಅದರ ತೀವ್ರತೆ ಅವರು ಗಮನಿಸಿದಂತಿಲ್ಲ. ಅಂತಹ ವೈದ್ಯರು ನಿಮ್ಮ ಈ ಕೃತಿಯನ್ನು ಓದಬೇಕು. ಇದು ಡಾಕ್ಟರು, ದಾದಿಯರು ಸೇರಿದಂತೆ ಮಾನವೀಯ ಅಂತಃಕರಣ ಇರುವವರೆಲ್ಲ ಓದಲೇ ಬೇಕಾದ ಪುಸ್ತಕವಾಗಿದೆ.
ಶ್ಯಾಮಲಾ, ಎಷ್ಟೊಂದು ಭಾವಪೂರ್ಣವಾದ ರೀತಿಯಲ್ಲಿ ತುಷಾರನಿಗೆ ಪದಗಳ ಹಾರವನ್ನು ಅರ್ಪಿಸಿದ್ದೀರಲ್ಲ!
ಈ ರೀತಿಯಲ್ಲಿ ಬರೆದ ಇನ್ನೊಂದು ಕೃತಿಯನ್ನು ನಾನು ಓದಿಲ್ಲ.
ನಾಗಲಕ್ಷ್ಮಿಯವರು ಅವರ ಮಗುವನ್ನು ಕಳಕೊಂಡ ಬಗ್ಗೆ ಒಂದು ಅಧ್ಯಾಯದಲ್ಲಿ ತಿಳಿಸಿದ್ದಾರೆ. ನೀವು ಕೊಟ್ಟ ನೀವೇ ಇಂಗ್ಲಿಷ್ ನಲ್ಲಿ ಬರೆದ ಪುಸ್ತಕ – ನೆನಪಿದೆಯೇ? ಆ ತಾಯಿಯ ದುಃಖವೂ ಆಳವಾದ ಗಾಯವನ್ನು ಉಂಟುಮಾಡಿದೆ. ಆದರೆ ತುಷಾರನ ನೋವನ್ನು ನಿಮ್ಮ ಹಾಗೆ ಅರ್ಥ ಮಾಡಿಕೊಂಡ ತಾಯಂದಿರು ವಿರಳ.
ತುಷಾರನೂ ಅಸಾಮಾನ್ಯರಲ್ಲಿ ಅಸಾಮಾನ್ಯ. ಹಾಗೆಯೇ ತಾಯಿಯು ನಿರೂಪಿಸಿದ ರೀತಿಯೂ ವಿಶಿಷ್ಟವಾಗಿದೆ. ಅವನ ಗೆಳೆಯ ಸಂಜಯ್ ಮುಖರ್ಜಿ ಬರೆದ ವಿದಾಯದ ಬರಹವೂ ಎಷ್ಟೊಂದು ಅದ್ಭುತವಾಗಿದೆ. ತುಷಾರನನ್ನು, ಅವನ ವ್ಯಕ್ತಿತ್ವವನ್ನು ಇದಕ್ಕಿಂತ ಚೆನ್ನಾಗಿ ನಿರೂಪಿಸಲು ಸಾಧ್ಯವಿಲ್ಲವೇನೋ ಎಂಬಂತಿದೆ. ಸಂತನಂತೆ ಬಾಳಿದ ತುಷಾರನನ್ನು ಹತ್ತಿರದಿಂದ ಕಂಡ ಅವರೇ ಧನ್ಯರು ಎಂಬ ಭಾವ ನಮ್ಮಲ್ಲಿ ಮೂಡುತ್ತದೆ.
ಇನ್ನು ನೇಮಿಚಂದ್ರ ಅವರು ಕೂಡಾ ನಿಮ್ಮ ಕೆರೆಗೆ ಸ್ಪಂದಿಸಿದ ರೀತಿಯೂ ಅನನ್ಯವಾಗಿದೆ.
ಶ್ಯಾಮಲಾ, ಹೀಗೊಂದು ಅಗ್ನಿದಿವ್ಯವನ್ನು ಹಾದು ಬಂದ ನಿಮ್ಮ ಸಹನೆಗೆ, ಪ್ರೀತಿಗೆ ನಮೋ ಎನ್ನುತ್ತೇನೆ.
ಹರ್ಷನನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.ತಿಂಗಳುಗಳ ಕಾಲ ಅಣ್ಣನ ಬಗ್ಗೆ ವಹಿಸಿದ ಕಾಳಜಿ ಅನನ್ಯ. ಅದೂ ನಿಮ್ಮ ಮಾಳಿಗೆ ಹತ್ತಿ ಬರುವ ಕಷ್ಟವಿದೆಯಲ್ಲಾ! ಹರ್ಷ ಅಣ್ಣನನ್ನು ಶುಶ್ರೂಷೆ ಮಾಡಿದ ರೀತಿಗೂ ನಮೋ ಎನ್ನುತ್ತೇನೆ.
ಕೃತಿ: ‘ತುಷಾರಹಾರ’
ಪ್ರಕಾಶನ : ಬಹುರೂಪಿ
ಪುಟಗಳು : 154
ಬೆಲೆ : ರೂ 175
ಪ್ರತಿಗಳಿಗಾಗಿ ಸಂಪರ್ಕಿಸಿ : 70191 82729
ಅಥವಾ ಇಲ್ಲಿ ಭೇಟಿ ಕೊಡಿ : https://bit.ly/3Nfm4pQ
0 ಪ್ರತಿಕ್ರಿಯೆಗಳು