ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಸಿಯೂಟದಲ್ಲಿ ಆಕೆಯ ಹೆಸರಿದೆ..

ಅಂಜಲಿ ರಾಮಣ್ಣ
ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ

ಶಾಲೆಗಳಲ್ಲಿ ’ ಬಿಸಿಯೂಟ ’ ನೀಡುವ ವಿಷಯ ನಮ್ಮೆಲ್ಲರಿಗೂ ತಿಳಿದಿದೆ. ಸರ್ಕಾರಗಳು ಮಕ್ಕಳಿಗಾಗಿ ಮಾಡುತ್ತಿರುವ ದೊಡ್ಡ ದಾನ ಇದು ಎಂದುಕೊಂಡು ಬೀಗುತ್ತಿವೆ. ಒಂದೊಮ್ಮೆ ಮಿಡ್ ಡೇ ಮೀಲ್ಸ್ ಎನಿಸಿಕೊಳ್ಳುತ್ತಿದ್ದ, ಮಕ್ಕಳ ಹೊಟ್ಟೆ ತುಂಬಿಸಬೇಕು ಎನ್ನುವ ಈ ಕರ್ತವ್ಯ ಪ್ರಜ್ಞೆ ಜೀವ ಪಡೆದು ಇಂದಿಗೆ ನೂರು ವರ್ಷಗಳು.

ಮೊದಲ ಬಾರಿಗೆ ಮಕ್ಕಳ ಬಗ್ಗೆ ಜಗತ್ತಿನ ಸಂವೇದನೆಯನ್ನು ಜಾಗೃತಗೊಳಿಸಿ ನಾವುಗಳು ಮೃಗಗಳಾಗಿಯೇ ಕೊನೆಗೊಳ್ಳುವುದನ್ನು ತಪ್ಪಿಸಿದ್ದು ಎಗ್ಲಾಂಟೈನ್ ಜೆಬ್ ಎನ್ನುವ ಹೆಣ್ಣು-ಕಣ್ಣು. ಸೂಕ್ಷ್ಮ ಹೃದಯಿ, ಚುರುಕು ಮೆದುಳಿನ ಜೆಬ್ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದು ಶಿಕ್ಷಕಿಯಾಗಿದ್ದವಳು. ಮೊದಲನೆಯ ಮಹಾಯುದ್ಧದ ಸಂದರ್ಭದಲ್ಲಿ ತನ್ನ ಶಾಲೆಗೆ ಬರುತ್ತಿದ್ದ ಮಕ್ಕಳ ಮನೆಗಳನ್ನು ಭೇಟಿ ಮಾಡಿದ ಕಾರಣದಿಂದ ಮಕ್ಕಳ ಲೋಕಕ್ಕೆ ಅಡಿಯಿಟ್ಟು ಅವರ ಲೋಕವೇ ನಿಜದ ಲೋಕ ಎನ್ನುವ ಸತ್ಯವನ್ನು ಜಗತ್ತಿಗೆ ನೀಡುತ್ತಾಳೆ.

ಬಡತನ, ಅನಕ್ಷರತೆ, ಬಾಲ್ಯವಿವಾಹ, ಅಪೌಷ್ಟಿಕತೆ, ಬಾಣಂತಿ ಸಾವು, ಮದ್ಯವ್ಯಸನಿ ಅಪ್ಪಂದಿರು, ಕೌಟುಂಬಿಕ ದೌರ್ಜನ್ಯದಿಂದ ಜರ್ಝರಿತಗೊಂಡ ಮಕ್ಕಳನ್ನು ಹತ್ತಿರದಿಂದ ಕಂಡು ಮಮ್ಮಲ ಮರುಗುತ್ತಾಳೆ. ಇಂತಹ ಕ್ರೂರ ಬದುಕಿನ ಆಚೆಯಲ್ಲಿ ಮಕ್ಕಳಿಗೆ ಸಾಮಾನ್ಯ ಬದುಕು ಕೊಡಲು ಸಾಧ್ಯವೇ ಎಂದು ಯೋಚಿಸುತ್ತಾಳೆ. ೧೯೧೯ರಲ್ಲಿ ಸೇವ್ ದ ಚಿಲ್ಡ್ರೆನ್ ಎನ್ನುವ ಸಂಸ್ಥೆಯನ್ನು ಆರಂಭಿಸಿ ಕಾರ್ಯತತ್ಪರಳಾಗುತ್ತಾಳೆ ಎಗ್ಲಾಂಟೈನ್ ಜೆಬ್.

ಕರಾಳ ಯುದ್ಧ ಕೊನೆಗೊಳ್ಳುವ ಸಮಯದಲ್ಲಿ ಅದರ ಫಲವಾಗಿ ನಿರಾಶ್ರಿತರಾದವರು, ಅನಾಥರಾದವರು, ನಿರುದ್ಯೋಗಿಗಳು, ಅಂಗವಿಕಲರು ಇವರುಗಳ ದಟ್ಟಣೆಯ ನಡುವೆ ಶಾಲೆಗೆ ಬರಲಾರದೆ ತತ್ತರಿಸಿಹೋಗುವ ಮಕ್ಕಳನ್ನು ಕಂಡು ಜೆಬ್ ಶಾಲೆಗೆ ಬರುವ ಮಕ್ಕಳಿಗೆ ಮಧ್ಯಾಹ್ನದ ವೇಳೆ ಪೌಷ್ಟಿಕ ಆಹಾರವನ್ನು ಒದಗಿಸುವಂತಾದರೆ ಅವರ ಜೀವನ ಮಟ್ಟ ಏರುತ್ತದೆ ಎನ್ನುವ ಖಚಿತ ನಂಬಿಕೆಯಿಂದ ಸತತ ಒಂಭತ್ತು ವರ್ಷಗಳ ಹೋರಾಟ ನಡೆಸಿ ೧೯೪೪ರಲ್ಲಿ ಮೊದಲ ಬಾರಿಗೆ ಬ್ರಿಟೀಷ್ ಸರ್ಕಾರ ಮಿಡ್ ಡೇ ಮೀಲ್ ಯೋಜನೆಯನ್ನು ಜಾರಿಗೆ ತರುವಲ್ಲಿ ಸಫಲಳಾಗುತ್ತಾಳೆ. ಹೀಗೆ ಆರಂಭವಾಗಿದ್ದು ಶಾಲ ಮಕ್ಕಳಿಗೆ ಇಂದು ಸಿಗುತ್ತಿರುವ ’ ಬಿಸಿಯೂಟ ’

ಹೀಗೆ ಎಲ್ಲಾ ಮಕ್ಕಳ ಹಕ್ಕುಗಳ ಪರಿಕಲ್ಪನೆಯನ್ನು ಜಗತ್ತಿಗೆ ಮೊದಲಬಾರಿಗೆ ಪರಿಚಯಿಸಿದ ಜೆಬ್ ಬಗ್ಗೆ ಭಾರತದಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರ ಪುಸ್ತಕ ಪ್ರಕಟವಾಗಿದೆ. ಇದೊಂದು ಎಲ್ಲರೂ ಓದಲೇ ಬೇಕಾದ ಮಾನವಗಾಥೆ.

ತುಂಬಿದ ಹೊಟ್ಟೆ ವಿಶ್ವದ ಮತ್ತು ಬದುಕಿನ ದಿಕ್ಕನ್ನೇ ಬದಲಿಸಬಲ್ಲುದು. ಮಾನವ ಜಗತ್ತಿನ ಗುಣಮಟ್ಟವನ್ನು ಹೆಚ್ಚಿಸಬಲ್ಲುದು. ಮಕ್ಕಳ ಹೊಟ್ಟೆ ತುಂಬಿಸುವುದು ನಮ್ಮ ಉದಾರತೆ ಅಲ್ಲ. ನಮ್ಮ ಕರ್ತವ್ಯವೂ ಅಲ್ಲ. ಅದು ನಮಗೆ ನಾವೇ ಕೊಟ್ಟುಕೊಳ್ಳುವ ಜೀವದಾನ. ನಾವು ಮನುಷ್ಯರಾಗುವ ಒಂದು ವಿಧಾನ.

#UNCRC30

‘ಬಹುರೂಪಿ’ ಎಗ್ಲಾಂಟೈನ್ ಜೆಬ್ ಕುರಿತ ಆಕೆ ಮಕ್ಕಳನ್ನು ರಕ್ಷಿಸಿದಳು.. ಕೃತಿಯನ್ನು ಹೊರತಂದಿದೆ.

ಈ ಕೃತಿಯ ಲೇಖಕರು ಮಕ್ಕಳ ಹಕ್ಕುಗಳ ಬಗ್ಗೆ ವ್ಯಾಪಕ ಆಂದೋಲನ ನಡೆಸಿರುವ ಎನ್ ವಿ ವಾಸುದೇವ ಶರ್ಮಾ 

ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ-

‍ಲೇಖಕರು avadhi

17 November, 2019

2 Comments

  1. T S SHRAVANA KUMARI

    ಎಗ್ಲಾಂಟೈನ್ ಜೆಬ್‌ಗೆ ಕೋಟಿ ನಮನಗಳು

  2. Vasudeva Sharma

    Thank you Anjali and Avadhi.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading