ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದಲೋಟಿ ರಂಗನಾಥ್ ಹೊಸ ಕವಿತೆ- ಗಾಳಿಯೂ ವಿಷವಾಗುವ ಭಯದಲ್ಲಿ!

ಬಿದಲೋಟಿ ರಂಗನಾಥ್

ಇಲ್ಲೊಂದು ಹಕ್ಕಿಗೆ ನೆತ್ತರ ವಾಸನೆ
ಹಾದಿ ಬದಿಯಲ್ಲಿ ಲಾಂಗು ಮಚ್ಚಿನ ಸದ್ದು
ಇದು ಹಿಂದುವೋ ಮುಸಲ್ಮಾನೋ
ಕ್ರಿಶ್ಚಿಯನ್ನೋ ಗೊತ್ತಿಲ್ಲ

ಅಲ್ಲಿ ಬಡಿದಾಡುವವರ ತಲೆಯ ಮೇಲೆ
ಟೋಪಿಯಿದೆ
ಎದುರಾಳಿಯ ಸೊಂಟದಲ್ಲಿ
ಉಡದಾರವಿರುವ ಯಾವ ಸೂಚನೆಯೂ ಇಲ್ಲ
ಅಯ್ಯೋ ಮಂಜು ಮುಸುಕಿದೆಯಲ್ಲ
ಅವರೇನು ಪ್ರಾಣಿಗಳೋ
ಮನುಷ್ಯರೋ
ಮತ್ತೆ ಮತ್ತೆ ಕಣ್ಣುಜ್ಜಿ ನೋಡಿದೆ

ಅರೆ ಬೆತ್ತಲ ಡುಮ್ಮು ಹಕ್ಕಿಯ
ಹೊಟ್ಟೆಯ ಮೇಲೆ ದಾರ ಸಡಿಲಾಗಿದೆ
ಜುಟ್ಟು ಕರಡಿ ಕಣ್ಣೊತ್ತಿದೆ
ಮಂತ್ರಗಳು ಎಲ್ಲರನ್ನೂ ಮಂಕು ಮಾಡಿವೆ

ಮತದಾನ ಕದ್ದವರ ಕುಕ್ಕುವ ಹಕ್ಕಿಗಳು
ದಾರಿ ಕಾಯುತ್ತಿವೆ
ಈ ಹಕ್ಕಿಯು ಅಲ್ಲಿಗೆ ಹಾರಲು
ಉಡದಾರ ಕಿತ್ತು ಪುಟಗೋಸಿ ತೊಟ್ಟು
ಮನಸು ಮಾಡಬೇಕಿದೆ

ಇದೆನು ಕಮ್ಮಿ ಹಕ್ಕಿಯಲ್ಲ
ಟೋಪಿ ಹೊತ್ತ ತಲೆ
ಗಡ್ಡ ಬಿಟ್ಟ ಕೆನ್ನೆಗಳ ಹುಡುಕುತ್ತಿದೆ
ಲಾಂಗು ಮಚ್ಚುಗಳು ನೆತ್ತರ ಕುಡಿಯುತ್ತಿವೆ

ಕವಿಯು ಕಣ್ಣಗಲಿಸಿಕೊಂಡು ನೋಡುತ್ತಿದ್ದಾನೆ
ಎದೆಯ ಮೇಲೆ ಮಲಗಿದ ಹಕ್ಕಿ ಮರಿಗಳು
ಮರವಿರುವ ನೆಲವ ಹುಡುಕುತ್ತಿವೆ
ಹಾರಲು ರೆಕ್ಕೆ ಬಲಿತಿಲ್ಲ !

ಆಳುವವನ ಕಾನೂನು
ಬೀದಿಯ ರಂಪದ ಸೂಚನೆ
ನೆತ್ತರುಗುಳುವ ಗುಲಾಬಿಗಳು
ಮನೆ ಮುಂದಿನ ಅಪಶಕುನದಂತೆ
ಗಾಳಿಯ ಮೈಸವರುತ್ತಿವೆ

ಗಾಳಿಯೂ ವಿಷವಾಗುವ ಭಯದಲ್ಲಿ
ಮಗು ಬಿಕ್ಕಳಿಸಿ ಅಳುತ್ತಿದೆ
ನೂರಾರು ಹಕ್ಕಿಗಳು ಗೂಡರಿಸಿ ಕೂತಿವೆ
ಅಷ್ಟು ದೂರದಲ್ಲಿ
ಬಿದ್ದ ಶವಗಳ ವಾಸನೆಗೆ ಹೆದರಿ
ಅಲ್ಲಿ ಅಪ್ಪನೂ ಇರಬಹುದು
ಅಮ್ಮನೂ ಇರಬಹುದು
ಬಂಧುವೂ ಆಗಿರಬಹುದು
ಇಸ್ಲಾಂ ಹಿಂದು ಕ್ರಿಶ್ಚಿಯನ್
ಯಾರದಾರೂ ಆಗಿರಬಹುದು

ದೊರೆಯ ಕುರ್ಚಿಯ ಮೇಲೆ
ಕಮಲದ ಚಿತ್ರ ರಕ್ತ ಸಿಡಿದರೂ
ರಂಗೇರುತ್ತಲೇ ಇದೆ.

‍ಲೇಖಕರು Admin

16 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading