ಪ್ರತಿಷ್ಠಿತ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಡಾ. ಶೋಭಾ ನಾಯಕ್ ಮತ್ತು ಬಿದಲೋಟಿ ರಂಗನಾಥ್ ಅವರನ್ನು ಆಯ್ಕೆ ಮಾಡಲಾಗಿದೆ.
ಡಿಸೆಂಬರ್ ನಲ್ಲಿ ಕೊಪ್ಪಳದಲ್ಲಿ ನಡೆಯುವ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು ಎಂದು ವೇದಿಕೆ ಮತ್ತು ತಳಮಳ ಪ್ರಕಾಶನದ ಪರವಾಗಿ ಮಹೇಶ ಬಳ್ಳಾರಿ ತಿಳಿಸಿದ್ದಾರೆ.
೨೦೨೦ ರ ಸಾಲಿನ ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ೫೬ ಹಸ್ತಪ್ರತಿಗಳು ಬಂದಿದ್ದವು. ಕೊನೆಯ ಹಂತದಲ್ಲಿ ಅಂಕಗಳು ಸಮ ಬಂದ ಕಾರಣ ಇಬ್ಬರು ಕವಿಗಳ ಹಸ್ತಪ್ರತಿಗಳನ್ನು ಆಯ್ಕೆ ಮಾಡಲಾಗಿದೆ.
ಉತ್ತರ ಕನ್ನಡ ಮೂಲದ ಶೋಭಾ ನಾಯಕ್ ರ ‘ಶಯ್ಯಾಗೃಹದ ಸುದ್ದಿಗಳು’ ಮತ್ತು ತುಮಕೂರು ಜಿಲ್ಲೆಯ ಮಧುಗಿರಿಯ ಬಿದಲೋಟಿ ರಂಗನಾಥರ ‘ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ’ ಹಸ್ತಪ್ರತಿಗಳು ಈ ಸಲದ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿವೆ.
ಹಿರಿಯ ಕವಿಗಳಾದ ಸತೀಶ ಕುಲಕರ್ಣಿ ಮತ್ತು ಈಶ್ವರ್ ಹತ್ತಿ ತೀರ್ಪುಗಾರರಾಗಿದ್ದರು
ಪ್ರಶಸ್ತಿ ತಲಾ ೫ ಸಾವಿರ ರೂ. ನಗದು ಬಹುಮಾನ ಮತ್ತು ಫಲಕವನ್ನು ಒಳಗೊಂಡಿದೆ.
ಈರ್ವರು ಪುರಸ್ಕೃತರಿಗೂ ಹೃತ್ಪೂರ್ವಕ ಅಭಿನಂದನೆಗಳು.