ಶುಭಾ ಎ ಆರ್
ಮೂಕ ಧ್ವನಿ
ಕೊಟ್ಟು ಕೊಳ್ಳುವೀ
ಜಗದಲ್ಲಿ ಪ್ರೀತಿಯಿತ್ತು
ಪ್ರೀತಿ ಪಡೆದವರಿಲ್ಲವೆಂದಲ್ಲ
ಪ್ರೀತಿ ತೆತ್ತು
ನೋವ ಕೊಂಡವರೂ ಇದ್ದಾರೆ
ಗೊತ್ತೇನೆ ಗೆಳತಿ.
ಎಂದೋ ಕೇಳಿದ್ದು
ಬಿತ್ತಿದಂತೆ ಫಲ
ಕೊಟ್ಟಷ್ಟೇ ಪ್ರಾಪ್ತಿ
ಬಿತ್ತಿದ್ದೆಲ್ಲಾ ಬೆಳೆಯಲೇಬೇಕೆ?
ಬೆಳೆದರೂ ಫಲ ಕೊಡಲೇಬೇಕೇನೆ?
ಬೆಳದಿಂಗಳಿಗಾಗಿ ಹಂಬಲಿಸದವರಾರು
ನೋವುಂಡು ಕವಿಯಾಗದವರಾರು
ಧಾರೆ ಸುರಿವ ಬೆಳದಿಂಗಳಿಗೆ
ಕಣ್ಮುಚ್ಚಿ
ಚಂದಿರನ ಕಲೆಗಳಿಗೆ ಬೇಸರಿಸಿದರೇನೆನ್ನುವುದೆ
ಕಲೆಹೊತ್ತ ಚಂದಿರನಷ್ಟೇ
ಸತ್ಯ ಈ ಬೆಳದಿಂಗಳು!
ನೀ ಏನೇ ಹೇಳು
ಅರ್ಥವಾಗದ ಪದ್ಯವೇನಲ್ಲ
ಈ ಬದುಕು
ಅರಿಯದ ಸೋಗಿಗೆ
ಬೆರಗಿನ ಮುಖವಾಡ
ಬೇಕೇ ಬೇಕೇನೆ?
ಗೊತ್ತಿದೆ ಬಿಡು ಗೆಳತಿ
ನಿನ್ನ ಬಳಿಯುತ್ತರವಿಲ್ಲ
ನನ್ನನ್ನು ನಿನ್ನನ್ನು
ನಮ್ಮಂತವರನ್ನು
ಬಿಡದೆ ಕಾಡುವ
ಪ್ರಶ್ನೆಗಳು ತಾನೆ ಇವೆಲ್ಲ!
0 ಪ್ರತಿಕ್ರಿಯೆಗಳು