ಉರಿಮೊಳೆ
ಅನುಪಮಾ ಪ್ರಸಾದ್
ಅಪಮಾನದ ಉರಿಮೊಳೆಯ
ಎದೆಯೊಳಗೆ ನೆಟ್ಟು
ಯಾತನೆಗಳ ಮೂಟೆಯ
ಬೆನ್ನ ಮೇಲೆ ಹೊತ್ತು
ಪ್ರತಿರೋಧದ ನರದ ಉಸಿರ ಹತ್ತಿಕ್ಕಿ
ಬೆಂಗಾಡಿನಲಿ ಸುಡುನೆತ್ತಿಯಲಿ
ಮೈಲುದ್ದ ನಡೆದು ನಿಗಿನಿಗಿ ಒಲೆಯಾಗಿದೆ ಕರುಳು||
ನರ ನಾಡಿಗಳು ಬತ್ತುವ ಮುನ್ನ
ದೇಹ ಗಡಿಗೆ ಸೀಯುವ ಮುನ್ನ
ಸೆಲೆಯಿಲ್ಲದ ಗಂಟಲಿಗೆ ಜೀವಬನಿಯಾಗಿ
ಹೊಕ್ಕುಳ ಸುಳಿಯಿಂದ ಪಾಕವಾಗಿ ಬರುವ ದನಿಗಾಗಿ
ಶತ ಶತಮಾನಗಳಿಂದ ಜೀವ ಕಾಯುತ್ತಿದೆ
ಹಾಡುವುದಿದೆ ನನಗೆ ಎದೆ ಸುಡುವ ದಾವಾನಲದ ಗಾಥೆ
ಆತ್ಮ ಕಲಕುವ ನೋವಿನ ಗೀತೆ
ಬಾ ದನಿಯೆ ಬಾ ತನುವಿನೊಳಗೆ ತಾನಾಗಿ ಬಾ||
0 ಪ್ರತಿಕ್ರಿಯೆಗಳು