ಯಮುನಾ ಗಾಂವ್ಕರ್
ಒರಗೋಳಿ ಭತ್ತ ಹೊಯ್ದೆ| ಮನಗೋಳಿ ನೆಂಟರೆ ಬಂದೋ
ನೋಡಣ್ಣಲಿವರ ಮನೆ ಸಿರಿಯೋ| ಮಂಟಪಸಿರಿಯೋ
ದನಮೆಂದೆ ದಾನಿ ಬೆಳೆದಾವೋ| ಕರಮೆಂದೆ ಕರ್ಕಿ ತಿಗರಿದಾವೋ||
ಎನ್ನುತ್ತ ಕಡು ಬಡತನದಲ್ಲೂ ಮನದ ಸಿರಿವಂತಿಕೆ ತೋರುವ ನನ್ನೂರ ಮೂಲ ಬುಡಕಟ್ಟುಗಳಲ್ಲೊಂದಾದ ಹಾಲಕ್ಕಿ ಸಮುದಾಯದ ನುಗ್ಲಿ ಗಣೇಶ ಗೌಡರ ಜೊತೆಗೆ ಅಂಕೋಲೆಯ ಬಡಿಗೇರಿಯಲ್ಲಿ ಭೇಟಿಯಾಗುವ ದಿಢೀರ್ ಅವಕಾಶ ಬಂತು.
ತಾರ್ಲೆ, ಪುಗಡಿ, ಸುಗ್ಗಿ, ಸಮಾಜವನ್ನು ವಿಡಂಬನೆಗೆ ಹಚ್ಚುವ ಹಗಣ, ಗುಮಟೆ ಪಾಂಗ್ ಮುಂತಾದ ಶ್ರೀಮಂತ ಸಾಂಸ್ಕೃತಿಕ ಬದುಕು ಮತ್ತು ಕಲಾಪ್ರಕಾರಗಳನ್ನು ಒಡಲಲ್ಲಿಟ್ಟ ಹಾಲಕ್ಕಿ ಸಮುದಾಯ ಜಿಲ್ಲೆಯ ಪ್ರಧಾನ ಜನಸಂಖ್ಯೆಗಳಲ್ಲಿ ಒಂದು.
ಆದರೆ ಮೂಲಸೌಕರ್ಯ, ಶಿಕ್ಷಣ, ಉದ್ಯೋಗ ವಿಚಾರದಲ್ಲಿ ಹಿಂದಿದೆ. ಇನ್ನೂ ಘೋಷಿತ ಬುಡಕಟ್ಟು ಆಗದೇ ಸಂವಿಧಾನಬದ್ಧ ಸೌಲಭ್ಯಗಳೂ ಸಿಗದೇ ಸಂಕಷ್ಟದಲ್ಲಿರುವ ಜಿಲ್ಲೆಯ ಹಾಲಕ್ಕಿ, ಕುಣಬಿ, ಗೌಳಿ ಜನರ ಬದುಕನ್ನು ನಾವು ಇನ್ನೂ ಅರ್ಥ ಮಾಡಿಕೊಂಡಿಲ್ಲ ಎಂದೇ ನನಗನಿಸುತ್ತದೆ.
ಸರ್ಕಾರದ ವಿವಿಧ ಸಮಿತಿಗಳು ಏನು ಅಭ್ಯಾಸ ಮಾಡಿದವೋ ನಾನರಿಯೆ. ಆ ಯಾವ ಸಮಿತಿಯಲ್ಲೂ ಬಹುಶಃ ಇವರ ಬದುಕನ್ನು ಹತ್ತಿರದಿಂದ ನೋಡಿದವರು ಅಥವಾ ಇವರದೇ ವಾಡೆಯಲ್ಲೋ – ತಾಲ್ಲೂಕಿನಲ್ಲೋ ವಾಸಿಸುವವರು ಸದಸ್ಯರಾಗಿಲ್ಲದಿರುವುದರಿಂದಲೇ ಬುಡಕಟ್ಟು ಕುರಿತು ವಸ್ತುನಿಷ್ಟ ಅಧ್ಯಯನ ಆಗಿಲ್ಲ.
ಕೇವಲ ಚುನಾವಣಾ ಆಶ್ವಾಸನೆಗಳು ಮಾತ್ರ ಹೊಟ್ಟೆತುಂಬಿಸಿವೆ ಕೆಲವರಿಗೆ. ನನಗೆ ಮೊದಲಿನಿಂದಲೂ ಸುತ್ತಲಿನ ಜನತೆಯ ಬದುಕು ಮತ್ತು ಅವರ ಬಾಳಬುತ್ತಿ ಶ್ರೀಮಂತಗೊಳಿಸಿದ ಶ್ರಮಸಂಸ್ಕೃತಿ ಅಧ್ಯಯನ ಆಸಕ್ತಿಯ ಕ್ಷೇತ್ರ.
ಬಾಳೆಲ್ಲ ಒಡಲುರಿಯಲ್ಲಿ ಹಾಡಾಗಿಸಿದ ಜನಪದರು ಒಂದು ಮಾನವೀಯ ಸಮಾಜ ಕಟ್ಟುವ ಹೊಣೆ ಹೊರಿಸಿದ್ದಾರಂತಲೇ ನಾನು ಭಾವಿಸುವೆ. ಅದಕ್ಕೆ ಉತ್ತರದಾಯಿತ್ವ ನಾವು ವಹಿಸಬೇಕಿದೆ.
0 ಪ್ರತಿಕ್ರಿಯೆಗಳು