ರೇಖಾ ಗೌಡ
ಕೆಲವು ಅನುಭವಗಳನ್ನ ಮಾತಲ್ಲಿ, ಪದಗಳಲ್ಲಿ ವಿವರಿಸಿದರೂ ಅರಿಯಲಾಗದು. ಅನುಭವಿಸಿಯೇ ತಿಳಿಯಬೇಕು. ಈ ಕೃತಿಯಲ್ಲಿರುವ ಸ್ಫೂರ್ತಿ, ದೃಷ್ಟಿಕೋನ, ಅರಿವನ್ನು ಓದಿಯೇ ಪಡೆದುಕೊಳ್ಳಬೇಕು.
ಮತ್ತೆ ಮತ್ತೆ ಮೆಲುಕು ಹಾಕಬೇಕಾದ, ನಮ್ಮದಾಗಿಸಿಕೊಳ್ಳಬೇಕಾದ ಅವರದೇ quotes, ನಾವು ಬರೆದಿಟ್ಟುಕೊಳ್ಳಲಾರದಷ್ಟಿವೆ. ಸ್ಪೂರ್ತಿಯುತವಾದ ಈ ಕೃತಿ, ಜೀವನದಲ್ಲಿ ಎದುರಾಗುವ ಅತ್ಯಂತ ಕಠಿಣ ಸವಾಲುಗಳ ಎದುರಿಸಲು ಇರಬೇಕಿರುವ ಮನಸ್ಥಿತಿ, ಇಂಥ ಪರಿಸ್ಥಿತಿಯಲ್ಲಿ ಬೇಕಿರುವ ವಿನೋದದ ಮನಸ್ಥಿತಿಯ ಅಗತ್ಯಗಳನ್ನು ಮನಗಾಣಿಸುತ್ತದೆ.
ತಾನು ಧೈರ್ಯದಿಂದಿರುವ ಮೂಲಕ ಮನೆಯವರಿಗೂ ಧೈರ್ಯ ನೀಡುವ, ಮನೆಯವರು ಧೈರ್ಯವಾಗಿದ್ದು ಮಗಳಿಗೆ ಧೈರ್ಯ ತುಂಬುವ ಅಗತ್ಯ ಎಷ್ಟು ಅತ್ಯಗತ್ಯ ಎಂದು ತೋರಿಸಿಕೊಡುತ್ತದೆ.
ತಡೆದುಕೊಳ್ಳಲಾರರೆಂದು, ಆತ್ಮೀಯರೊಂದಿಗೇ ಕೆಲವೊಂದು ಸಂಗತಿಗಳನ್ನು ಹೇಳಿಕೊಳ್ಳಲಾಗದ, ಮುಚ್ಚಿಡಬೇಕಾದ ಅಸಹಾಯಕ ಸ್ಥಿತಿ ಒಂದು ಕಡೆ, ಇನ್ನು ಕೆಲ ಆತ್ಮೀಯರು, ಪ್ರೀತಿಸುವ ಜೀವದ ರಕ್ಷೆಗಾಗಿ ಭಯ, ಚಿಂತೆ, ದುಗುಡ ದುಮ್ಮಾನಗಳನ್ನು ಮೀರುವ ಪರಿ, ಅದು ಪ್ರೀತಿಯ ಪರಿ, ಅದು ಇನ್ನೊಂದು ಕಡೆ.
ಯಾವುದೇ ಕಷ್ಟ ಬಂದಾಗ ಮನೆಯವರೆಲ್ಲರೂ ಒಗ್ಗಟ್ಟಾಗಿ ಎದುರಿಸಿದರೆ ಯಾವ ಕಷ್ಟವೂ ದೊಡ್ಡದಲ್ಲ ಎಂಬ ಅಮೂಲ್ಯ ಅರಿವು, ಒಬ್ಬರಿಗೊಬ್ಬರು ಧೈರ್ಯ ತುಂಬುವ, ಚೈತನ್ಯ, ಸಹಕಾರ ನೀಡುವ ಅವಶ್ಯಕತೆ!
ಖಾಯಿಲೆಗಳ ಕುರಿತಾದ ಪುಸ್ತಕಗಳ ಓದಲು ಹಿಂದೆ ಮುಂದೆ ನೋಡುವವರಿಗೆ, ಭಯ ಪಡುವವವರಿಗೆ ಈ ಕೃತಿ ಕಂಗೆಡಿಸದೆ, ಧೈರ್ಯ ತುಂಬುವ ಕೆಲಸ ಮಾಡುತ್ತದೆ. ಆ ಮೂಲಕ ಈ ಮೊದಲಿಂದಲೂ ಅವರಲ್ಲಿದ್ದಿರಬಹುದಾದ ಪೂರ್ವಾಗ್ರಹ, ಗೊಂದಲ, ಭಯಗಳನ್ನ ನಿವಾರಿಸುತ್ತದೆ.
ಸಾವು ಬದುಕಿನ ಹೋರಾಟದಲ್ಲಿ, ಪ್ರಯತ್ನ, ಹೋರಾಟಗಳ ಯಾವೆಲ್ಲ ಅಂಶಗಳು ಬದುಕಿಸುತ್ತವೋ ಕರಾರುವಾಕ್ಕಾಗಿ ಹೇಳಲು ಸಾಧ್ಯವಿಲ್ಲ. ಆದರೆ ಈ ಮೇಲೆ ಪ್ರಸ್ತಾಪಿಸಿರುವ, ಹಾಗೂ ಕೃತಿಯಲ್ಲಿರುವ ಧನಾತ್ಮಕ ನೋಟ, ಮನಸ್ಥಿತಿ, ಪ್ರಯತ್ನಗಳು ಬದುಕು ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದೇ ಅನಿಸುತ್ತದೆ. ಪ್ರತಿಯೊಬ್ಬರೂ ಓದಬೇಕಾದ ಈ ಕೃತಿಯನ್ನು ಓದಿ ಹಾಗೂ ಇತರರಿಗೂ ಓದಿಸಿ.
0 ಪ್ರತಿಕ್ರಿಯೆಗಳು