ಲತಾ ವಾಲಿ
ಬುದ್ಧ ಬಸವ ಭೀಮರ
ಕನಸುಗಳು ನಾವು
ಶತಮಾನದಿಂದಲೂ
ನೊಂದ ಕುಸುಮಗಳು
ಅಕ್ಕರೆಯಲಿ ಅಕ್ಷರದ ತುತ್ತನಿತ್ತು
ಆರ್ಥಿಕ ಸಬಲೀಕರಣದ
ಸ್ವಾಭಿಮಾನದ ಹಾದಿಯಲ್ಲಿ
ನಿತ್ಯ ಜೊತೆ ನಿಂತರು
ಇಷ್ಟಾದರೂ ಬದಲಾದದ್ದೇನು?
ಇಷ್ಟಾದರೂ ಬದಲಾದದ್ದೇನು?
ಮನುವಿನ ಸಂದೇಶಗಳಂಗಿಯ
ಬಣ್ಣವಿರಬೇಕು
ಛದ್ಮವೇಷಗಳ ಬಿಂಬವಿರಬೇಕು
ಬದುಕು ನಮ್ಮದು
ರೀತಿ ನಿಮ್ಮದು
ತಪ್ಪಿ ನಡೆದರೆ ತಲೆದಂಡ
ವಿಧಿಯ ಹಣೆಬರಹದಡಿ
ಕೊಳೆಯುತ್ತಿರುವ ಬದುಕ ಪ್ರಶ್ನಿಸಿದ
ಅದೆಷ್ಟು ಹೆಣ್ಣುಗಳ ಎದೆ ಸೀಳಿದೆಯೋ
ಈ ನೆಲ
ಗುಲಾಬಿಯ ಕೆಂಪು ರಂಗೇರುತ್ತಿದೆ
ಕಿಚ್ಚು ಹತ್ತಿ ಉರಿಯುತ್ತಿದ್ದರೂ
ಹೆಪ್ಪುಗಟ್ಟಿದ ಸೂರ್ಯನೊಡಲು
ಕಪ್ಪಿಟ್ಟ ಚಂದ್ರ,ತಲ್ಲಣಗಳ ಜೊತೆಗೆ
ಕುದಿವ ಜ್ವಾಲಾಮುಖಿ
ನಮ್ಮ ಬದುಕಿನ ಸಖಿ
ಸಮಾನತೆಯ ಸೋಗಿನಲಿ
ಅಸಮತೆಯ ಬ್ರಹ್ಮರಾಕ್ಷಸ
ಧುತ್ತನೆದ್ದು ಬರುತಿರಲು
ಬೆಚ್ಚಿಬೀಳುತ್ತೇವೆ
ಬಯಲ ನಾಟಕದಂತೆ
ಬೀದಿಗಿಳಿಯದೆ ವಿಧಿಯಿಲ್ಲ
ಬಯಲಲ್ಲಿ ಬಯಲಾದ
ವಿರಾಗಿಣಿಯಂತೆ
ಅಕ್ಕನಾಗಿದ್ದಿದ್ದರೆ ನಾವೆಲ್ಲ??
ಬದುಕು ಜಡವಾದೀತು
ಈ ಜಗದ ಆಟ ಸೋತು
ತಣ್ಣಗೆ ಕೈ ಚೆಲ್ಲೀತು.
0 ಪ್ರತಿಕ್ರಿಯೆಗಳು