ಸಿದ್ದುಮೂರ್ತಿ
ನೆಲದ ಮೇಲೆ ಬೀಜವೊಂದು
ಬೀಳಲು ಸಾಕು
ಚಿಗುರಿ ಗಿಡವಾಗಿ ಮರವಾದೆ
ದಣಿದವರಿಗೆ, ನೆರಳಾದೆ
ಬದಲಾಗಿ ಏನು ಬಯಸದೇ..!
ಹೀಚಾಗಿ ಕಾಯಾಗಿ
ಹಣ್ಣಾದೆ., ತಿನ್ನಲದುವೇ
ಸಿಹಿಯಾದೆ..
ಬದಲಾಗಿ ಏನು ಬಯಸದೇ..!
ಹಸಿರುಟ್ಟು ಉಸಿರಾದೆ
ಜೀವಕಣದ ಚೈತನ್ಯ
ನಿನ್ನೆದೆಯ ಬಡಿತದಿ
ನಾನೊಂದಾದೆ
ಬದಲಾಗಿ ಏನು ಬಯಸದೇ..!
ಮಳೆ ಬಿಸಿಲಿಗೆ ಮೈಯೊಡ್ಡಿ
ಸಿಡಿಲಿಗೆ ತಲೆಯೊಡ್ಡಿ
ಉಕ್ಕುವ ಪ್ರವಾಹಗಳ ತಡೆದು
ಕೊಚ್ಚಿ ಹೋಗುವ ಮಣ್ಣ ಹಿಡಿದು
ನೆಲದ ಸಾರತೆಯ ಉಳಿಸಿದೆ
ಬದಲಾಗಿ ಏನು ಬಯಸದೇ..!
ಕಾಲ ಕಾಲದ ಮಳೆಗೆ
ಇಂಬಾದೆ..ನಂಬಿಕೆಯ
ನೆಲೆಯೊಳಗೆ ನಿನ್ನದೇ ಸುಂದರ
ಬದುಕಿನ ಹಂದರಕೆ
ಹಚ್ಚ ಹಸಿರಾದೆ
ಬದಲಾಗಿ ಏನು ಬಯಸದೇ..!
ಬಯಸಿ ಬಯಸಿ
ಬದಲಾದುದು ನೀನೊಬ್ಬನೆ
ಸಿಗುವುದೆಲ್ಲ ತನಗಿರಲೆಂದು
ಬದುಕಲು ಬಿಡದವನಂತೆ
ಹುಂಬತನದ ಹಂಬಲದಿ..!!,
ತನ್ನದೇ ಹಿತಕ್ಕೆ
ನಡೆದ ತಾಲೀಮು,ಹಿಂದೆ
ನಮ್ಮದೇ ನೋವ ನೆರಳುಗಳು
ಎಳೆ ಎಳೆಯಾಗಿ ಹೆಣೆದ ಜಾಲದಿ
ನಾನು ಬಲಿಯಾಗುತ್ತಿರುವೆ..!!!
0 ಪ್ರತಿಕ್ರಿಯೆಗಳು