ಅಪೂರ್ವ ಜ್ಞಾನ್
ತಿಳಿ ಸಂಜೆಯ ದ್ಯುತಿ ಕದನ
ಸೂರ್ಯನೆದೆಯೇ ರಕ್ತದ ಬನ
ಹೆಜ್ಜೆ ಹೆಜ್ಜೆಯಲಿ ರಕ್ತ ಚರಿತ್ರೆಯ ಹೊತ್ತು
ಕೊನೆಗೂ ಹಸ್ತಿನಾವತಿಗೆ ಬಂದನಶ್ವತ್ಥಾಮ
ಬೀದಿ ದೀಪಗಳ ಅಸ್ಥಿರ ಬೆಳಕಲಿ
ಯುದ್ಧ ಭೀತಿಗಳ ಅತಿ ಜ್ವರ ಚಳಿಯಲಿ
ಜೀವಕೆ ಸ್ವಾರ್ಥ, ಸಾವಿನ ಬಳುವಳಿ
ಪುರದ ಜನರ ಕನವರಿಕೆಗೂ ಹೆದರುತ
ಶಿಶು ಹಸುಳೆಗಳೆಳೆಯಳುವಿಗೂ ಬೇದರುತ
ಕೊನೆಗೂ ಹಸ್ತಿನಾವತಿಗೆ ಬಂದನಶ್ವತ್ಥಾಮ
ಬದುಕಲೊಲ್ಲದ ಜೀವಕೆ ಅಮರತ್ವದ ಶಾಪ
ಗುರುಪುತ್ರ ದ್ವಿಜ ವೀರನಿಗೂ ಶಿಶು ಹತ್ಯಾ ದೋಷ
ಪುರಸುತರುರಿವಕ್ಷಿಯಲಿ, ಅಸ್ಪೃಶ್ಯ ಕೃಪ
ವಿಧವೆಗಳುದರಚಿತೆಯೂ ಸುಡಲೊಲ್ಲದ ಪಾಪ
ಕೊನೆಗೂ ಹಸ್ತಿನಾವತಿಗೆ ಬಂದನಶ್ವತ್ಥಾಮ
ಶಾಮನ ಧರ್ಮ ಕಾಳಗದೊಳು ಅಧರ್ಮದ ಕಡು ಛಾಯೆ
ಅಶ್ವಗಜಾದಿಮನುಸುತರ ಶವಗಳಿಗೆ ವ್ಯಾಸನ ಕಾವ್ಯದ ಮಾಯೆ
ಚಿತ್ವಿಕಲ್ಪಿತ ಗುರುಸುತನ ಪಾಪಗಳಿಗೆಲ್ಲಿ ಶಾಸ್ತ್ರಗಳಸ್ಮಿತೆ
ಹೆಜ್ಜೆ ಹೆಜ್ಜೆಗೂ ರಕ್ತ ಚರಿತೆಯ ಹೊತ್ತು
ಕೊನೆಗೂ ಹಸ್ತಿನಾವತಿಗೆ ಬಂದನಶ್ವತ್ಥಾಮ
0 ಪ್ರತಿಕ್ರಿಯೆಗಳು