ಚಂದ್ರಶೇಖರ ಪಾಟೀಲ
ಕೃಪೆ: -‘ಅರ್ಧ ಸತ್ಯದ ಹುಡುಗಿ’ (ಕವನ ಸಂಕಲನ, 1989)
ಸತ್ತವರು ಎಲ್ಲಿ ಹೋಗುತ್ತಾರೆ?
ಸತ್ತವರು ಎಲ್ಲೂ ಹೋಗುವುದಿಲ್ಲ…
ಇದ್ದವರ ನೆನಪಿನ ಗುದ್ದಿನಲ್ಲಿ
ಗುದ್ದಲಿಯಾಗುತ್ತಾರೆ.
ಅವರ ಶ್ವಾಸೋಚ್ಛ್ವಾಸದ ಹಳ್ಳ ಕೊಳ್ಳಗಳಲ್ಲಿ
ಹಾವಾಗಿ ಹರಿದಾಡುತ್ತಾರೆ.
ಅವರ ಆಕಾಶದ ತುಂಬ
ಹುಡಿಯಾಗಿ ಅಡರುತ್ತಾರೆ.
ಹಕ್ಕಿಯಾಗಿ ರೆಕ್ಕೆ ಬಿಚ್ಚುತ್ತಾರೆ.
ಚಿಕ್ಕೆಯಾಗಿ ಚಿಮುಕುತ್ತಾರೆ.
ಎಲ್ಲಿಯ ತನಕ?
ಇದ್ದವರು ಸಾಯುವ ತನಕ.
ಸತ್ತವರು ಎಲ್ಲಿ ಹೋಗುತ್ತಾರೆ?
ಸತ್ತವರು ಎಲ್ಲೂ ಹೋಗುವುದಿಲ್ಲ…
0 ಪ್ರತಿಕ್ರಿಯೆಗಳು