ಪ್ರತಿ ಗ್ರಾಮದಲ್ಲಿ ಭಾರತದ ಕೇಂದ್ರ ಇದೆ

ಪ್ರತಿ ಗ್ರಾಮದಲ್ಲಿ ಭಾರತದ ಕೇಂದ್ರ ಇದೆ

ಕನ್ನಡದ ಮಾತನ್ನು ಎತ್ತುವುದೇ ಅಪಾಯಕಾರಿಯಾಗಿದ್ದ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿದ ಹಿರಿಯರ ಸಂಸ್ಥಾನಕ್ಕೆ ಸೇರಿದ ಪೂಜ್ಯರಾದ ಶ್ರೀ ಶ್ರೀ ಬಸವಲಿಂಗ ಪಟ್ಟದೇವರು ಅವರೇ, ಇಂಥ ಬೃಹತ್ ಸಭೆಯನ್ನು ಬೆಂಗಳೂರಿನಲ್ಲಿ ಕನ್ನಡಕ್ಕಾಗಿ ಏರ್ಪಾಡು ಮಾಡುವುದನ್ನು ಸಾಧ್ಯವಾಗುವಂತೆ ಮಾಡಿದ ಶ್ರೀ ಟಿ. ಎ. ನಾರಾಯಣಗೌಡರೇ, ಮಹಾಪೌರರಾದ ಎಸ್.ಕೆ. ನಟರಾಜ್ ಅವರೇ, ನಮಗೆಲ್ಲರಿಗೂ ಬಹಳ ಪ್ರೀತಿಪಾತ್ರರಾದ ಶ್ರೀಮತಿ ಮೋಟಮ್ಮನವರೇ, ನಮ್ಮ ಅತ್ಯಂತ ಮುಖ್ಯವಾದ ಕನ್ನಡದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಲ್ಲೂರು ಪ್ರಸಾದ್ರವರೇ, ಬಹಳ ಕಾಲದಿಂದ ನನ್ನಲ್ಲಿ ವಿಶ್ವಾಸವನ್ನು ಇಟ್ಟಿರುವ ಮನು ಬಳಿಗಾರ್ ಅವರೇ, ಪತ್ರಿಕೆಯ ಸಂಪಾದಕ- ರಾದ ಶ್ರೀಮತಿ ವಿಶಾಲಾಕ್ಷಿ ಅವರೇ ಮತ್ತು ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಪರಮೇಶ್ವರ್ ಅವರೇ,

ಯಾವ ಬಂಗಾಳಿಯಾದರೂ ಪ್ರಪಂಚದಲ್ಲಿ ಎಲ್ಲೇ ಇದ್ದರೂ, `ನೀನು ಯಾರು?’ ಅಂದರೆ, `ನಾನು ಬಂಗಾಳಿ’ ಎನ್ನುತ್ತಾನೆ. ಇಂಥ ಜಾತಿ ಅಂಥ ಹೇಳುವುದಿಲ್ಲ. ಒಬ್ಬ ತಮಿಳರವನು ಎಲ್ಲಿದ್ದರೂ `ನೀನು ಯಾರು?’ ಅಂದರೆ, `ನಾನು ತಮಿಳವನು’ ಎನ್ನುತ್ತಾನೆ, ಕನ್ನಡದವರಮಟ್ಟಿಗೆ ಅಮೆರಿಕದಲ್ಲಿದ್ದರೆ `ನೀವು ಯಾರು?’ ಅಂದರೆ, `ನಾವು ವೀರಶೈವರು, ನಾವು ಗೌಡರು, ನಾವು ಬ್ರಾಹ್ಮಣರು’ ಎನ್ನುತ್ತಾರೆ. ಒತ್ತಾಯಪೂರ್ವಕವಾಗಿ ಕೇಳಿದರೆ `ಐ ಆಮ್ ಎ ಕನ್ನಡಿಗ’ ಎಂದು ಇಂಗ್ಲಿಷ್ನಲ್ಲಿ ಹೇಳುತ್ತಾರೆ. ಇದು ಬಹಳ ದುರದೃಷ್ಟದ ವಿಷಯ. ನಾವು ಮೊದಲು ಗುರುತಿಸಿಕೊಳ್ಳಬೇಕಾದುದು ನಮ್ಮನ್ನು ಕನ್ನಡಿಗರು ಎಂದು. ಯಾಕೆಂದರೆ ಭಾರತದಲ್ಲಿ ಇರುವುದು ಫೆಡರಲ್ ವ್ಯವಸ್ಥೆ, ಕೇಂದ್ರ ಸರ್ಕಾರ ಎನ್ನುತ್ತೇವಲ್ಲ ಅದು ತಪ್ಪು ಶಬ್ದ. ಭಾರತ ಬಹುಕೇಂದ್ರಿತ ರಾಷ್ಟ್ರ. ಗಾಂಧೀಜಿ ಕಲ್ಪಿಸಿದ್ದು ಸಹ ಇದನ್ನೇ. ಭಾರತದ ಪ್ರತಿ ಗ್ರಾಮದಲ್ಲೂ ಭಾರತದ ಕೇಂದ್ರ ಇದೆ. ಕೊನೆಯಪಕ್ಷ ನಾವು ಪ್ರತಿ ರಾಜ್ಯದಲ್ಲೂ ಭಾರತದ ಕೇಂದ್ರ ಇದೆ ಎಂದು ಅರ್ಥಮಾಡಿಕೊಳ್ಳಬೇಕು. ಇದು ಫೆಡರಲ್ ವ್ಯವಸ್ಥೆಯಾದ್ದರಿಂದ ರೈಲ್ವೆ ಇತ್ಯಾದಿ ನೌಕರಿಯಲ್ಲಿ (ಪ್ರತಿಯೊಂದರಲ್ಲೂ) ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ ಸಿಗಲೇಬೇಕು. ಇಲ್ಲದೇ ಹೋದರೆ, ಇವತ್ತು ಆಸ್ಸಾಂನಲ್ಲಿ ಅಸ್ಸಾಂನ ಜನರೇ ಇಲ್ಲದಂತ ರಾಜಕಾರಣ ನಡೆಯುತ್ತಿದೆ. ನನ್ನನ್ನು 2-3 ವರ್ಷಗಳ ಹಿಂದೆ ನಮ್ಮಲ್ಲಿ ಸಾಹಿತ್ಯ ಸಮ್ಮೇಳನದಂಥ ಒಂದು ಅಸ್ಸಾಂ ಭಾಷೆಯ ಸಮ್ಮೇಳನಕ್ಕೆ ನನ್ನನ್ನ ಉದ್ಘಾಟನೆ ಮಾಡುವುದಕ್ಕೆ ಕರೆದಿದ್ದರು. ಅಲ್ಲಿ ಹೋಗಿ ನೋಡಿದರೆ ಒಂದು ದೊಡ್ಡ ಮೈದಾನದಲ್ಲಿ ಲಕ್ಷೋಪಲಕ್ಷ ಅಸ್ಸಾಮಿ ಜನರು ಸೇರಿದ್ದರು. ಅಸ್ಸಾಂನಲ್ಲಿ ಅವರು ನಿಜವಾಗಲೂ ತಮ್ಮನ್ನ ಗುರುತಿಸಿಕೊಳ್ಳುವುದು `ನಾವು ಅಸ್ಸಾಮಿ’ ಎಂದೇ. ಯಾಕೆಂದರೆ ಅಸ್ಸಾಮಿನ ಭಾಷೆಗೆ ಒಂದು ದೊಡ್ಡ ಅಪಾಯ ಬಂದೊದಗಿದೆ. ಬೆಂಗಳೂರಿನಲ್ಲಿ ಕನ್ನಡಕ್ಕೆ ಇಂಥ ಅಪಾಯ ಬಂದೊದಗಿದೆ. ನನ್ನ ಸ್ನೇಹಿತರು `ನನ್ನ ಮಗುವನ್ನು ಒಂದು ಒಳ್ಳೆಯ ಕನ್ನಡ ಶಾಲೆಗೆ ಕಳಿಸಬೇಕು, ಕನ್ನಡ ಮಾಧ್ಯಮದ ಶಾಲೆಗೆ ಕಳಿಸಬೇಕು ಅಂದರೆ ಬೆಂಗಳೂರಿನಲ್ಲಿ ಒಂದೇ ಒಂದು ಕನ್ನಡ ಮಾಧ್ಯಮ ಶಾಲೆ ಸಿಗುತ್ತಿಲ್ಲ್ಲ’ ಎನ್ನುತ್ತಾರೆ. ಹೀಗೆ ಆಗಬಾರದು. ಇದು ನಮ್ಮ ರಾಜಧಾನಿ ಮತ್ತು ಕೆಲವು ವಿಷಯಗಳಲ್ಲಿ ಪ್ರಜ್ಞಾವಂತರಾದವರು ನಾರಾಯಣ ಗೌಡರಿಗೆ ಸಂಪೂರ್ಣ ಬೆಂಬಲಕ್ಕೆ ನಿಂತು ಕೆಲಸ ಮಾಡಬೇಕು.

ಉದಾಹರಣೆಗೆ ಇಲ್ಲಿ ಯಾವ ಬಹುರಾಷ್ಟ್ರೀಯ ಕಂಪನಿ ಬಂದರೂ ಕನ್ನಡವನ್ನೂ ಒಂದು ಭಾಷೆಯನ್ನಾಗಿ ಬಳಸಬೇಕು. ಕನ್ನಡವನ್ನೇ ಅಲ್ಲ, ಯಾಕೆಂದರೆ ಅವರಿಗೆ ಬೇರೆ ಭಾಷೆ ಗೊತ್ತಿಲ್ಲ. ಇದೇ ಬಹುರಾಷ್ಟ್ರೀಯ ಕಂಪನಿ ಹಾಲೆಂಡ್ಗೆ ಹೋದರೆ ಅಲ್ಲಿನ ಭಾಷೆಯನ್ನು ಉಪಯೋಗಿಸುತ್ತಾರೆ. ಫ್ರಾನ್ಸ್ಗೆ ಹೋದರೆ ಅಲ್ಲಿನ ಭಾಷೆಯನ್ನು ಉಪಯೋಗಿಸುತ್ತಾರೆ. ಮಹಾರಾಷ್ಟ್ರಕ್ಕೆ ಹೋದರೆ ಅಲ್ಲಿನ ಭಾಷೆಯನ್ನು ಬಳಸುತ್ತಾರೆ. ಕರ್ನಾಟಕಕ್ಕೆ ಬಂದರೆ, ಅವರು ಕನ್ನಡವನ್ನು ಬಳಸುವುದಿಲ್ಲ್ಲ. ನಮ್ಮ ಸರ್ಕಾರ ಇಂಥ ಒತ್ತಾಯವನ್ನು ಅವರ ಮೇಲೆ ಹಾಕಬೇಕು. ನಿಮಗೆ ಜಾಗ ಕೊಡಬೇಕಾದರೆ ನಿಮ್ಮ ಆಫೀಸಿನಲ್ಲಿ ಕನ್ನಡವನ್ನೂ ಒಂದು ಭಾಷೆಯಾಗಿ ಬಳಸಬೇಕು ಎಂಬ ಕಟ್ಟಳೆ ಹೇರಬೇಕು. (ಕನ್ನಡವನ್ನೂ ಎನ್ನುತ್ತೇನೆ, ಕನ್ನಡವನ್ನೇ ಅಲ್ಲ. ಯಾಕೆಂದರೆ ಬೇರೆ ಬೇರೆ ಕಡೆ ಅವರು ವ್ಯವಹಾರ ಮಾಡಬೇಕಾಗುತ್ತದೆ, ಕನ್ನಡವಿಲ್ಲದೇ ಅಲ್ಲ.)

ಜೊತೆಗೆ ಇಷ್ಟು ಜನ ಕನ್ನಡಿಗರಿಗೆ ಕೆಲಸ ಸಿಗಲೇಬೇಕು ಎನ್ನುವ ಕಾನೂನು ಮಾಡಬೇಕು. ಇದನ್ನು ನಾನು ದೊಡ್ಡ ಚಳವಳಿ ಎಂದು ತಿಳಿದುಕೊಂಡಿದ್ದೇನೆ. ಕರವೇ ಕನ್ನಡಿಗರನ್ನ ಎಲ್ಲಾ ಕೆಲಸವನ್ನು ಮಾಡಬಲ್ಲಂತಹ, ಮಾಡಲು ಸಿದ್ಧವಾದಂಥ ತರಬೇತಿ ಕೊಡುವಂತಹ ಒಂದು ಚಳವಳಿಯನ್ನ ಮಾಡಬೇಕು. ನಮ್ಮಲ್ಲಿ ಮನೆ ಕಟ್ಟಬೇಕೆಂದರೆ ತಮಿಳರೇ ಸಿಗುವುದು. ನಾವು ಮರಗೆಲಸ ಮಾಡಿಸಬೇಕೆಂದರೆ ರಾಜಸ್ತಾನಿಗಳೇ ಸಿಗುವುದು. ಹಿಂದಿನ ಕಾಲದಲ್ಲಿ ಚಿನ್ನದ ಕೆಲಸ, ಮರಗೆಲಸವನ್ನ, ಮಡಿಕೆಗಳನ್ನು ಸೇರಿದಂತೆ ಏನನ್ನಾದರೂ ಮಾಡಬಲ್ಲಂಥ ಶಕ್ತಿ ಕರ್ನಾಟಕದಲ್ಲಿತ್ತು. ಅದು ಹೋಗುತ್ತಿದೆ. ನಾವು ಸೋಮಾರಿಗಳಾಗುತ್ತಿದ್ದೇವೆ. ಅದು ಎಲ್ಲಾ ದೇಶದಲ್ಲೂ ಆಗುತ್ತದೆ. ಯಾಕೆಂದರೆ ನಾವು ಶ್ರೀಮಂತರಾಗಿಬಿಟ್ಟರೆ ಸಾಕು ಸೋಮಾರಿಗಳಾಗಿಬಿಡುತ್ತೇವೆ. ಬಂಗಾಳದಲ್ಲಿ ಏನಾದರೂ ಬೇರೆ ಕೆಲಸ ಮಾಡಬೇಕೆಂದರೆ ಬಿಹಾರಿಗಳು ಅಲ್ಲಿಗೆ ಹೋಗಬೇಕು. ನಾನು ಕೇರಳದಲ್ಲಿ ವೈಸ್ ಚಾನ್ಸಲರ್ ಆಗಿದ್ದಾಗ ಗಮನಕ್ಕೆ ಬಂದದ್ದು – ಅಲ್ಲಿ ಒಂದು ಎಲೆಕ್ಟ್ರಿಕ್ ರಿಪೇರಿ ವರ್ಕ್ ಮಾಡಲಿಕ್ಕೆ ಮಲಯಾಳಿ ಸಿಗುವುದಿಲ್ಲ. ತಮಿಳನೋ ಬೇರಾರೋ ಬಂದು ಮಾಡುತ್ತಾನೆ. ಕಷ್ಟದ ಕೆಲಸವನ್ನ ನಾವು ಮಾಡುವುದಿಲ್ಲ. ಹಾಗೇನೇ, ಪಾಪ ಬೀದರ್ ಕಡೆಯವರು ಗೋವಾಗೆ ಹೋಗದೆ ಇದ್ದರೆ ಯಾವ ಕೆಲಸವೂ ಆಗುವುದಿಲ್ಲ್ಲ.

ನಾವು ಸ್ವಲ್ಪ ಸ್ವತಂತ್ರವಾಗಿ, ಒಂದು ರಾಜ್ಯವಾಗಿ ಗಟ್ಟಿಯಾಗಿ ಇರಬೇಕೆಂದರೆ ನಮ್ಮಲ್ಲೇ ಎಲ್ಲಾ ಕೆಲಸವನ್ನು ಮಾಡುವಂತಹ ಸೋಮಾರಿಗಳಲ್ಲದಂತಹ, ನೆಚ್ಚಿಕೆ ಉಳ್ಳಂತಹ ಜನರನ್ನು ತಯಾರಿಮಾಡುವ ಒಂದು ಚಳವಳಿಯೂ ಈ ಕರವೇ ಮೂಲಕ ಆಗಬೇಕೆಂದು ಬಯಸುತ್ತೇನೆ. ಕನ್ನಡದ ಸ್ವಾಭಿಮಾನ ಬೆಳೆಯುವುದಕ್ಕೆ ನಾವು ಎಲ್ಲಾ ಕೆಲಸವನ್ನೂ ಮಾಡಬಲ್ಲವೆ? ಎನ್ನುವುದು ಕೂಡ ಬಹಳ ಮುಖ್ಯ. ಕನ್ನಡದವರನ್ನು ಬೇರೆಯವರು ಕರೆಯಬೇಕು, ಆ ರೀತಿಯ ಕೆಲಸವನ್ನು ಮಾಡಬಲ್ಲಂತಹವರು ನಮ್ಮಲ್ಲಿ ಇರಬೇಕು.

ಜ್ಞಾನದ ಮೂಲಕ ಮಾತ್ರವಲ್ಲ, ದೇಹದ ಚುರುಕಿನ ಮೂಲಕ ಮಾಡುವ ಕೆಲಸಗಳನ್ನು ಮಾಡುವಂತಹವರು ಕೂಡ ದೊರೆಯುವಂತೆ ನೋಡಿಕೊಳ್ಳಬೇಕು. ಅವರಿಗೆ ಬೇಕಾದಂತಹ ಶಿಕ್ಷಣವನ್ನು ಕೊಡುವುದನ್ನು ನಾರಾಯಣಗೌಡರು ಶುರು ಮಾಡಿದ್ದಾರೆ. ಅದು ಕೇವಲ ಹೋರಾಟವಲ್ಲ. ಗಾಂಧೀಜಿ ಮಾಡುತ್ತಿದ್ದ ಚರಕ, ಗುಡಿಕೈಗಾರಿಕೆಯಂಥ, ಸಮಾಜವನ್ನೂ ಬೆಳೆಸುವಂತಹ ಕೆಲಸಗಳನ್ನು ಹಚ್ಚಿಕೊಳ್ಳಬೇಕು. ಆಗ ನಿಮಗೆ ಇರುವ ಶಕ್ತಿಯೂ ಹೆಚ್ಚಾಗುತ್ತದೆ, ಗೌರವವೂ ಹೆಚ್ಚಾಗುತ್ತದೆ. ಕನ್ನಡದ ಸ್ವಾಭಿಮಾನವೂ ಬೆಳೆಯುತ್ತದೆ. ನಾವು ಇವತ್ತು ಅನಕೃರಿಂದ ಪ್ರಾರಂಭವಾದ ಕನ್ನಡ ಚಳವಳಿಯನ್ನ ನೆನೆಯಬೇಕು. ರಾಜ್ಕುಮಾರ್, ಕುವೆಂಪು, ಮಾಸ್ತಿ, ಬೇಂದ್ರೆ ಮುಂತಾದವರೆಲ್ಲ ಇದ್ದಾರೆ ಆ ಚಳವಳಿಯಲ್ಲಿ. ರಾಜ್ಕುಮಾರ್ ಎಷ್ಟು ಮುಖ್ಯ ಎಂದು ಒಂದು ಕಡೆ ಬರೆದಿದ್ದೇನೆ. ಇಡೀ ಕನರ್ಾಟಕದಲ್ಲಿ ನಾವು ಎಲ್ಲರೂ ಬೇರೆ ಬೇರೆ ಕನ್ನಡಗಳನ್ನು ಮಾತನಾಡುತ್ತೇವೆ. ಬೆಳಗಾವಿಗೆ ಒಂದು ಕನ್ನಡ ಇದೆ, ಮಂಗಳೂರಿಗೆ ಇನ್ನೊಂದು, ಬೀದರ್ಗೆ ಮಗದೊಂದು ಕನ್ನಡ ಇದೆ. ರಾಜ್ಕುಮಾರ್ ಖ್ಯಾತರಾದ ಮೇಲೆ ಅವರು ಎಲ್ಲರೂ ಆಡಬಹುದಾದ ಒಂದು ಕನ್ನಡವನ್ನು ಮಾತನಾಡುತ್ತಿದ್ದರು. ಹೀಗೆ ಜರ್ಮನಿಯಲ್ಲಿಯೂ ಜರ್ಮನ್ ಸೃಷ್ಟಿಯಾಯಿತು. ಇಂಗ್ಲೆಂಡ್ನಲ್ಲಿ ನೂರು ಇಂಗ್ಲಿಷ್ ಇವೆ. ಆದರೆ ಒಂದು ಇಂಗ್ಲಿಷ್ ಬೇಕು. ಅದೊಂದು ರಾಜ್ಯದ ಭಾಷೆಯಾಗಬೇಕಾದಾಗ.

ಬೇಂದ್ರೆ ಹೇಳಿದರು: ನಮಗೆ ಅನೇಕ ಒಳದಾರಿಗಳಿವೆ. ಬೇರೆ ಬೇರೆ ಕನ್ನಡಗಳಿವೆ- ಅದನ್ನು ದೊಡ್ಡ ಹಾದಿಯಾಗುವ ಕನ್ನಡವನ್ನು ನಮ್ಮ ಕವಿಗಳು ಒಟ್ಟಾಗಿ ಕ್ರಮೇಣ ಮಾಡಬೇಕು. ಅದನ್ನು ಕಲಾತ್ಮಕ ಭಾಷೆಯಲ್ಲಿ ಮಾಡಿದವರು ರಾಜ್ಕುಮಾರ್. ಕರ್ನಾಟಕ ಎನ್ನುವುದಕ್ಕೆ ಭಾಷೆಯ ಶಕ್ತಿಯನ್ನು ತಂದವರು ರಾಜ್ಕುಮಾರ್. ಅವರನ್ನೆಲ್ಲಾ ಇಂದು ನೆನಪಿಸಿಕೊಳ್ಳೋಣ. ಇದು ಬಹುಕೇಂದ್ರಿತ ರಾಷ್ಟ್ರವಾದ್ದರಿಂದ ಭಾರತದ ರಾಷ್ಟ್ರಕ್ಕೆ ಕರ್ನಾಟಕವೂ ಒಂದು ಕೇಂದ್ರ. ಕುವೆಂಪು ಅವರು ಹೇಳಿದ ಹಾಗೆ ಭಾರತದ ಜೊತೆ ಹೊಂದಿಕೊಂಡಿದ್ದೇ ನಮ್ಮನ್ನು ನಾವು ಬಿಟ್ಟುಕೊಡದೆ ಇರುವುದನ್ನ ಕಲಿಯಬೇಕು. ಹಾಗೆ ನಾವು ಹೊಂದಿಕೊಳ್ಳುತ್ತಾ ಹೋಗಿ ಕನ್ನಡವನ್ನೇ ಬಿಡುವುದು, ಕನ್ನಡವನ್ನೇ ಕಟ್ಟಿಕೊಂಡು ಭಾರತವನ್ನು ಮರೆಯುವುದು, ಎರಡೂ ಕೂಡ ಅಪಾಯಕಾರಿ. ಈ ಹೊಂದಾಣಿಕೆಯನ್ನು ಮಾಡುವುದು ಹೇಗೆ ಎನ್ನುವುದು ಬಹಳ ಕಷ್ಟ ಸಾಧ್ಯ.

ಈ ಸಂದರ್ಭದಲ್ಲಿ ಎಲ್ಲಾ ಕನ್ನಡಿಗರೂ ಇರುವುದರಿಂದ ನನ್ನ ಕನಸನ್ನು ಹೇಳಿಬಿಡುತ್ತೇನೆ. ನನಗೆ ವಯಸ್ಸಾಗಿದೆ. ನಾನು ಸಾಯುವುದರೊಳಗೆ ನೋಡಬೇಕೆಂದು ಬಯಸೋದು ಎಲ್ಲಾ ಮಕ್ಕಳಿಗೂ ಸಮಾನವಾದ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಸಿಗುವಂತಾಗುವುದನ್ನು. ಎಲ್ಲಾ ಮಕ್ಕಳಿಗೂ ಅಂದರೆ: ಫ್ರಾನ್ಸ್ನಿಂದ ಒಬ್ಬ ಬಂದು 10-20 ವರ್ಷ ಇಲ್ಲಿ ಇರುವುದಾದರೆ ಅವನ ಮಗು ಇಲ್ಲಿ ಬೆಳೆಯೋದಾದ್ರೆ ಆ ಮಗು ಕೂಡ ಕನ್ನಡವನ್ನು ಕಲಿಯಬೇಕು. ಯಾಕೆಂದರೆ ಒಂದು ಮಗು ಜ್ಞಾನವನ್ನು ಕಲಿಯುವುದು ಶಾಲೆಯಲ್ಲಿ ಮಾತ್ರವಲ್ಲ, ಬೀದಿಯಲ್ಲಿ ಕೂಡ. ಯಾವುದು ಬೀದಿಯ ಭಾಷೆಯೋ ಅದನ್ನು ಕಲಿಯದಿದ್ದರೆ ಮಗುವಿನ ಜ್ಞಾನ ಬೆಳೆಯುವುದಿಲ್ಲ. ನಾನು ತಮಿಳುನಾಡಿನಲ್ಲಿದ್ದರೆ ಕನ್ನಡಿಗನೇ ಆಗಿದ್ದರೂ ತಮಿಳಿನಲ್ಲಿ ಕಲಿಯಬೇಕು. ತಮಿಳಿನವನೊಬ್ಬ ಕನ್ನಡನಾಡಿನಲ್ಲಿದ್ದರೆ ಕನ್ನಡದಲ್ಲಿ ಕಲಿಯಬೇಕು. ಯಾಕೆಂದರೆ ಇದು ಸಾರ್ವತ್ರಿಕ ವ್ಯಕ್ತಿಯಾಗಿ ಒಬ್ಬ ಶಿಕ್ಷಣ ವೇದಿತನಾಗಿ ನಾನು ಹೇಳುವುದು. ನಾನು ಸ್ಪೇನ್ನಲ್ಲಿದ್ದರೆ ಸ್ಪ್ಯಾನಿಷ್ನಲ್ಲಿ ಕಲಿಯಬೇಕು. ಏಕೆಂದರೆ ಇಡೀ ಬೀದಿಯಲ್ಲಿ ಸ್ಪಾನಿಷ್ ಮಾತಾಡುತ್ತಾರೆ. ನನ್ನ ಮಗೂಗೆ ಸ್ಪ್ಯಾನಿಷ್ ಬರದಿದ್ದರೆ?

ಇದನ್ನು ಹೆಂಗಸರು ಕಲಿತಿರುತ್ತಾರೆ. ಅವರು ಅಂಗಡಿಯಲ್ಲಿ ಸಾಮಾನು ತೆಗೆದುಕೊಳ್ಳಬೇಕಲ್ಲವೆ? ಹಾಗಾಗಿ ಅವರು ಯಾವ ಭಾಷೆಯವರಾಗಿದ್ದರೂ- ಸ್ವಲ್ಪ ಕನ್ನಡ ಕಲಿತಿರುತ್ತಾರೆ. ಆದರೆ ಈಗ ಬಹುರಾಷ್ಟ್ರೀಯ ಕಂಪನಿಗಳ ದೊಡ್ಡ ದೊಡ್ಡ ಮಾಲ್ಗಳು ಬರುವುದಕ್ಕೆ ಶುರುವಾಗಿರುವುದರಿಂದ ಆ ಅಗತ್ಯವೂ ಕೂಡ ಹೋಗಿಬಿಟ್ಟಿದೆ. ಈಗ ಹೆಂಗಸರು ಕೂಡ ಕನ್ನಡವನ್ನು ಕಲಿಯುವುದಿಲ್ಲ. ಮಕ್ಕಳೂ ಕಲಿಯುವುದಿಲ್ಲ. ಹಿಂದೆ ಹಾಗಲ್ಲ, ತರಕಾರಿಯವನ ಹತ್ತಿರ ವಾದ ಮಾಡುವುದಕ್ಕೆ, ಅವನು 10 ರೂಪಾಯಿ ಅಂದರೆ 5 ರೂಪಾಯಿಗೆ ಇಳಿಸುವುದಕ್ಕೆ ಉತ್ತರ ಭಾರತದವರಿಗೂ ಕನ್ನಡ ಬರುತ್ತಿತ್ತು, ತಮಿಳರಿಗೂ ಬರುತ್ತಿತ್ತು. ಈಗ ಕನ್ನಡದ ಅಗತ್ಯವೇ ಇಲ್ಲದಂತಹ ಸ್ಥಿತಿ ಬಂದಿದೆ. ಆದ್ದರಿಂದ ಇವತ್ತು ಹುಟ್ಟುವ ಮಕ್ಕಳಿಗೆಲ್ಲಾ ಎಷ್ಟು ಶ್ರೀಮಂತನ ಮಗುವಾಗಿರಲಿ, ಯಾವ ಭಾಷೆಯವನ ಮಗುವಾಗಿರಲಿ ಸಮಾನ ಶಿಕ್ಷಣ ಸಾಮಾನ್ಯ ಶಾಲೆಯಲ್ಲಿ ಸಿಗಬೇಕು. ಮನೆಮಾತಾಗಿ ಎಲ್ಲಾ ಭಾಷೆಗಳು ಉಳಿಯಬೇಕು.

ಕರ್ನಾಟಕದ ಬೇರೆ ಎಲ್ಲಾ ಭಾಷೆಗಳಿಗಿಂತ ಹೆಚ್ಚುಗಾರಿಕೆ ಏನೆಂದು ಕೇಳಿದರೆ, (ನಾನು ಒಬ್ಬ ಬರಹಗಾರನಾಗಿ ನಿಮಗೆ ಹೇಳುತ್ತೇನೆ) ಇವತ್ತು ಕನ್ನಡದ ಒಂದು ಕಾದಂಬರಿ ತೆಗೆದುಕೊಂಡರೆ, ಆ ಕಾದಂಬರಿಯನ್ನು ಒಬ್ಬ ಕೊಂಕಣಿ ಮಾತನಾಡುವವನು ಬರೆದಿದ್ದರೆ- ಯಶವಂತ ಚಿತ್ತಾಲರಂಥವರು ಬರೆದಿದ್ದರೆ- ಅಲ್ಲಿರುವ ಪಾತ್ರಗಳೆಲ್ಲಾ ಮಾತನಾಡುತ್ತಿರುವುದು ಕೊಂಕಣಿಯಲ್ಲೇ. ಆದರೆ ಅದನ್ನು ಬರೆದಿರುವುದು ಕನ್ನಡದಲ್ಲಿ. ಕೊಂಕಣಿ ಕನ್ನಡದಲ್ಲಿ ಸಾನ್ನಿಧ್ಯವನ್ನು ಪಡೆದಿದೆ. `ಚೋಮನ ದುಡಿ’ ಬಹಳ ದೊಡ್ಡ ಕಾದಂಬರಿ- ಕಾರಂತರದ್ದು. ಅಲ್ಲಿ ಎಲ್ಲಾ ನಡೆಯುವ ಘಟನೆಗಳು, ಪಾತ್ರಗಳೂ ಮಾತನಾಡುತ್ತಿರುವುದು ತುಳುವಿನಲ್ಲಿ. ಮರಾಠಿ ಮಾತು ಕನ್ನಡದೊಳಗೆ ಬಂದಿದೆ. ತುಳುವಿನ ಮಾತು ಕನ್ನಡದೊಳಗೆ, ಕೊಂಕಣಿ ಮಾತು ಕನ್ನಡದೊಳಗೆ ಬಂದಿದೆ. ಅಂದರೆ ಕನ್ನಡ ಹಲವು ಭಾಷೆಗಳನ್ನು ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡಿದೆ. ಇದು ತಮಿಳಿನ ಬಗ್ಗೆ ಅಥವಾ ಮರಾಠಿ ಬಗ್ಗೆ ನಿಜವಲ್ಲವೇನೊ! ಆದರೆ ಇದು ಕನ್ನಡದ ಬಗ್ಗೆ ಮಾತ್ರ ನಿಜ. ಆದ್ದರಿಂದ ಕನ್ನಡವನ್ನು ನಾನು `ಮಿನಿ ಇಂಡಿಯಾ’ ಎಂದು ಕರೆಯುತ್ತೇನೆ. ನಾನು ಒಬ್ಬ ಭಾಷಾತಜ್ಞನಾಗಿ ಈ ಮಾತನ್ನು ಹೇಳುತ್ತಿದ್ದೇನೆ. `ಚೋಮನ ದುಡಿ’ ತುಳುವಿಗೆ ಅನುವಾದವಾದಾಗ ಹೇಳಿದೆ: `ಇದು ಮೂಲ ಭಾಷೆಗೆ ಹೋಯ್ತು’ ಎಂದು. (ಕಾದಂಬರಿಯ ಮೂಲ ಇರುವುದು ತುಳುವಿನಲ್ಲಿ ಆದರೆ ಬರೆದಿರುವುದು ಕನ್ನಡದಲ್ಲಿ.) ಆದ್ದರಿಂದ ಈ ಕನ್ನಡಕ್ಕೆ ಇರುವ ವಿಶಿಷ್ಟತೆಯನ್ನು ಕನ್ನಡ ಚಳವಳಿಗಾರರು ಅರಿಯಬೇಕು.

ಸುಮಾರು ಒಂದು ಸಾವಿರ ವರ್ಷದ ಹಿಂದೆ ನಮ್ಮ ಭಾಷೆಯಲ್ಲಿ ಬರೆಯಬಹು- ದಾದರೆ ಬರವಣಿಗೆ ಹೇಗಿರಬೇಕು? ಅದರ ಲಕ್ಷಣಗಳೇನು? ಎನ್ನುವ ಗ್ರಂಥ ಪ್ರಪಂಚದ ಯಾವ ಭಾಷೆಯಲ್ಲೂ ಇಲ್ಲ. ತಮಿಳಿನಲ್ಲೊಂದು `ತೊಲ್ಗಾಪಿಯಂ’ ಎಂದಿದೆ. ಆದರೆ ಆ ಗ್ರಂಥದ ಲಕ್ಷಣ ಬೇರೆ. ಕವಿರಾಜಮಾರ್ಗ; ಸಾವಿರ ವರ್ಷದ ಹಿಂದಿನದು.

ಇವತ್ತು ಭಾರತೀಯ ಭಾಷೆಗಳಲ್ಲಿ ಅತ್ಯಂತ ಮೇಲಿರುವ ಭಾಷೆಗಳ ಪೈಕಿ ಕನ್ನಡವೂ ಒಂದು. ಹಿಂದೆ ಬಂಗಾಳಿಗೆ ಆ ಸ್ಥಾನವಿತ್ತು. ಈಗ ನಾವು ಹೆಚ್ಚೂ ಕಡಿಮೆ ಆ ಸ್ಥಾನದಲ್ಲಿದ್ದೇವೆ. ಏಕೆಂದರೆ ನಮ್ಮದು ಸ್ವೀಕಾರದ ಭಾಷೆ. ಹೇಗೆ ಸ್ವೀಕಾರದ ಭಾಷೆ ಎನ್ನುವುದಕ್ಕೆ ಒಂದೇ ಒಂದು ಉದಾಹರಣೆ ಕೊಡುತ್ತೇನೆ. ತಮಿಳಿನಲ್ಲಿ `ಕ್ಲಿಂಟನ್’ ಎಂದು ಬರೆಯಲಿಕ್ಕೆ ಆಗುವುದಿಲ್ಲ, `ಗ್ಲಿಂಟನ್’ ಎಂದು ಬರೆಯಬೇಕಾಗುತ್ತದೆ. ತಮಿಳಿನಲ್ಲಿ `ಗಾಂಧೀ’ `ಕಾಂತಿ’ ಆಗುತ್ತಾನೆ. ಕನ್ನಡದಲ್ಲಿ `ಗಾಂಧಿ’ ಎಂತಲೇ ಬರೆಯಬಹುದು. `ಕ್ಲಿಂಟನ್’ ಎಂದೂ ಬರೆಯಬಹುದು, ಯಾಕೆಂದರೆ ನಮಗೆ ಬೇಕಾಗಿರುವ ಅಕ್ಷರಗಳನ್ನು ಮೊದಲೇ ತೆಗೆದುಕೊಂಡಿದ್ದೇವೆ. ಕನ್ನಡ ಭಾಷೆಯನ್ನು ಬರೆಯುವುದಕ್ಕೆ ಅಗತ್ಯವಿಲ್ಲದ ಅಕ್ಷರಗಳೂ ಕೂಡ ನಮ್ಮ 52 ಅಕ್ಷರದಲ್ಲಿ ಇದೆ. ಆದ್ದರಿಂದ ಯಾವ ಭಾಷೆ, ಯಾವ ಶಬ್ದವನ್ನಾದರೂ ಕನ್ನಡದಲ್ಲಿ ಬರೆಯುವುದಕ್ಕೆ ಸಾಧ್ಯ. ಇದು ಕನ್ನಡದ ಸ್ವೀಕಾರದ ಶಕ್ತಿಯನ್ನ ಹೆಚ್ಚಿಸಿದೆ.

ನಾನು ಭಾಷೆಗಳಲ್ಲಿ ಎರಡು ತರಹ ಎನ್ನುತ್ತೇನೆ: ಒಂದು ಚಲಿಸುವ ಭಾಷೆ, ಇನ್ನೊಂದು ಚಲಿಸದ ಭಾಷೆ. ಕನ್ನಡ ಚಲಿಸುವ ಭಾಷೆಯಲ್ಲ. ಇದು ಕರ್ನಾಟಕಕ್ಕೆ ಸೀಮಿತವಾದದ್ದು. ಕೆಲವು ಭಾಷೆಗಳು ಊರಿಂದ ಊರಿಗೆ ಚಲಿಸುತ್ತಾ ಹೋಗುತ್ತವೆ. ಆದರೆ ಚಲಿಸದ ಭಾಷೆಯಾದರೂ ಕೂಡ ಕವಿರಾಜಮಾರ್ಗಕಾರ ಹೇಳುವಂತೆ ಕಾವೇರಿಯಿಂದ ಗೋದಾವರಿಯವರೆಗೂ ಹರಡಿ ಅದರ ಭೌಗೋಳಿಕ ಮಿತಿಯಲ್ಲೂ ಇಡೀ ಪ್ರಪಂಚದಲ್ಲೇ ಪ್ರತಿಫಲಿತವಾಗಿದೆ. ನಮ್ಮ ಗೋವಿನ ಹಾಡು ಬರೆದವರು `ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟದೊಳು’ ಎಂದರು. ಅಂದರೆ ಪ್ರಪಂಚದ ನಡುವಿನಲ್ಲಿ ಕರ್ನಾಟಕ ಇದೆ ಎಂಬಂತೆ.

ಕನ್ನಡ ಬೆಳೆದಿದೆಯಾ, ಬೆಳೆದಿದೆ. ಭಾರತದ ಬಹುಮುಖ್ಯ ಭಾಷೆಗಳಲ್ಲಿ ಒಂದಾ? ಹೌದು. ಹಾಗೆ ಉಳಿದಿದೆಯೋ? ಇಲ್ಲ. ಯಾಕೆಂದರೆ ನಮಗೆ ಕನ್ನಡ ಶಾಲೆಗಳಿಲ್ಲ. ನಾನು ಕನ್ನಡ ಮಾಧ್ಯಮದಲ್ಲಿ ಓದಿದವನು. ಆಮೇಲೆ ಇಂಗ್ಲೆಂಡ್ಗೆ ಹೋಗಿ ಓದಿ ಬಂದವನು. ಇಂಗ್ಲೆಂಡ್ನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಬಹುದಾದಷ್ಟು ವಿದ್ಯೆಯನ್ನು ಪಡೆದವನು. ಒಂದು ಕಾಲದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಇದು ಸಾಧ್ಯವಿತ್ತು. ಮೂರ್ತಿರಾಯರು, ಬಿ.ಎಂ. ಶ್ರೀಕಂಠಯ್ಯ, ಮಾಸ್ತಿ ಎಲ್ಲರೂ ಇದ್ದರು. ಇವತ್ತು ಅದು ಸಾಧ್ಯವೇ ಆಗದೆ ಇರುವ ಹಾಗಿದೆ. ಈ ತಪ್ಪಿಗೆ ಕಾರಣ ಬೇರೆ ಯಾರೂ ಅಲ್ಲ, ನಮ್ಮ ಅಭಿಮಾನ ಶೂನ್ಯತೆ. ನಮ್ಮ ಮಕ್ಕಳು ಕನ್ನಡದಲ್ಲಿ ಕಲಿಯಬೇಕು. ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯಬೇಕು.

`ನಾನು ಇಂಗ್ಲಿಷ್ನ್ನು ಕಲಿಯಿರಿ ಕನ್ನಡದಲ್ಲಿ ಕಲಿಸಿರಿ’ ಎಂದಿದ್ದೆ. ಇಂಗ್ಲಿಷ್ನ್ನು ಒಂದು ಭಾಷೆಯಾಗಿ ಕಲಿಯಿರಿ ಎಂದಿದ್ದೆ. ಕನ್ನಡದಲ್ಲಿ ಕಲಿತಾಗ ಜ್ಞಾನ ಕೂಡ ಚೆನ್ನಾಗಿ ಬೆಳೆಯುತ್ತದೆ. ಇನ್ನೊಂದು ಬಹಳ ಮುಖ್ಯವಾದ ವಿಷಯವನ್ನು ಇಲ್ಲೇ ಹೇಳಿಬಿಡುತ್ತೇನೆ. 80 ಎಕರೆ ಭೂಮಿಯನ್ನು ಕನ್ನಡ ವಿಶ್ವವಿದ್ಯಾಲಯದಿಂದ ಸರ್ಕಾರ ತೆಗೆದುಕೊಂಡುಬಿಟ್ಟಾಗ ಒಂದು ಚಳವಳಿ ಆಯ್ತು. ಆ ಚಳವಳಿಗೆ ನಿಜವಾಗಲು ಬೆನ್ನೆಲುಬಾಗಿ ನಿಂತವರು ಕರ್ನಾಟಕ ರಕ್ಷಣಾ ವೇದಿಕೆಯವರು. ನಮ್ಮ ಮುಖ್ಯಮಂತ್ರಿಗಳು ಬಹಳ ದೊಡ್ಡ ಮನಸ್ಸು ಮಾಡಿ ಇದಕ್ಕೆ ಸ್ಪಂದಿಸಿ 80 ಎಕರೆಯನ್ನು ಹಿಂದಕ್ಕೆ ಕೊಟ್ಟರು. ಅವರಿಗೆ ನಮ್ಮ ವಂದನೆಯನ್ನು ಹೇಳಬೇಕು. ಇದನ್ನು ನಾನು ಯಾಕೆ ಹೇಳುತ್ತಿದ್ದೀನೆಂದರೆ ಕನ್ನಡಕ್ಕೆ ಒಂದು ದನಿ ಇದೆ. ಅದನ್ನು ನಾವು ಉಳಿಸಿಕೊಳ್ಳಬೇಕು ಎಂಬುದಕ್ಕಾಗಿ.

ಕರ್ನಾಟಕದಲ್ಲಿ ಅಪಾರವಾದ ಆಸ್ತಿ ಇದೆ. ಅಂದರೆ ಅದನ್ನ ನಮ್ಮ ಗಣಿಗಾರಿಕೆ ಮಾಡುವ ಮಂತ್ರಿಗಳು ಸತತವಾಗಿ ಚೀಪಾಗಿ ಮಾರಿ, ಮೋಸ ಮಾಡಿ ಕನ್ನಡದ ಸಂಪತ್ತನ್ನೆಲ್ಲಾ ಲೂಟಿ ಮಾಡಿದ್ದಾರೆ. ಕನ್ನಡದ ಇಡೀ ಸಂಘಟನೆ ಇದಕ್ಕೆ ವಿರೋಧವಾಗಬೇಕು. ಯಾಕೆ ಈ ಕರೆಯನ್ನು ಕೊಡುತ್ತಿದ್ದೇನೆಂದರೆ, ಲ್ಯಾಟಿನ್ ಅಮೆರಿಕದಲ್ಲಿ ನೀವು ಕೇಳಿರಬೇಕು. ಕೆನಡಾ ಮತ್ತು ಅಮೆರಿಕದ ಗಣಿಗಾರಿಕಾ ಸಂಸ್ಥೆಗಳು ಪೆರುವಿನಲ್ಲಿ, ಚಿಲಿಯಲ್ಲಿ ಅವರ ಪ್ರತಿಯೊಂದು ಊರಿನಲ್ಲಿ ಎಲ್ಲಿ ಬಂಗಾರ ಸಿಗತ್ತೋ, ಪೆಟ್ರೋಲ್ ಸಿಗತ್ತೋ, ಎಲ್ಲಿ ಯಾವ ಅದಿರು ಸಿಗತ್ತೋ ಅದನ್ನು ಅಗೆದು ಬಗೆದು ಚೀಪಾಗಿ ಮಾರಿ ಆ ದೇಶದಲ್ಲಿ ಜನ ವೇಶ್ಯಾವೃತ್ತಿಯಿಂದ ಮಾತ್ರ ಬದುಕುವ ಹಾಗೆ ಮಾಡಿದರು. ಅವರನ್ನ ದರಿದ್ರರನ್ನಾಗಿ ಮಾಡಿದರು. ಇವತ್ತು ಲ್ಯಾಟಿನ್ ಅಮೆರಿಕ ಮತ್ತೆ ತಲೆ ಎತ್ತಿ ನಿಂತು ಜಗಳವಾಡುವುದಕ್ಕೆ ಸಿದ್ಧವಾಗಿದೆ. ಲ್ಯಾಟಿನ್ ಅಮೆರಿಕದ ಇಡೀ ಸಂಸ್ಕೃತಿಯನ್ನು ಅಮೆರಿಕ ಮತ್ತು ಕೆನಡ ನಾಶ ಮಾಡಿತು. ಇವತ್ತು ಕನರ್ಾಟಕದ ಸಂಸ್ಕೃತಿಯನ್ನ ಗಣಿಗಾರಿಕೆಯವರು ನಾಶ ಮಾಡುತ್ತಿದ್ದಾರೆ. ನಮ್ಮ ಸಂಪತ್ತನ್ನು ನಾಶ ಮಾಡುತ್ತಿದ್ದಾರೆ. ಇದು ಹೀಗೇ ಮುಂದುವರೆದರೆ ಮುಂದಿನ 10 ವರ್ಷದಲ್ಲಿ ಏನೂ ಉಳಿದಿರುವುದಿಲ್ಲ. ಇದನ್ನು ನಿಲ್ಲಿಸಬೇಕು. ನಮ್ಮ ಮೊಮ್ಮಕ್ಕಳಿಗೆ ಕನ್ನಡವೂ ಉಳಿಯಬೇಕು, ಗಣಿ ಅದಿರೂ ಸಹ ಉಳಿಯಬೇಕು ಎನ್ನುವುದಾದರೆ ಗಣಿಗಾರಿಕೆಯನ್ನು ನಿಷೇಧ ಮಾಡಬೇಕು. ಹಾಗೆ ಗಣಿಗಾರಿಕೆ ನಡೆಸುವುದು ಅಗತ್ಯವಾದರೆ ಅದನ್ನು ಸರ್ಕಾರವೇ ನಡೆಸಬೇಕು. ಎರಡನೆಯದು ಅನಿವಾರ್ಯವಾಗಿ ಗಣಿಗಾರಿಕೆ ಮಾಡಬೇಕಾಗಿ ಬಂದರೆ ನಾವೇ ಉಕ್ಕನ್ನು ತಯಾರಿಸುವ ಸಾಧ್ಯತೆಯನ್ನು ನೋಡಿಕೊಳ್ಳಬೇಕು. ಅಥವಾ ನಮಗೆ ಬೇಕಾಗಿರುವ ಅದಿರನ್ನು ತೆಗೆದುಕೊಂಡು ನಮ್ಮಲ್ಲಿರುವ ಅದಿರನ್ನು ಕೊಡಬೇಕು. ಒಂದು ರಾಜ್ಯಕ್ಕೆ ನೈತಿಕವಾದ ಸ್ವಾರ್ಥವು ಇರಬೇಕು. ನಮ್ಮ ನಾಡು ಗಟ್ಟಿಯಾಗಿ ಉಳಿಯಬೇಕು ಎನ್ನುವ ಆಸೆಯಿಂದ ಈ ಮಾತನ್ನು ಹೇಳುತ್ತಿದ್ದೇನೆ. ಆದ್ದರಿಂದ ಇವತ್ತು ನಡೆಯುತ್ತಿರುವ ಗಣಿ ಲೂಟಿಯಿಂದ ನಮ್ಮ ಪ್ರಜಾಪ್ರಭುತ್ವ ಕೂಡ ಅರ್ಥಹೀನವಾಗಿ ಕೆಟ್ಟುಹೋಗಿದೆ. ಹಾಗಿ ಪ್ರಜಾಪ್ರಭುತ್ವವನ್ನು ಮತ್ತೆ ನಾವು ಸ್ಕಾನರ್ ಕೆಳಗೆ ಇಟ್ಟು ನೋಡಬೇಕಾಗುತ್ತದೆ.

ನಕ್ಸಲೈಟರು ಅಲ್ಲಿ ವಿಜೃಂಭಿಸುತ್ತಿದ್ದಾರೆ ಯಾಕೆ? ಅಲ್ಲೂ ಕೂಡ ಗಣಿಗಾರಿಕೆ, ಬಾಕ್ಸೈಟ್ ಅದಿರಿದೆ. ಅದು ಸಿಗುವುದು ಗುಡ್ಡದಲ್ಲಿ. ಹಾಗಾಗಿ ಗುಡ್ಡಗಳಲ್ಲಿ ಹೋಗಿ ಅಗೆಯಬೇಕು. ಆದ್ದರಿಂದ ಅಲ್ಲಿರುವ ಆದಿವಾಸಿಗಳನ್ನು ಓಡಿಸಬೇಕು. ಅವರು ಹೋಗಲ್ಲ ಎನ್ನುತ್ತಾರೆ, ಅಲ್ಲಿ ಹೋಗಿ ಇವರು ಕೂತಿದ್ದಾರೆ. ಯಾಕೆಂದರೆ ಅವರಿಗೆ ಆ ಬೆಟ್ಟಗಳು ದೇವತೆಗಳು. ನಾವು ಎಲ್ಲಾ ದೇವರನ್ನು ನಾಶ ಮಾಡುತ್ತಿದ್ದೇವೆ.

ಮುಸ್ಲಿಂರ ಮಸೀದಿಯನ್ನು ನಾಶ ಮಾಡಿದ್ರು. ಸಿಖ್ಖರ ದೇವಸ್ಥಾನದ ಮೇಲೆ ದಾಳಿ ಆಯಿತು. ಈಗ ಆದಿವಾಸಿಗಳ ದೇವರನ್ನು ನಾಶ ಮಾಡಲಿಕ್ಕೆ ಹೊರಟಿದ್ದಾರೆ. ಆ ಹಕ್ಕು ನಮಗಿಲ್ಲ, ಅವರ ಜೀವನಕ್ರಮವನ್ನು ಬದಲಿಸುವ ಹಕ್ಕು ನಮಗಿಲ್ಲ. ಆದ್ದರಿಂದ ಪ್ರಪಂಚದಲ್ಲೆಲ್ಲಾ ಒಂದು ಎಚ್ಚರ ಇದೆ, ಅದು ಗಣಿಗಾರಿಕೆ ನಡೆಯುವುದು ಅನಿವಾರ್ಯ ವಾದರೆ ಅದು ಹೇಗೆ ನಡೆಯಬೇಕು, ಎಷ್ಟು ಶುದ್ಧವಾಗಿ ನಡೆಯಬೇಕು, ಯಾವ ಹದದಲ್ಲಿ ನಡೆಯಬೇಕು, ಯಾವ ಕಾರಣಕ್ಕಾಗಿ ನಡೆಯಬೇಕು. ಎಷ್ಟು ಕಾಲ ಉಳಿದಿರಬೇಕು. ಇದೆಲ್ಲವನ್ನೂ ನಾವು ಯೋಚಿಸಬೇಕು. ಸಂಪತ್ತು ನಮ್ಮ ಮೊಮ್ಮಕ್ಕಳ ಕಾಲಕ್ಕೂ ಉಳಿದಿರುವ ಹಾಗೆ ನೋಡಿಕೊಳ್ಳಬೇಕು.

ಅಮೆರಿಕದಲ್ಲಿ ಸಿಕ್ಕಾಪಟ್ಟೆ ಪೆಟ್ರೋಲ್ ಇದೆ. ಅವರು ಅದನ್ನು ತೆಗೆದು ಮಾರುತ್ತಾರೇನು? ಮುಂದೆ ಆಪತ್ ಕಾಲ ಬಂದರೆ ಎಂದು ಪೆಟ್ರೋಲ್ ಉಳಿಸಿಕೊಂಡಿ- ದ್ದಾರೆ. ಕರ್ನಾಟಕಕ್ಕೆ ಮತ್ತೆ ಆ ರೀತಿಯ ನೈತಿಕ ಸ್ವಾರ್ಥದ ಚಿಂತೆ ಬೇಕು. ಅದನ್ನು ಕನ್ನಡಿಗರು ಒತ್ತಾಯ ಮಾಡಿ ನಮ್ಮ ಸರ್ಕಾರದ ಮೇಲೆ ಹೇರಬೇಕು. ಕನ್ನಡ ಉಳಿಯುವುದಾದರೆ, ಕನ್ನಡದ ಅದಿರು ಉಳಿದಿರಬೇಕು, ಕನ್ನಡದ ಮಾನವು ಉಳಿದಿರಬೇಕು.

ಕೊನೆಯ ಮಾತು; ನನ್ನದೊಂದು ಆಸೆ ಇದೆ, ಒಂದು ಕಾಲದಲ್ಲಿ ಕರ್ನಾಟಕದವರು ಗವರ್ನರ್ಗಳಾಗುತ್ತಿದ್ದರು, ಐಎಎಸ್ ಆಫೀಸರ್ಗಳಾಗುತ್ತಿದ್ದರು, ಹೀಗೆಲ್ಲಾ ಆಗುವುದರಿಂದ ದೆಹಲಿಯಲ್ಲಿ ನಮ್ಮದೊಂದು ಶಕ್ತಿ ಇರುತ್ತದೆ. ಬಲ ಇರುತ್ತದೆ. ಈಗ ಬಿಹಾರ್ನವರಿಗೆ, ಕೇರಳದವರಿಗೆ, ತಮಿಳರಿಗೆ ಬಲ ಇದೆ. ಕನ್ನಡದವರಿಗೆ ಬಲವೇ ಇಲ್ಲ. ದೆಹಲಿಯಲ್ಲಿ ನಮ್ಮ ಮಾತನ್ನು ಆಡುವವರು ಬಹಳ ಕಡಿಮೆ ಆಗಿದ್ದಾರೆ. ಅಂತಹವರ ಸಂಖ್ಯೆ ಹೆಚ್ಚುವ ಹಾಗೆ ಮಾಡಬೇಕು. ಯಾಕೆಂದರೆ ಭಾರತ ಬಹುಕೇಂದ್ರಿತ ರಾಷ್ಟ್ರವಾಗಿಯೂ, ಈ ರಾಜ್ಯಕ್ಕೂ ಒಂದು ಬೆಲೆ ಬರಬೇಕೆಂದರೆ ಫೆಡರಲ್ ವ್ಯವಸ್ಥೆಯಲ್ಲಿ ನಮ್ಮವರು ದೆಹಲಿಯಲ್ಲಿ ಕೂಡ ಇರಬೇಕು. ಅದಕ್ಕೋಸ್ಕರವಾಗಿ ಈ ಸಂಘಟನೆ ಹೋರಾಡಲಿ ಮತ್ತು ಬೇರೆ ಭಾಷೆಯ ಜನರನ್ನು ಕನ್ನಡಿಗರನ್ನಾಗಿ ಮಾಡುವ ಕೆಲಸ ಮಾಡಲಿ.

ಒಂದೇ ಒಂದು ಡೆಫನೇಷನ್- ಕನ್ನಡಿಗ ಅಂದರೆ ಕನ್ನಡ ಬಲ್ಲವನು ಕನ್ನಡಿಗ. ತಮಿಳಿನವನಿಗೆ ಕನ್ನಡ ಬಂದರೆ, ಅವನು ಕನ್ನಡ ಮಾತನಾಡಿದರೆ ಅವನು ಕನ್ನಡಿಗ. ಯಾವ ಭಾಷೆಯವನೇ ಆಗಲಿ ಕನ್ನಡ ಭಾಷೆ ಕಲಿತ ಕೂಡಲೇ, ಬಳಸುವುದಕ್ಕೆ ಶುರು ಮಾಡಿದರೆ ಅವನು ಕನ್ನಡಿಗ. ಆಗ ಅನಗತ್ಯವಾದ ಹಿಂಸೆ ಇರುವುದಿಲ್ಲ. ಆದರೆ, ಕನ್ನಡ ಮಾತ್ರ ಕಡ್ಡಾಯ. ಅದು ನಮ್ಮ ಘೋಷಣೆ ಆಗಬೇಕು.

ಜೈ ಕರ್ನಾಟಕ.

ಕರವೇ ಪತ್ರಿಕೆ ಬಿಡುಗಡೆ ಮಾಡಿ ಆಡಿದ ಮಾತುಗಳ ಬರಹರೂಪ, ಜೂನ್ 2010.

 

‍ಲೇಖಕರು G

December 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: