ಪ್ರತಿಭಾ ನಂದಕುಮಾರ್
ಗಲಾಟೆಯೋ ಗಲಾಟೆ
ಒಂದು ದೊನ್ನೆ ಉಚಿತ ಪ್ರಸಾದಕ್ಕೆ.
ಉರುಳು ಸೇವೆ, ಪಂಚಾಮೃತ ಅಭಿಷೇಕ,
ಪುಷ್ಪಾರ್ಚನೆ, ಕುಂಕುಮಾರ್ಚನೆ, ಚಾಮರ ಸೇವೆ
ಕಲ್ಯಾಣೋತ್ಸವ, ರಥೋತ್ಸವ, ನವಗ್ರಹ ಶಾಂತಿ
ಗಣಹೋಮ ಇತ್ಯಾದಿಗಳೆಲ್ಲ ಮುಗಿದು
ಪ್ರಸಾದಕ್ಕೆ ಮುಗಿಬಿದ್ದು
ಮಾಡಿದವರ ಪೂಜೆ ಆಡಿದವರ ಬಾಯಲ್ಲಿ.
ಮತ್ಸ್ಯಾವತಾರ ಮತ್ಸ್ಯಾವತಾರ ಅಂತ
ಮೀನು ತಿಂದವರನ್ನು ಒಳಗೆ ಬಿಡದೆ
ವರಾಹಾವತಾರ ವರಾಹಾವತಾರ ಅಂತ ಹಂದಿ
ತಿನ್ನುವವರನ್ನೂ ಬಹಿಷ್ಕರಿಸಿ
ಗಂಡ ಸತ್ತ ಮುಂಡೆನಾ ಬಿಡಬೇಡಿ ಒಳಗೆ
ಅಂತ ಬಾಗಿಲು ಹಾಕಿಕೊಂಡು
ಗೆದ್ದ ನಗೆಯಲ್ಲಿ ಕೈಬೀಸಿ ಚಮಚಾಗಳು
ಅಪರಾವತಾರಗಳು
ಒಳಗೆ ದುರ್ವಾಸನೆಯಲ್ಲಿ
ಹೂಸು ಮೂತ್ರ ಬೆವರು ನಾತದಲ್ಲಿ
ಭಕ್ತ ಜನರ ನಿತ್ಯಮಹೋತ್ಸವ
ನಿತ್ಯ ಅಮಂಗಲ
ಸಕಲ ಮರ್ಯಾದೆಗಳಲ್ಲಿ
ಮಂಗಳಾರತಿ ಎತ್ತಿ
ಡೋಲು ಬಡಿದು
ಹೂವೆರಚಿ ಬರಮಾಡಿಕೊಂಡೆವು
ಉಂಡ ತಟ್ಟೆಗೆ ಉಗಿದು ಹೋದ
ಉಣಿಸಿದ ಕೈಗೆ ಕೋಳ ತೊಡಿಸಿದ.
ಕವಿತೆ ಚೆನ್ನಾಗಿದೆ