ಪ್ರತಿಭಾ ನಂದಕುಮಾರ್
ಅನ್ನ ದೇವರ ಎದುರು
ಇನ್ನು ದೇವರಿಲ್ಲ
ಅಂಬಾನಿ ಅದಾನಿ ಮತ್ತವರ ಆಳುಗಳೆಲ್ಲ
ಅನ್ನ ಬಿಟ್ಟು ಚಿನ್ನ ತಿನ್ನುವಾಗ
ಗಡ್ಡಧಾರಿಗಳು ಹಿಡಿಯಕ್ಕಿ ಕೊಡದೆ ಮೀಸೆ ತಿರುಗಿಸುವಾಗ
ಶರಣೆ ಆಯ್ದಕ್ಕಿ ಲಕ್ಕಮ್ಮ ಹಾದುಹೋದಳು
ಈಸಕ್ಕಿಯಾಸೆ ನಿಮಗೇಕೆ, ಈಶ್ವರನೊಪ್ಪ
ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ
ನಮಗೆ ಎಂದಿನಂದವೇ ಸಾಕು, ಕೊಟ್ಟಷ್ಟು ಕೊಡಿ
ಎಂದಿದ್ದಕ್ಕೆ ಕೆಲಸದಿಂದ ತೆಗೆದು ಹಾಕಿದರು.
ಭಾವಶುದ್ಧವಾಗಿ ತಿಪ್ಪೆಯ ತಪ್ಪಲ ಅಕ್ಕಿಯ ತಂದು
ನಿಶ್ಚೈಸಿ ಮಾಡುತ್ತಿದ್ದವಳು ಹೋಗಿ ಅಲ್ಲಿಯೇ ಸುರಿದು ಬನ್ನಿ
ಎಂದಳು ಅನ್ನಭಾಗ್ಯಕ್ಕೆ ಕಂಟಕ
ಮನದ ಮಾತಲ್ಲಿ ಮುಗ್ಗಿದ ಅಕ್ಕಿ ರಾಜಕೀಯ
ನವಿಲಿಗೆ ಕಾಳುಣಿಸುವವರು
ಹಸಿದ ಕೂಸಿಗೆ ಗಂಜಿ ಉಣಿಸಲಾರರು
ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ತಂಡುಲವ ಕೂಡಿಹಾಕಿ ತೊಡೆತಟ್ಟುವ ಕುಟಿಲರೇ
ಅಕ್ಕಿಗೆ ಬೀಗ ಹಾಕುವ ನಿಮ್ಮ ವಿಕಟತನ
ನಮಗೆ ಸಲ್ಲದಬೋನ.
ಬನ್ನಿ ನೈವೇದ್ಯಕ್ಕೆ ನಮ್ಮ ಮನೆಗೆ
ನಿಮ್ಮ ಘನ ಹೊಟ್ಟೆ ತುಂಬಿಸುತ್ತೇವೆ
ನಮ್ಮದು ನಿತ್ಯ ದಾಸೋಹದ ಪರಂಪರೆ.
ಅವಧಿ ಗೆ ನಾ ಹೊಸ ಅತಿಥಿ