ಗಣಪತಿ ಅಗ್ನಿಹೋತ್ರಿ
ಇಪ್ಪತ್ತು ಲಕ್ಷಕ್ಕೂ ಹೆಚ್ಚು ಪುಸ್ತಕಗಳು. ಜಗತ್ತಿನ ಬಹುತೇಕ ದೇಶಗಳಲ್ಲಿ ಪ್ರಕಟಗೊಂಡಿರುವ ಎಲ್ಲಾ ಪುಸ್ತಕಗಳು ಇಲ್ಲಿವೆ. ಕೋಟಿ ಕೋಟಿ ರೂಪಾಯಿ ಸುರಿದರೆ ಜಗತ್ತಿನ ಯಾವುದೇ ಮೂಲೆಯಲ್ಲಿಲ್ಲದ ಅದ್ಭುತ ಗ್ರಂಥಾಲಯವನ್ನು ಶ್ರೀರಂಗ ಪಟ್ಟಣ -ಪಾಂಡವಪುರ-ನಾಗಮಂಗಲ ಮಾರ್ಗದಲ್ಲಿ ಸಿಗುವ ಹಾರಲಹಳ್ಳಿಯಲ್ಲಿ ನಿರ್ಮಿಸಿಬಿಡಬಹುದು!
ಇಂಥದ್ದೊದ್ದೊಂದು ಹಳ್ಳಿಯಲ್ಲಿ ವಿಶ್ವದಲ್ಲೆಲ್ಲೂ ಇಲ್ಲದಷ್ಟು ದೊಡ್ಡದಾದ ಗ್ರಂಥಾಲಯವನ್ನು ಅದೇಗೆ ನಿರ್ಮಿಸಲು ಸಾಧ್ಯ ಎಂದು ಹುಬ್ಬೇರಿಸಬೇಡಿ. ಖಂಡಿತಾ ಸಾಧ್ಯವಿದೆ. “ಪುಸ್ತಕ ಮನೆ” ಮಾಲೀಕ ಅಂಕೇಗೌಡರು ಈಗಾಗಲೇ ಇದಕ್ಕೊಂಡು ಬುನಾದಿ ಹಾಕಿದ್ದಾರೆ. ಆದರೆ ಗ್ರಂಥಾಲಯ ರೂಪ ಪಡೆದುಕೊಳ್ಳಬೇಕೆಂದರೆ ಕೋಟಿ ಕೋಟಿ ಹಣ ಬೇಕು. ರಾಜ್ಯ ಸರ್ಕಾರ ಅಥವಾ ಇನ್ನಾವುದೇ ಖಾಸಗಿ ಸಂಸ್ಥೆಗಳು ಈ ಮಹತ್ಕಾರ್ಯಕ್ಕೆ ಮುಂದಾಗಬೇಕು. ಒಂದೊಮ್ಮೆ ಇದು ನಿರ್ಮಾಣವಾಯಿತು ಅಂದುಕೊಳ್ಳಿ, ಖಡಾಖಂಡಿತವಾಗಿ ಈ ಗ್ರಂಥಾಲಯವೂ ವಿಶ್ವದಾಖಲೆ ಆಗಲಿದೆ. ಅಷ್ಟಕ್ಕೂ ಅಂಕೇಗೌಡರು ಈಗಾಗಲೇ ದಾಖಲೆ ನಿರ್ಮಿಸಿರುವ ಪುಸ್ತಕ ಸಂಗ್ರಾಹಕರು. ಅಪರೂಪದ ಒಂದು ಸಾಧನೆ ಮಾಡಿರುವ ಅಪ್ಪಟ ಕನ್ನಡಿಗರು ಅನ್ನೋದು ನಮಗೆ ಹೆಮ್ಮೆ.
ಹೌದು, ಸ್ಥಳೀಯ ನಿವಾಸಿ ಅಂಕೇಗೌಡ ಅವರು ಕುಟುಂಬ ಸದಸ್ಯರ ಜೊತೆಗೂಡಿ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ತಮ್ಮ ಪುಸ್ತಕ ಮನೆಯಲ್ಲಿ ಸಂಗ್ರಹಿಸಿಕೊಂಡಿದ್ದಾರೆ. ಯಾವ ಪುಸ್ತಕ ಇಲ್ಲ ಎನ್ನುವಂತಿಲ್ಲ. ಎಲ್ಲವೂ ಇದೆ. ಆದರೆ ಬೇಕು ಎಂದ ತಕ್ಷಣ ಕೈಗೆ ಎಟುಕದು. ಕಾರಣ ವ್ಯವಸ್ಥಿತವಾಗಿ ಜೋಡಿಸಲಾಗಿಲ್ಲ. ಜಗತ್ತಿನ ಎಲ್ಲಾ ಪುಸ್ತಕಗಳನ್ನು ಒಂದೇ ಸೂರಿನಡಿಯಲ್ಲಿ ತರಬೇಕೆನ್ನುವ ಅಂಕೇಗೌಡರ ಪ್ರಯತ್ನ, ಸಾಧನೆ ಎಂಥವರನ್ನೂ ಹುಬ್ಬೇರಿಸುವಂತೆ ಮಾಡುವಂತದ್ದು. ಈಗಾಗಲೇ ಅನೇಕ ದಾನಿಗಳು ಅಂಕೇಗೌಡರಿಗೆ ಸಹಾಯ ಮಾಡಿದ್ದರಾದರೂ ಇಷ್ಟೊಂದು ಪುಸ್ತಕಗಳನ್ನು ಗ್ರಂಥಾಲಯದ ರೀತಿಯಲ್ಲಿ ಜೋಡಿಸಿಕೊಳ್ಳುವುದು ಒಂದು ದೊಡ್ಡ ಸವಾಲು. ಆದರೂ ಇಂದಲ್ಲ ನಾಳೆ ಗ್ರಂಥಾಲಯದ ರೀತಿಯಲ್ಲೇ ಜೋಡಿಸುವ ಕಾರ್ಯ ಮಾಡಲು ಪ್ರಯತ್ನ ನಡೆಸುತ್ತೇನೆ ಎನ್ನುತ್ತಾರೆ.
ಇತ್ತೀಚೆಗೆ ಅಂಕೇಗೌಡರನ್ನು ಭೇಟಿ ಮಾಡುವ ಅವಕಾಶ ದೊರಕಿತು. ಎರಡು ಗಂಟೆ ಕಾಲ ಅವರ ಪುಸ್ತಕ ಭಂಡಾರದಲ್ಲಿ ಕುಂತೆದ್ದು ಬಂದೆವು. ಅವರ ನಿತ್ಯ ಕಾಯಕ, ಪುಸ್ತಕಗಳ ಜೊತೆಗಿನ ಸಾಂಗತ್ಯ, ನಡೆದುಬಂದ ದಾರಿಯ ಕುರಿತು ಮಾತನಾಡಿದೆವು. ಇಷ್ಟೇ ಅಲ್ಲ, ಅವರೇ ಸ್ವತಃ ತಾವು ಸಂಗ್ರಹಿಸಿದ ನಾಣ್ಯಗಳನ್ನೆಲ್ಲ ಒಂದೊಂದಾಗಿ ತೋರಿಸಿದರು. ಸಂಗ್ರಹ ಹವ್ಯಾಸವನ್ನು ಅವರೆಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ಅವರ ಬದ್ಧತೆಯೇ ಸಾಕ್ಷಿಯಾಗಿದೆ. ಒಂದಂತೂ ತೂ ಸತ್ಯ, ಅಂಕೇಗೌಡರ ಈ ಪುಸ್ತಕ ಸಂಗ್ರಹ ಹವ್ಯಾಸ ಅರ್ಥಪೂರ್ಣ ಆಗಬೇಕೆಂದರೆ, ಕಡೇ ಪಕ್ಷ ಅವರ ಊರಿನ ಜನತೆಗಾದರೂ ಈ ಪುಸ್ತಕಗಳನ್ನು ಕುಳಿತು ಓದುವ ವ್ಯವಸ್ಥಿತ ಅವಕಾಶ ಆಗಬೇಕು. ಇದಕ್ಕೆ ಯಾರಾದರೂ ಕೈಜೋಡಿಸಲಿ ಎಂದು ಹಾರೈಸೋಣ.
0 ಪ್ರತಿಕ್ರಿಯೆಗಳು