ಪಿ ನಂದಕುಮಾರ
**
ಈ ಓಣಿಯ ಕೊನೆಗಿರುವ ದಾರಿ ತಿರುವಿನಲ್ಲಿ
ಹೂ ಅರಳಿರಬಹುದು
ಅದರ ನೆರಳು ನೀನೇ ಯಾಕಾಗಿರಬಾರದು?
ಹಗಲು-ಇರುಳಿನ ನಡುವೆ
ನೆಟ್ಟ ದೀಪಗಳ ಬೆಳಕು
ಉಗುಳಿ ಹೋಗಿದ ಮೌನ
ನೀನೇ ಯಾಕಾಗಿರಬಾರದು?
ಸುಡುವ ನೆತ್ತಿಯ ಮೇಲೆ
ಹಗಲ ಕಣ್ಣಿನ ಸೂರ್ಯ
ತೇಪೆ ಹೊಲೆದ ನೆರಳು
ಸುಳಿವಾತ್ಮ ನೀನೇ ಯಾಕಾಗಿರಬಾರದು?
ಬಿರಿದ ಒಂಟಿ ಹೂ
ಚೆಲ್ಲಿಹೋದ ಬಿಂಬ
ನೆನ್ನೆ ಹಗಲನು ಇಂದು ಮುಡಿಯಬಹುದೇ?
ಇದ್ದ ದಾರಿಯು ಬೇರೆ
ತುಳಿದ ದಾರಿಯು ಬೇರೆ
ಕೂಡುವಲ್ಲಿ ನಾವು
ಒಂದೇ ಆದೆವು
ಕ್ಷಣಕ್ಕೆ ಮಾಸಿದ ಗಾಯ
ಉಳಿಸಿ ಹೋಗಿದೆ ನೋವು
ನಗುವ ಚೆಲ್ಲುವವರು ಯಾರು
ದಿಟದ ದಾರಿಗೆ
ಚೆಂದದ ಕವಿತೆಗಳು. ಧನ್ಯವಾದಗಳು