ನೂತನ ದೋಶೆಟ್ಟಿ ಹೊಸ ಕವಿತೆ- ಸಾವು ಸದರ

ನೂತನ ದೋಶೆಟ್ಟಿ

ಬೀದಿಗಳಲ್ಲೀಗ ಭಯದ ನಿರ್ಭಿಡೆಯ ಓಡಾಟ
ಖಾಲಿ ಖಾಲಿ ರಸ್ತೆಗಳ ಮೇಲೆ
ಅದರದ್ದೇ ಕಾರುಬಾರು

ಬದುಕಿಗೋ ಹಗಲು ರಾತ್ರಿಗಳ ಪರಿವೆಯೇ ಇಲ್ಲ
ಮೋಟು ಬೀಡಿಯಾಗಿರುವ ಹಗಲು
ಉರಿದು ಉಳಿಸಿದ ಬೂದಿಯಲ್ಲಿ
ಹುಟ್ಟುತ್ತಿದೆ ನಿರ್ಜೀವ ಮಧ್ಯಾಹ್ನ

ಮುಚ್ಚಿದ ಅಂಗಡಿಗಳು ಬೇಯಿಸುತ್ತಿವೆ
ಹಸಿವಿನಿಂದ ಕಂಗೆಟ್ಟ ಕಣ್ಣೀರ ಕಥೆಗಳ
ತಣಿಸಲು ಹೊಟ್ಟೆಬಾಕ ಭಯದ ಹಸಿವ

ಇದು ಸಾವು ಸರಕಾದ ಕಾಲ!

ಬಿಕರಿಗಿಟ್ಟ ಉಸಿರುಗಳು ಎಣಿಸುತ್ತಿವೆ
ಹಸಿ ಹಸಿಯ ಕಾಂಚಾಣ
ಸಾಲು ಸಾಲು ಶವಗಳು ಬರೆಯುತ್ತಿವೆ
ಎದೆ ಬಡಿತದ ರಸೀದಿ

ಇದು ಉಸಿರ ಮಾರಾಟದ ಕಾಲ !

ಬೆಡ್ಡಿಗಾಗಿ ಬಡಿವಾರ, ಬಡಿದಾಟ
ಎದೆಯೊಡೆದರೂ ನಿಲ್ಲದ ನರಳಾಟ
ಸಪ್ಪಗೆ ಉರಿವ ಅನಾಥ ಚಿತೆಯ
ಕೊಳ್ಳಿ ಹಿರಿವ ಕಟುಕರಿವರು
ಭಯವ ಪೊರೆಯುವವರು

ಇದು ಮೌಲ್ಯಗಳ ಮೆದ್ದ ಕಾಲ !

ತೊಡೆ ತಟ್ಟುವ ಭಯದ ತಕಧಿಮಿಗೆ
ಕೆಲವರು ಪೈಪು ಜೋಡಿಸುತ್ತಾರೆ
ಕೆಲವರು ಉಸಿರ ತಡೆಯುತ್ತಾರೆ
ಕೆಲವರು ಮೈಕು ಹಿಡಿದರೆ
ಕೆಲವರು ಗಾಳಿಯೂದುತ್ತಾರೆ

ಇದು ಗತಿಗೆಟ್ಟ ಮತಿಗೆಡಿಸಿದ ಕಾಲ !

ಬದುಕ ಥೈಲಿಯ ತುಂಬ
ನೋವ ಸಂತೆಯ ಸರಕು
ಕಳೆದು ಅಳುವವರಿಗೂ
ಕೂಡಿ ಆಳುವವರಿಗೂ

ಇಲ್ಲಿ ಜೀವ ದುರ್ಭರ , ಸಾವು ಸದರ

ಹೆಣವು ಕಕ್ಕುವ ಹಣಕೆ
ಜೋತಾಡುವ ಜೋಳಿಗೆಗಳಲಿ
ಸುಡುಸುಡು ನಾಲಿಗೆಗಳು
ಸೃವಿಸುತ್ತಿವೆ ಅಮಾನವೀಯತೆಯ

ಇದು ನತದೃಷ್ಟ ಕಾಲ.

‍ಲೇಖಕರು Avadhi

May 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: