ಕೇಶವ ಮಳಗಿ
**
ಬಳ್ಳಾರಿಗೆ ಹೋದವರು ತಾಳೂರು ರಸ್ತೆಯಲ್ಲಿರುವ ‘ನುಡಿ ಕೆಫೆ’ಗೆ ಭೇಟಿ ನೀಡಿ. ಕಾಫಿ ಜತೆ ಪುಸ್ತಕಗಳ ಮೇಲೆ ಕಣ್ಣು ಹಾಯಿಸಿ. ಸುಡು ಬಿಸಿಲಿನಲ್ಲಿ ಕಾಫಿ ಅಥವ ಚಹಾ ಕುಡಿಯುವುದೇ ಈ ಸೀಮೆಯ ಕಡ್ಡಾಯ ಸಂಪ್ರದಾಯ. ‘ನುಡಿ ಕೆಫೆ’ಯ ರೂವಾರಿ: ಹಿಂದೆ ಕಥೆಗಾರರಾಗಿದ್ದ, ಸದ್ಯ ಮಕ್ಕಳ ಸಾಹಿತ್ಯದಲ್ಲಿ ತಲ್ಲೀನರಾಗಿರುವ ಮತ್ತು ಅದೇ ವಿಷಯದಲ್ಲಿ ಪಿಎಚ್ಡಿ ಅಧ್ಯಯನ ಪೂರೈಸಿರುವ ಶಿವಲಿಂಗಪ್ಪ ಹಂದ್ಯಾಳು.
ಅವರು ಅಥವ ಬೇರಾವುದೇ ಸಾಹಿತ್ಯಾಸಕ್ತರು ಎದುರಾದರೆ ನಮ್ಮ ಸೀಮೆಯ ಜನ ಬೆಂಗಳೂರು ಸಾಹಿತ್ಯ ರಾಜಕಾರಣಿಗಳ ಕುರಿತು ಎಂಥ ಅಭಿಪ್ರಾಯ ಹೊಂದಿದ್ದಾರೆ ಎಂದು ನಿಮಗೆ ತಿಳಿಯುವುದು. ಇಷ್ಟಕ್ಕೂ ಕಾಫಿ ಕುಡಿದು ನಾಲಿಗೆ ದಪ್ಪಗಾಗುವ, ಬಿಸಿಲಿಗೆ ತಲೆ ಧಿಮ್ಮೆನ್ನುವ ಪ್ರಕೃತಿಯವರಾದರೆ ನೇರ ಕಾಳಮ್ಮ ಬೀದಿಗೆ ಹೋಗಿ ‘ನನ್ನೇರಿ’ ಸೇವಿಸಿ.
ಸೋಡಾ, ಐಸ್ ಕ್ಯೂಬ್ ಹಳಕುಗಳು, ಹತ್ತಾರು ಬಣ್ಣದ ಸಕ್ಕರೆ ಪಾಕದ ಈ ಪೇಯ ನಮ್ಮಲ್ಲಿ ಮಾತ್ರ ಸಿಗಲು ಸಾಧ್ಯ. ಈ ತಲೆ ಒಡೆಯುವ ಬಿಸಿಲಿಗೆ ಏನೇ ಮಾಡಿದರೂ, ಸೇವಿಸಿದರೂ ಸಮಾಧಾನವಿಲ್ಲ ಎಂಬ ಭಾವದವರಾದರೆ ಒಂದು ಥಣ್ಣನೆ ಬಿಯರು, ಒಗ್ಗಣ್ಣಿ ಮೆಣಸಿನಕಾಯಿ ಸೇವಿಸಿ ಹಂಪಿ ಎಕ್ಸಪ್ರೆಸ್ ಮೂಲಕ ನಿಮ್ಮ ಊರು ಸೇರಿಕೊಳ್ಳಿ. ಬಳ್ಳಾರಿ ಮರೆಯಾದರೂ- ಮರೆಯಾಗುವುದಿಲ್ಲ ನೀವು ಇಲ್ಲಿ ಪಡೆದ ಅನುಭವ ನರಜೀವಕ್ಕೆ ಗುರು ಕಿವಿಯಲಿ ನೀಡಿದ ಮಂತ್ರಾಕ್ಕರದ ಶಬ್ದದ ಹಾಗೆ, ನೆತ್ತಿಯಿಂದ ಉದುರಿ ನೆಲಕೆಲ್ಲ ದೈವ ಪರಿಮಳವನ್ನು ಸೂಸುವ ಇಲ್ಲಿನ ಮಲ್ಲಿಗೆಯ ಹೂವಿನ ಹಾಗೆ.
0 ಪ್ರತಿಕ್ರಿಯೆಗಳು