ನಿನ್ನೆ ‘ಅವಧಿ’ಯಲ್ಲಿ ಟಿ ಎನ್ ಸೀತಾರಾಂ ಹಾಕಿಕೊಂಡ ಆ ಚಪ್ಪಲಿ ಬರಹವನ್ನು ಪ್ರಕಟಿಸಿದ್ದೆವು. ಅದು ಎಷ್ಟು ಮನ ಕಲಕುವಂತಿತ್ತು ಎಂದರೆ ಸೀತಾರಾಂ ಅವರು ಬಯಸಿದ ಆ ಕೆಂಪು ಪಟ್ಟಿ ಇರುವ ಚಪ್ಪಲಿಯನ್ನು ಈಗ ನಾವೂ ಹುಡುಕುತ್ತಿದ್ದೇವೆ..
ಈ ಬರಹ ಅನೇಕರನ್ನು ಕಾಡಿದೆ. ಇದರ ಪರಿಣಾಮವಾಗಿ ಬಂದ ಇನ್ನೆರಡು ಕಥನಗಳು ಇಲ್ಲಿವೆ
ಜಯಂತ ಕಾಯ್ಕಿಣಿ ಅವರ ಪಾರ್ಲರ್ ಗೆ ಬಂದ ಪ್ರತಿಕ್ರಿಯೆ ಯ ಸುರಿಮಳೆ ಹೇಗಿತ್ತು ಎನ್ನುವುದು ನಿಮಗೆ ಗೊತ್ತು. ಈಗ ಟಿ ಎನ್ ಸೀತಾರಾಂ ಅವರ ಚಪ್ಪಲಿ ಅನುಭವ ಇದೆ.
ಬನ್ನಿ ನಿಮ್ಮೊಳಗೆ ಇರುವ ಚಪ್ಪಲಿ ಕುರಿತ ಅನುಭವಗಳನ್ನು ಬರೆಯಿರಿ
[email protected] ಗೆ ಕಳಿಸಿಕೊಡಿ
ಗೊತ್ತಿಲ್ಲ
ಶಬ್ದಾಡಂಬರವಿಲ್ಲದೇ ಸರಳವಾಗಿಯಾದರೂ ಭಾವಗೀತಾತ್ಮಕವಾಗಿ ಒಕ್ಕಣಿಸುವುದು ಟಿ ಎನ್ ಸೀತಾರಾಂರವರ ವೈಶಿಷ್ಟ್ಯ.
ಸಹಜ ಸೊಗಸಿನ ಈ ಬರಹ ಓದುತ್ತಿದ್ದಂತೆ ಪ್ರಾಥಮಿಕ 5ನೇ ತರಗತಿಯಲ್ಲಿದ್ದಾಗಲೇ ಮದುವೆಯೊಂದರಲ್ಲಿ ಒಳ್ಳೇ ಚಪ್ಪಲಿ ಕದ್ದು ಹಾಕಿಕೊಂಡದ್ದು ನೆನಪಾಯ್ತು.
ನನ್ನದು 1ರಿಂದ6ನೇ ತರಗತಿ ವರೆಗೆ ನಮ್ಮ ತಾಯಿಯ ತವರೂರು ಸೋಂಪುರ ಸರ್ಕಾರೀ ಶಾಲೆಯಲ್ಲಿ ಅಭ್ಯಾಸ. ಅಲ್ಲಿಂದ 5ಕಿಲೊಮೀಟರ್ ದೂರದ ಚಿಕ್ಕೇನಕೊಪ್ಪಕ್ಕೆ (-ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ ದೇವೇಂದ್ರ ಕುಮಾರ ಹಕಾರಿಯವರ ಸ್ವಗ್ರಾಮ-) ಬಂಧುಗಳ ಮದುವೆಗಾಗಿ ನನ್ನ ಚಿಕ್ಕಮ್ಮನ ಮಗ ಶಂಕರನೊಂದಿಗೆ ಹೋಗಿದ್ದಾಗ ಒಂದೆರಡು ಜೊತೆ ಹೊಸ ಚಪ್ಪಲಿ ನಮ್ಮನ್ನು ಆಕರ್ಷಿಸಿಬಿಟ್ಟವು.
ಅದುವರೆಗೂ ಚಪ್ಪಲಿಯನ್ನೇ ಕಾಣದ ನಮ್ಮ ಕಾಲು ಅಂಗಲಾಚಿದವು. ಸರಿ! ಹಿಂದೆ-ಮುಂದೆ ನೋಡದೇ ಮೆಟ್ಟಿಕೊಂಡು ಊರ ಹೊರಗಿನ ಚೌಕಿಯ ಗುಪ್ತ ಸ್ಥಳದಲ್ಲಿ ಮುಚ್ಚಿಟ್ಟು ಬಂದು ಭರ್ಜರೀ ವಿವಾಹ ಭೋಜನ ಹೊಡೆದು ಚೌಕಿಗೆ ಬಂದು ಚಪ್ಪಲಿ ಮೆಟ್ಟಿಕೊಂಡವರೇ ಯಾರಿಗೂ ಹೇಳದೇ, ಯಾರಿಗೂ ಕಾಯದೇ ಸೋಂಪುರಕ್ಕೆ ನಡೆದುಕೊಂಡು ಬಂದೆವು.
ತಂದೆ-ತಾಯಿ-ಹಿರಿಯರು ಎಲ್ಲಿಂದ ಕದ್ದು ತಂದಿರೆಂದು ಹೊಡೆದೂ ಬಡಿದೂ ಕೇಳಿದರೂ ಏನೂ ಹೇಳದೇ ಸುಮ್ಮನೇ ಅತ್ತೆವೇ ಹೊರತು ನಿಜಾಂಶ ಹೇಳಲಿಲ್ಲ.
ಆದರೆ ಮರುದಿನವೇ ನಮ್ಮ ಹೂರಣ ಹೊರಬಿತ್ತು. ಶಾಲೆಗೆ ಹೋಗಿದ್ದ ನಮ್ಮನ್ನು ಕರೆಯಲು ಯಾರೋ ಬಂದರು. ಏನೋ ವಿಶೇಷವಿರಬೇಕೆಂದು ಮನೆಗೆ ಹೋದರೆ ಚಿಕ್ಕೇನಕೊಪ್ಪದ ಮದುವೆಯಲ್ಲಿ ಚಪ್ಪಲಿ ಕಳಕೊಂಡ ಮಹಾನುಭಾವರು-ಅವರೂ ನಮ್ಮ ಪರವೂರಿನಲ್ಲಿರುವ ಸಂಬಂಧಿಕರಂತೆ- ಬಂದು ಒಕ್ಕರಿಸಿದ್ದರು.
ಆದರೆ ಅವರು ದಯಾಮಯಿಗಳು. ಪಾಪ! ಚಿಕ್ಕಮಕ್ಕಳು ಏನೋ ಆಶೆಪಟ್ಟು ಹಾಕಿಕೊಂಡು ಬಂದಿದ್ದಾರೆಂದು ಕನಿಕರ ತೋರಿ ನಮಗೆ ಹೊಸ ಹವಾಯಿ ಚಪ್ಪಲಿ ಕೊಡಿಸಿ ಆ ದುಬಾರೀ ಲೆದರ್ ಚಪ್ಪಲಿಗಳನ್ನು ತೆಗೆದುಕೊಂಡು ಹೋದರು.
ಆದಿವಾಲ ಗಂಗಮ್ಮ
ಚಿಕ್ಕಬಳ್ಳಾಪುರದ ಚಿಕ್ಕಪ್ಪನ ಮನೆಯಲ್ಲಿ ಇದ್ದುಕೊಂಡು ಕಾಲೇಜು ಓದುತ್ತಿದ್ದದಿನಗಳವು.
ಅಪ್ಪ ಕಳುಹಿಸಿದ ಹಣ ಏನೇನೂ ಸಾಲುತ್ತಿರಲಿಲ್ಲ, ಅವರು ರೈತರು ಅವರಿಗೇ ನೂರೆಂಟು ಖರ್ಚು ಸಧ್ಯ ನನ್ನನ್ನು ಓದಲಿಕ್ಕೆ ಕಳುಹಿಸಿದ್ದೆ ಹೆಚ್ಚು.ನೋಟ್ ಬುಕ್ಕಿಗೂ ಪರದಾಡುತ್ತಿದ್ದೆ, ರೂಲಿಲ್ಲದ ಉದ್ದನೆಯ ಬಿಳಿಹಾಳೆ ಕೊಂಡುಕೊಂಡು ಸಣ್ಣಗೆ ಬರೆದು ಪಿನ್ನು ಹಾಕಿಕೊಳ್ಳುತ್ತಿದ್ದೆ, ಹಾಗೆಯೆ ಚಪ್ಪಲಿಗೂ ಕೂಡ.
ಒಂದೇ ಚಪ್ಪಲಿಯನ್ನು ಅದೆಷ್ಟು ಸಾರಿ ಹೊಲಿಸಿದ್ದು, ಅದೆಷ್ಟು ಸಾರಿ ಪಿನ್ನು ಹಾಕಿದ್ದು. ಅಣ್ಣ ಬೆಂಗಳೂರಿನಿಂದ ಬಂದ್ದಿದ್ದ ನನ್ನ ನೋಡಲು ಚಪ್ಪಲಿ ಕೊಡಿಸಿ ಹೋದ . ಅವನೂ ಹಾಸ್ಟಲಿನಲ್ಲಿದ್ದುಕೊಂಡು ಇಂಜಿನಿಯರಿಂಗ್ ಓದುತ್ತಿದ್ದ, ಪಾಪ ಅವನಿಗೂ ಕಷ್ಟವೇ. ಹೊಸ ಚಪ್ಪಲಿ ಮೆಟ್ಟಿದ ಖುಷಿಗೆ ಕಣ್ಣೀರು ಬಂದಿತ್ತು.
ಸೀತಾರಾಮ್ ಸಾರ್ ನಿಮ್ಮ ಲೇಖನ ಮತ್ತೊಮ್ಮೆ ಆ ದಿನಗಳನ್ನು ಮೆಲಕು ಹಾಕುವಂತೆ ಮಾಡಿತು, ಧನ್ಯವಾದ ಸಾರ್.
0 ಪ್ರತಿಕ್ರಿಯೆಗಳು