ಧ್ಯಾನ ದೀಪ
ಗಾಯತ್ರೀ ರಾಘವೇಂದ್ರ
ಓ ಅವನ ಕೊಂದೆ
ರಕ್ಕಸರ ಸದೆಬಡಿದ
ನಿನ್ನ ಕೈಗಳಿಗೆ ನೆತ್ತರ ಕಲೆ!
ನೀ ಮುಡಿಸಲಿ ಎಂದು ಕಾದ
ಅರೆಬಿರಿದ ಮಲ್ಲಿಗೆ ಹಳಸಿ ಹೋಗಿ
ಯಾವ ಕಾಲವಾಯಿತು ಬಲ್ಲೆಯಾ?
ಯಾಕೋ ಬಿಡಿಸಿಟ್ಟ ಹೂಗಳಲೂ
ರಕ್ತದ ಕಮಟು
ನೀ ಕದ್ದು ನೆಕ್ಕಿದ ಬೆಣ್ಣೆ
ತೊಟ್ಟ ಕೊರಳ ಮಾಲೆ ಕೈಯಲಿ ಸದಾ ಕೊಳಲು
ತುಂಟ ನಗೆ ಕಂಡವಳು ನಾನು
ಹಸಿರ ವೃಂದಾವನದಲಿ
ಎದೆಗುಡಿಯೊಳಗೆ ಕಾಪಿಟ್ಟ
ಪುಟ್ಟ ಪ್ರೇಮದ ಮೂರ್ತಿ
ನರರುಂಡ ಚೆಂಡಾಡಿ
ಉರಿದುಬಿದ್ದ ವೈರಿಗಳುಸಿರ ನಿಲ್ಲಿಸಿ
ಧಗ ಧಗನುರಿವ ಕೆಂಡ ಕಂಗಳ
ಕ್ರೌರ್ಯ ಕಾಣಬಯಸುವುದಿಲ್ಲ
ರಣರಂಗದಲಿ ಮಲ್ಲಿಗೆಯ
ನೆಡಬೇಕಿಲ್ಲ ನೀನು
ನಿನ್ನೆದೆಯೊಳಗೊಮ್ಮೆ ಹೊಕ್ಕು ನೋಡು
ನಾನೇ ಕಟ್ಟಿಟ್ಟ ದಂಡೆ
ಹಚ್ಚಿದೊಲವ ಬತ್ತಿ
ಬೆಳಗಿದದಮ್ಯ ಧ್ಯಾನದೀಪ
ಅನನ್ಯ ಚಿತ್ರಣ