( ಹಂದ್ರಾಳ ಕೇಶವ ರೆಡ್ಡಿಯವರ ಕವನ ಓದಿ ನಿಜಕ್ಕೂ ನನ್ನ ಮನ ಕಲಕಿತು. ಎಷ್ಟು ಸತ್ಯವಾದ ಮಾತು ಬರೆದಿದ್ದಾರೆ. ಒಂದಷ್ಟು ನಾನೂ ಬರೆದೆ ನೋವಿನಲಿ.)

ಗೀತಾ ಹೆಗ್ಡೆ ಕಲ್ಮನೆ
ಬೀಳಬಹುದು ನಾಳೆಯೇ ನಮ್ಮ ಹೆಣಗಳು
ಹೊಟ್ಟೆಯ ಹಸಿವು ತಾಳಲಾಗದೇ
ಅಥವಾ ಕುಡಿಯಲು ಗುಟುಕು ನೀರಿಲ್ಲದೇ
ಬನ್ನಿ ಬಲಾಡ್ಯರೆ ನಮ್ಮ ಹೆಣಗಳಲೂ
ಒಂದಷ್ಟು ಕಾಸು ಕವಡೆ ನಿಮಗೆ ಸಿಗಬಹುದು
ಹುಡುಕಿ ಬೇಗ ಇದಕೊಂದು ತಂತ್ರ ಮಂತ್ರ.
ಏಕೆ ನಿಮಗಿದರಿಂದ ಕಾಸು ಹುಟ್ಟಿಸಿಕೊಳ್ಳುವ ಖರಾಮತ್ತು
ಎಂದು ನಾವಂತೂ ಕೇಳುವುದೇ ಇಲ್ಲ
ಏಕೆಂದರೆ ಇಲ್ಲಿ ನಮ್ಮ ಸಂಸ್ಕಾರ ಮಾಡಲು
ಈಗಿನ ಮಂದಿಗೆ ವ್ಯವಧಾನವೂ ಇಲ್ಲ, ಸಮಯವೂ ಇಲ್ಲ,
ಇವೆಲ್ಲ ಮೂಢ ನಂಬಿಕೆ, ಪುರೋಹಿತರ ಅಭಾವದ ನೆವ
ಈ ದೇಶ ಬಿಟ್ಟು ತೊಲಗಿ ತಮ್ಮ ಧ್ಯೇಯ ಬೆಯಿಸಿಕೊಳ್ಳುತ್ತಿರುವ
ಒಂದಷ್ಟು ಮಕ್ಕಳು ಹುಟ್ಟಿ ಸಂಪ್ರದಾಯವೆಂಬುದು
ಕೆಟ್ಟು ಕುಲಗೆಟ್ಟು ಹೋಗಿದೆ!
ಮೊನ್ನೆ ಅದ್ಯಾವನೊ ಕೈಲಾಗದ ಹೆತ್ತ ತಾಯಿಯ
ಮೆಟ್ಟಲತ್ತಿಸಿ ಮೇಲಿಂದ ದೂಡಿಲ್ಲವೆ?
ಇನ್ನೂ ಹತ್ತು ಹಲವು ನಿಧರ್ಶನ ಗೋರಿಗೆ ತಳ್ಳಲು
ಜೀವಂತವಾಗಿರುವಾಗಲೇ ಸತ್ತು ಸತ್ತು ಬದುಕುವ ಹೆಣಗಳು
ಕೈ ಜೋಡಿಸುತ್ತಿರುವ ನಿಮ್ಮಂಥವರಿಗೂ
ಸಾಪ್ಟಾಂಗ ನಮಸ್ಕಾರ ಮಾಡಿ ಹೋಗಲು ತಯಾರಿದ್ದೇವೆ.
ಬದುಕಿನ ದಿನಗಳ ನೆನೆದು ಪರಿತಪಿಸುತ್ತ
ನಾಳೆಯ ಕಿಂಡಿಯಲಿ ಬೆಳಕ ಹುಡುಕುವ ಕನಸು
ಮಗ ಬರುವನೆ? ನಮ್ಮ ನೋಡಿಕೊಳ್ಳಬಹುದೆ?
ರಾಜ್ಯವನಾಳುವ ಧೀಮಂತರು ನಮ್ಮ ನೆರವಿಗೆ ಬರಬಹುದೆ?
ನೆಮ್ಮದಿಯ ಬದುಕು ಕೊನೆಗಾಲದಲ್ಲಾದರೂ ಕಾಣಬಹುದೆ?
ಇವೆಲ್ಲಾಗಲೇ ಸತ್ಯವಾಗಿಯೂ ಸತ್ತು ಕೆರೆ ಕಂಡಿರುವಾಗ
ಮಾತಿದ್ದೂ ಮೂಕರಾಗಿದ್ದೇವೆ ಚಿಂತೆಯನ್ನೆಂತೂ ಮಾಡದಿರಿ
ಇರುವುದೆಲ್ಲವ ಬಿಟ್ಟು ಹೊರಡಲು ನಿಂತ
ನಿಜವಾದ ವಿರಾಗಿಗಳು ನಾವು!!






0 Comments
Trackbacks/Pingbacks