ಸ್ವಗತ
ವನಮಾಲಾ ಸಂಪನ್ನಕುಮಾರ
~~~~~
ಬೆನ್ನಿಗಿರಿದವರು
ಎದುರು ಬಂದು
ಸುರಿವ ನೆತ್ತರಿಗೆ
ಕಾರಣ ಕೇಳುತ್ತಾರೆ
ಆಗ ಇನ್ನಷ್ಟು ನೋವು
* * * *
ದನಿ ಮೌನವಾಗಿ
ಯುಗ ಉರುಳಿದೆ
ಹಾಡು ನನಗೀಗ ಅಪರಿಚಿತ
* * * * *
ಯಾವ್ಯಾವುದೋ ಕಾರಣಕ್ಕೆ
ಎದೆಯೊಳಗೆ ಸಿಡಿಮದ್ದು
ಹುಟ್ಟುತ್ತದೆ ಅದು
ಸಿಡಿಯದಂತೆ ತಡೆಯುವುದೇ
ನನ್ನ ಬದುಕಾಗಿದೆ
* * * * *
ಸುಖವನ್ನೂ ದು:ಖವನ್ನೂ
ಒಟ್ಟಿಗೇ ತೂಗುತ್ತಿದ್ದೇನೆ
ತೂಕ ನೋಡಿದಮೇಲೆ
ಎದೆಭಾರ ಹೆಚ್ಚಾದಂತೆ
ನಿಟ್ಟುಸಿರು…
* * * * * *
ಪ್ರೀತಿಗೆ ಅಂಟಿಕೊಂಡಿದ್ದೇನೆ
ದ್ವೇಷ ನನ್ನ
ಮನೆ ಬಾಗಿಲು
ಬಡಿದು ವಾಪಾಸು ಹೋಗಿದೆ
* * * * * *
ಬೇಡೆಂದರೂ
ಮುಚ್ಚಿಟ್ಟ ಸಂಕಟಗಳು
ಸಾಲಾಗಿ ನಿಂತು
ಸಾಲುಗಳಾಗಿ ಬಿಡುತ್ತವೆ
ನಾನಿನ್ನು ಏನನ್ನೂ ಬರೆಯುವುದಿಲ್ಲ.
mam kavite tumba arathapurnavu varthamanada tallanagalannu kattikoduthade,thank you
ಪ್ರೀತಿಗೆ ಅಂಟಿಕೊಂಡಿದ್ದೇನೆ
ದ್ವೇಷ ನನ್ನ
ಮನೆ ಬಾಗಿಲು
ಬಡಿದು ವಾಪಾಸು ಹೋಗಿದೆ kavithe thumba chennagi moodi bandide