ನಾಗ ಎಚ್ ಹುಬ್ಲಿ
“ಒಬ್ಬ ಸಾಹಿತಿಯ ಆರು ಗಂಡುಮಕ್ಕಳ ಪೈಕಿ ಐವರು ಆತ್ಮಕಥನ ಬರೆದಿದ್ದಾರೆ!” ನಿಜಕ್ಕೂ ಯಾರೇ ಆಗಲಿ, ಈ ವಿಷಯವನ್ನು ಕೇಳಿದರೆ ಹುಬ್ಬೇರಿಸುತ್ತಾರೆ. ಏಕೆಂದರೆ, ಇದೊಂದು ಅಪರೂಪದಲ್ಲಿಯೇ ಅಪರೂಪದ ಉದಾಹರಣೆ. ಭಾರತೀಯ ದಾಖಲೆಯೂ ಇರಬಹುದು. ನಿಜ… ಶ್ರೀ ಸಗುಣ ಶಂಕರ ಹಬ್ಬು ಕುಟುಂಬದ ಬಗ್ಗೆ ಈ ಮಾತನ್ನು ದಾಖಲುಸುತ್ತಿದ್ದೇನೆ. ಅವರ ಆರು ಪುತ್ರರೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಸುಭಾಷ್ ಚಂದ್ರ, ಮೋಹನ್ ಕುಮಾರ್, ರಾಮಚಂದ್ರ, ಅರುಣ್ ಕುಮಾರ್, ಉದಯ ಕುಮಾರ್ ಮತ್ತು ಜಯಪ್ರಕಾಶ ಹಬ್ಬು ಕನ್ನಡ ಸಾಹಿತ್ಯ ಲೋಕದಲ್ಲಿ ಗಮನೀಯ ಸಾಧನೆ ಮಾಡಿದ್ದಾರೆ. ಅನೇಕ ವರ್ಷಗಳಿಂದ ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇತ್ತೀಚೆಗೆ ನಾನು ಓದಿರುವ ಪುಸ್ತಕ ಜಯಪ್ರಕಾಶ ಹಬ್ಬುರವರ ಆತ್ಮಾವಲೋಕನ ‘ನೆನಪಿನ ಜರಡಿಯಲ್ಲಿ.’ ಹಳದೀಪುರದಲ್ಲಿ ಕಳೆದ ಬಾಲ್ಯದ ನೆನಪಿನಿಂದ ಆರಂಭವಾಗಿ ಕಾರವಾರ, ಗೋವಾದ ನೆಲದ ಬದುಕಿನ ನಿರೀಕ್ಷೆ, ನಿರಾಸೆಯೆಡೆಗೆ ತಿರುವು ಪಡೆದ ಅನುಭವವನ್ನು ಮೈಗೂಡಿಸಿಕೊಂಡ ಜಯಪ್ರಕಾಶರ ಆತ್ಮಾವಲೋಕನ ಬಿದ್ರಳ್ಳಿಯ ಹಸಿರಿನ ಮಡಿಲಲ್ಲಿ ಸುಖಾಂತ್ಯ ಪಡೆಯುತ್ತದೆ.
ಬದುಕಿನ ಪ್ರಮುಖ ಘಟ್ಟದಲ್ಲಿ ಎದುರಾದ ಸೋಲನ್ನು ಸವಾಲಾಗಿ ಸ್ವೀಕರಿಸಿ ಯಶಸ್ಸು ಗಳಿಸಿದ ಜಯಪ್ರಕಾಶರ ‘ಹೋರಾಟ’ ಗಮನ ಸೆಳೆಯುತ್ತದೆ. ಎರಡು ಭಾಗಗಳಲ್ಲಿ ರಚಿತವಾಗಿರುವ ಈ ಪುಸ್ತಕ ಮೂವತ್ತೈದು ಅಧ್ಯಾಯಗಳನ್ನು ಒಳಗೊಂಡಿದೆ. ಹಬ್ಬುರವರು ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಅನೇಕ ಅಂಶಗಳು ಗಮನಸೆಳೆಯುತ್ತವೆ. ಹಾಗೆಯೇ, ಹೇಳದಿದ್ದರೂ ಪರವಾಗಿರಲಿಲ್ಲ ಎನ್ನುವ ಕೆಲವು ವಿಷಯಗಳೂ ಇವೆ. ಆದರೆ ಓದಿನ ಓಟಕ್ಕೆ ಅವು ತಡೆಯಾಗುವುದಿಲ್ಲ.
ಖ್ಯಾತ ಕತೆಗಾರ, ಕಾದಂಬರಿಕಾರ ಶ್ರೀ ಶ್ರೀಧರ ಬಳಗಾರರು ಬೆನ್ನುಡಿಯಲ್ಲಿ ತಿಳಿಸುವಂತೆ, ‘ವ್ಯಕ್ತಿಯ ಖಾಲಿ ಬದುಕಿನ ಹಿತ್ತಲ ಕಿಟಕಿ ತೆರೆದು ಗುಟ್ಟಾಗಿ ಇಣುಕುವಂತೆ ಒತ್ತಾಯಿಸುವ ರೋಚಕತೆ ಹಬ್ಬುರವರ ಬರೆಹಕ್ಕಿಲ್ಲ; ಅನುಭವದ ಪ್ರಾಮಾಣಿಕ, ನಿರರ್ಗಳ, ನಿರಹಂಕಾರ ನಿರೂಪಣೆಯೇ ಆತ್ಮನಿಂದೆ ಮತ್ತು ಪ್ರಶಂಸೆಯ ಅಪಾಯದಿಂದ ಅವರನ್ನು ಪಾರು ಮಾಡಿದೆ. ನಿರೂಪಕ ಆತ್ಮಕೇಂದ್ರಿತ ವಿಭವದಲ್ಲಿ ವಿಜೃಂಭಿಸದೇ ಆತ್ಮೀಯರನ್ನು ನೆನಪಿನ ಮುನ್ನಲೆಗೆ ತಂದು ಪರಿಚಯಿಸುವ ಮತ್ತು ನೋಯಿಸಿದವರನ್ನು, ಅವಮಾನಿಸಿದವರನ್ನು ಪ್ರತೀಕಾರದಲ್ಲಿ ಕಾಣದ ವಿಶೇಷ ಗುಣದಿಂದ ಗಮನ ಸೆಳೆಯುತ್ತಾರೆ.
‘ದೀರ್ಘ ಕಾಲ ಅಲೆಮಾರಿ ಬದುಕಿನಲ್ಲಿ ಜಯಪ್ರಕಾಶ ಹಬ್ಬುರವರು ಮುದ್ರಕ, ಗುತ್ತಿಗೆದಾರ, ಬಿಲ್ಡರ್, ಕೃಷಿಕರಾಗಿ ಹಲವಾರು ಊರುಗಳನ್ನು ಸುತ್ತಾಡಿದರು ಮತ್ತು ವಿವಿಧ ಬಗೆಯ ಜನರ ಸಂಪರ್ಕದಲ್ಲಿ ಹಲವು ಅನುಭವವನ್ನು ಪಡೆದುಕೊಂಡರು. ಅವರ ಜೀವನ ಪಯಣ ಕುತೂಹಲ ಕೇಂದ್ರಿತ. ಕಿರಿಯನಾಗಿ, ಅವರ ಮುಂದಿನ ಬದುಕಿಗೆ ಮತ್ತು ಸಾಹಿತ್ಯ ಯಾನಕ್ಕೆ ಶುಭ ಹಾರೈಸುವೆ..
0 ಪ್ರತಿಕ್ರಿಯೆಗಳು