ಅನುಷ್ ಶೆಟ್ಟಿ
ನಿನ್ನೆ ಅರಣ್ಯಕಾಂಡ ಶೋ ಮುಗೀತಲ್ಲ.. ಹಾಗಾಗಿ ಇಂದು ನಾಗರಾಜ್ ಮೇಷ್ಟ್ರಿಗೆ ಕರೆ ಮಾಡಿ, ಅವರನ್ನು ನನ್ನ ತಬಲಗಳನ್ನೊಮ್ಮೆ ಭೇಟಿಯಾಗಲು ಕರೆತಂದೆ. ವರ್ಷಕ್ಕೆ ಒಂದೆರಡು ಸಾರಿ ಹೀಗೆ ಮಾಡುವುದು ನನ್ನ ವಾಡಿಕೆ.. ಹಾಗಾಗಿ ಅವರು ನನ್ನ ತಬಲಗಳ ಡಾಕ್ಟರ್..!ನಾಗರಾಜ್ ಮೇಷ್ಟ್ರು ನನ್ನ ಮೊದಲ ತಬಲ ಗುರು. ಸುಮಾರು ಇಪ್ಪತ್ತೈದು ವರ್ಷದ ಹಿಂದೆ ಅವರು ಹುಣಸೂರಿನಲ್ಲಿ ತಬಲ ತರಗತಿ ಆರಂಭಿಸಿದಾಗ ಕಲಿಯಲು ಸೇರಿದವನು ನಾನು. ಅವರು ವಾರದಲ್ಲಿ ಒಂದೇ ದಿನ, ಅದು ಗುರುವಾರ ಮೈಸೂರಿನಿಂದ ಬರುತ್ತಿದ್ದರು. ನಾವು ಹತ್ತು ಹನ್ನೆರಡು ಮಂದಿ ಕಲಿಯುತ್ತಿದ್ದೆವು. ಅವರು ಹೇಳಿಕೊಟ್ಟ ಪಾಠವನ್ನು ವಾರವಿಡೀ ನಾವು ಅಭ್ಯಾಸ ಮಾಡಿಯೂ, ಅವರು ಬಂದಾಗ ಅದನ್ನೇನಾದರು ಸರಿಯಾಗಿ ನುಡಿಸದಿದ್ದರೆ ಇನ್ನೊಂದ್ ವಾರ ಇದನ್ನೇ ಕಲೀರೊ ಎನ್ನುತ್ತಿದ್ದರು. ಹೀಗೇ ಐದು ವರ್ಷ ಕಳೆದಮೇಲೆ ಒಂದು ಗುರುವಾರ ಅವರು ಬರಲಿಲ್ಲ. ಒಂದು ತಿಂಗಳೇ ಬರಲಿಲ್ಲ. ಆಗೆಲ್ಲ ಹೀಗೆ ಮೊಬೈಲ್ ಫೋನ್ಗಳು ಇರಲಿಲ್ಲ.
ನಂತರ ಒಂದು ವರ್ಷವೇ ಅವರು ಬರಲಿಲ್ಲ. ನಂತರ ಒಂದು ಗುರುವಾರ ಹಾಗೆಯೆ ಬಂದುಬಿಟ್ಟರು. ನಾನು ಮತ್ತು ಗುರುದತ್ ಇನ್ನೂ ಅಲ್ಲಿದ್ದೆವು. ನಮಗೆ ಏನು ಮಾಡುವುದೆಂದು ತೋಚದೆ ಒಂದು ವರ್ಷವಿಡೀ ಸಂಜೆ ಭಜನೆಗಳಿಗೆ ತಬಲ ನುಡಿಸುತ್ತ ಕಳೆದಿದ್ದೆವು..! ಮೇಷ್ಟ್ರಿಗೆ ಏನನಿಸಿತೋ.. ಪಪ್ಪನ ಬಳಿ ‘ಇವ್ನಿಗೆ ಆಸಕ್ತಿ ಇದೆ. ನನಗೆ ಹುಣಸೂರಿಗೆ ಬಂದು ಕಲಿಸೋಕ್ಕೆ ಸಮಯ ಸಾಲ್ತಿಲ್ಲ. ನೀವೊಂದು ಕೆಲಸ ಮಾಡಿ.. ಮೈಸೂರಲ್ಲಿ ನನ್ನ ಗುರುಗಳಿದಾರೆ. ಶಿವಶಂಕರ್ ಸರ್ ಅಂತ. ಇವ್ನನ್ನ ಇನ್ಮೇಲೆ ವೀಕೆಂಡ್ ಅವ್ರ ಹತ್ರ ಕಳಿಸಿ. ಕಲೀಲಿ’ ಎಂದರು. ಮುಂದಿನ ಹತ್ತು ವರ್ಷ ನಾನು ಶಿವು ಸರ್ ಬಳಿಯೆ ಕಲಿತದ್ದು. ಆ ಕಲಿಕೆಯ ಅಗಾಧತೆ ಬೇರೆಯೇ.. ನಾಗರಾಜ್ ಮೇಷ್ಟ್ರೂ ಅಲ್ಲಿರುತ್ತಿದ್ದರು.
ಪ್ರತಿ ಭಾನುವಾರ ಐದುವರೆಗೆ ಹುಣಸೂರಿನಲ್ಲಿ ಬಸ್ ಹತ್ತು, ಮೈಸೂರಿನ ರಾಮಸ್ವಾಮಿ ಸರ್ಕಲ್ಲಿನಲ್ಲಿ ಇಳಿ, 94ನಂಬರಿನ ಸಿಟಿ ಬಸ್ ಹತ್ತು, ವಿವೇಕಾನಂದ ಸರ್ಕಲ್ಲಿನಲ್ಲಿ ಇಳಿ, ಸರ್ ಮನೆಗೆ ಹೋಗಿ ಪಾಠ ಮುಗಿಸಿಕೊ, ಮತ್ತೆ vice versa. ನನ್ನ ಪಾಲಿಗೆ ಮೈಸೂರು ಎಂದರೆ ಇಷ್ಟೆ ಆಗಿತ್ತು. ಶಾಲೆಯ ದಿನಗಳೆಲ್ಲ ಹೀಗೆ ಕಳೆದಮೇಲೆ, ಮುಂದೆ ಕಾಲೇಜಿಗೆ ಮೈಸೂರಿಗೆ ಸೇರಿದಾಗ ಇದೆಲ್ಲ ಸುಲಭವಾಯಿತು. ಈಗ ಎಷ್ಟೋ ವರ್ಷಗಳು ಕಳೆದರೂ ಕೆಲವೊಮ್ಮೆ ಹೀಗೇ ನಾಗರಾಜ್ ಮೇಷ್ಟ್ರು ಬೇಕೆನಿಸಿಬಿಡುತ್ತಾರೆ. ತಬಲ ವೈದ್ಯರ ನೆಪದಲ್ಲಿ ಕರೆಯುತ್ತೇನೆ. ತಬಲಗಳ ಬಗೆಗಿನ ಅವರ ಅರಿವು ಅಪಾರ. ಇಂದೂ ಕರೆದೆ. ಒಂದೊಂದು ತಬಲಾದ ಚರ್ಮ, ಮರ, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರು. ಸಣ್ಣಪುಟ್ಟ damage ಗಳನ್ನು ತೋರಿಸಿ ಬೈದರು. ಒಂದಷ್ಟು ತಬಲಗಳನ್ನು ರಿಪೇರಿಗೆ ಕೊಂಡೊಯ್ದರು. ನನಗೆ ಖುಷಿ, ಸಮಾಧಾನವೆಲ್ಲ ಆಯಿತು. ಹಾಗಾಗಿ 26ರ ಉಡುಪಿ ಶೋ ಗೆ ಮೇಷ್ಟ್ರಿಂದ ಆಗಾಗ ರಿಪೇರಿಯಾಗುವ ನನ್ನ ತಬಲಗಳು ಮತ್ತು ನಾನು ಇಬ್ಬರೂ ವೇದಿಕೆಯಲ್ಲಿರಲಿದ್ದೇವೆ.
0 ಪ್ರತಿಕ್ರಿಯೆಗಳು