ನಾಗರಾಜ ಬಸರಕೋಡ ಕವಿತೆ- ಹೀಗೆ ನಡೆಯಬೇಕು…

ನಾಗರಾಜ ಬಸರಕೋಡ

ನಾವಿಬ್ಬರೂ ಕೈ-ಕೈ ಹಿಡಿದು
ಹೀಗೆ ನಡೆಯಬೇಕಲ್ಲ !
ಶಿವಶಿವೆಯರು ನಮ್ಮ
ನೋಡಲೆಂದು ಇಳೆಗಿಳಿದು ಬರಬೇಕು
ಕೃಷ್ಣ-ರಾಧೆಯರು ತುಸು ಅಸೂಯೆಪಡಬೇಕು

ನಾವಿಬ್ಬರೂ ಕೈ-ಕೈ ಹಿಡಿದು
ಹೀಗೆ ನಡೆಯಬೇಕಲ್ಲ
ಆ ರೂಮಿ ಇದ್ದಾನೆ ನೋಡು !
ಜಲಾಲುದ್ದೀನು
ಅವ ನಮ್ಮ ಬಗೆಯ ಬನ್ನಿಸೆ
ಹೊಸ ಪದಗಳು ಸಿಗದೆ ಕೈ-ಕೈ ಹಿಸುಕಿಕೊಳ್ಳಬೇಕು
ಕಾಳಿದಾಸ ಮತ್ತೊಂದು
ಮೇಘದೂತಕ್ಕೆ ಅಣಿಯಾಗಬೇಕು

ನಾವಿಬ್ಬರೂ ಕೈ-ಕೈ ಹಿಡಿದು ಹೀಗೆ ನಡೆಯಬೇಕಲ್ಲ
ಈ ಭೂಮಿ ಆ ಬಾನಿಗಿದು
ಸಾಧ್ಯವಾಗದ್ದಕ್ಕೆ ಕನಲಿ ಕರುಬಬೇಕು
ಉರಿದುರಿದೇ ಒಬ್ಬಂಟಿ ತಿರುಗುತ್ತ
ಆಯು ಕಳೆದ ಸೂರ್ಯ
ಪಶ್ಚಾತ್ತಾಪದಲಿ ಸಮುದ್ರಕೆ ಬಿದ್ದು ಸಾಯಲೆತ್ನಿಸಬೇಕು

ನಾವಿಬ್ಬರೂ ಕೈ-ಕೈ ಹಿಡಿದು
ಹೀಗೆ ನಡೆಯಬೇಕಲ್ಲ !
ಇಳಿವ ಮಳೆಗೂ,ಇಳೆಯ ಪುಳಕಕೂ
ಹೊಸ ವ್ಯಾಖ್ಯಾನ ಸಿಕ್ಕು
ಝುಮ್ಮೆನೆ ಒಲವು
ಹಸಿರೊಡೆಯಬೇಕು
ಸೋತ ರೆಕ್ಕೆ, ಬತ್ತಿದ ಕಂಗಳು
ಬರಡೆದ್ದ ಎದೆಗಳಲ್ಲಿ
ತೇವ ಜಿನುಗಿ
ಪ್ರೇಮವೆಂಬ ಸಂಜೀವಿನಿಯ ಸಾಕ್ಷೀಕರಿಸಬೇಕು

ನಾವಿಬ್ಬರೂ ಕೈ-ಕೈ ಹಿಡಿದು
ಹೀಗೆ ನಡೆಯಬೇಕಲ್ಲ
ಪ್ರೇಮದಲಿ ಸತ್ತವರಿಗಾಗಿ
ಎಚ್ಚೆತ್ತು ಮಿಡಿಯಬೇಕು ಮತ್ತಾ
ದೇವರು ಕಣ್ಣೀರು ಹಾಕಬೇಕು
ಕೈಯೊಳಗಿನ ಪಾಶ ಬಿಸುಟು
ಕೊಲುವ ಕಾಯಕದ ಕಾಲನು
ಗುಲಾಬಿ ಹಿಡಿದು ಹೊರಡಬೇಕು.

‍ಲೇಖಕರು avadhi

March 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: