ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗರಾಜ್ ಹರಪನಹಳ್ಳಿ ಕವಿತೆ- ಊರಲ್ಲೆಲ್ಲಾ ಗುಲ್ಲು ಹಬ್ಬಿತು

ನಾಗರಾಜ್ ಹರಪನಹಳ್ಳಿ

-೧-
ತುಂಬ ದಿನಗಳ
ನಂತರ ನೀ ಭಾವಚಿತ್ರ
ಕಳುಹಿಸಿದೆ
ಅದು ಭಾವಗಳ ಬಡಿದೆಬ್ಬಿಸಿತು

-೨-
ತುಂಬಾ ದಿನಗಳ ನಂತರ
ಮಲ್ಲಿಗೆ ಹೂ ಮುಡಿದೆ
ಪ್ರತಿ ಹೂ ನನ್ನ ಮಾತಾಡಿಸಿತು
ಹೂ ಗಂಧ ಮನವ ತುಂಬಿ
ಊರಲ್ಲೆಲ್ಲಾ ಗುಲ್ಲು ಹಬ್ಬಿತು

-೩-
ಮೌನದಲ್ಲಿ ಧ್ಯಾನಿಸುತ್ತಿದ್ದ ನೀ
ಮಾತಾಡಲು ಶುರು ಮಾಡಿದೆ
ಎದೆಯ ತರಂಗಗಳು
ಅರುಣರಾಗ ಮಿಡಿದವು

-೪-
ಕಣ್ಣು ಕಣ್ಣು ಮಾತಾಡುವುದ
ಮರೆತಿದ್ದವು
ಒಂದೇ ಒಂದು ಚಿತ್ರ ಮಾತ್ರದಿಂದ
ಮಾತುಗಳು ಮರುಜನ್ಮ ಪಡೆದವು

-೫-
ಬೇಗಂ ,ನಿನ್ನ ಕಿವಿಗಳ ಅಂಚಿಗೆ
ತೂಗುವ ಗೋಪುರದಂಥ
ಕಿವಿಯೋಲೆ
ಗುಂಬಜ್ ನೆನಪಿಸಿದವು
ಅಲ್ಲಿ ಪ್ರೇಮವೇ ಜೋಕಾಲಿಯಲಿ
ನಲಿದಂತಾಯಿತ

-೬-
ಅದೆಷ್ಟೋ ದಿನಗಳಾದರೂ
ಒಂದೇ ಒಂದು ಕಣ್ಣೋಟ
ಬಂಧವ ಬೆಸೆದವು
ಕಣ್ಣೊಳಗಿನ ಬಿಂಬ ನಮ್ಮವೇ ಆಗಿದ್ದವು

-೭-
ತುಟಿಯಂಚಿನ ಸಿವಿಮಾತು
ನಮ್ಮ ಬೆಸೆದವು,
ಈ ಪ್ರೇಮವ ಕುರಿತು
ಗಿಡಮರದ ಕುಳಿತ
ಹಕ್ಕಿ ಪಕ್ಷಿಗಳು ಆಡಿಕೊಂಡವು

-೮-
ನನಗೆ ಒಂದೇ ದಿಗಿಲು !!!
ನಿನ್ನ ಸೀರೆಯ ಬಣ್ಣ ಮುಗಿಲಿಗೆ ತಾಗಿದೆ; ಅದು ಮೋಡಗಳಿಗೆ ಬಣ್ಣ ಬಳಿದಿದೆ ;
ಮೋಡ ಮಳೆಯಾಗಿ ನಿನ್ನೂರಲ್ಲಿ ಸುರಿದರೆ
ಪ್ರೇಮದ ಗುಲ್ಲು ನಿನ್ನೂರ
ಬೀದಿಗಳ ತಬ್ಬಿದರೆ ???

-೯-
ಇನ್ನೊಂದು ಆತಂಕ
ನಿನ್ನ ಪಾದಗಳ ಗೆಜ್ಜೆಗಳು
ನನ್ನನ್ನೇ ನೆನಪಿಸುತ್ತವೆ ಅಂತೆ
ಅವುಗಳ ಪಿಸುಮಾತು
ಬೀದಿರಂಪ ಮಾಡಿದರೆ ???

-೧೦-
ಒಂದೇ ಒಂದು ಆಶಾವಾದ ;
ಎಲ್ಲಾ ಗುಲ್ಲುಗಳಿಗೆ
ನೀ ನಕ್ಕು ತೇಲಿಸಿ ಬಿಡುವೆ;
ಹೃದಯದಿ ಮನದ ಮಾತ
ಭದ್ರವಾಗಿ ಕಾಪಾಡು

‍ಲೇಖಕರು Admin

5 July, 2021

1 Comment

  1. ನೂತನ ದೋಶೆಟ್ಟಿ

    ಅರೆರೆ… ನಾಗರಾಜ್
    ಫ್ರೆಶ್ನೆಸ್ ಹಾಗೂ ಲವಲವಿಕೆಯಿಂದ ಕೂಡಿ ಮಂದಹಾಸ ಮೂಡಿಸುತ್ತವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading